ವಾಯುವ್ಯ ದೆಹಲಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದ ಸೂಫಿ ಗಾಯಕ
ನವದೆಹಲಿ, ಏಪ್ರಿಲ್ 23: ದೆಹಲಿ ವಾಯುವ್ಯ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಜನಪ್ರಿಯ ಸೂಫಿ ಗಾಯಕ ಹನ್ಸ್ ರಾಜ್ ಹನ್ಸ್ ಅವರು ಇಂದು ನಾಮಪತ್ರ ಸಲ್ಲಿಸಿದರು. ಸಂಸದ ಉದಿತ್ ರಾಜ್ ಅವರ ಬದಲಿಗೆ ಹನ್ಸ್ ರಾಜ್ ಅವರ ಹೆಸರನ್ನು ಮಂಗಳವಾರದಂದು ಅಂತಿಮಗೊಳಿಸಿ, ಪ್ರಕಟಿಸಲಾಗಿತ್ತು.
ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ, ಗಾಯಕ ಹನ್ಸ್ ರಾಜ್ ಹನ್ಸ್ ಅವರು, ನಾನು ಚಿಕ್ಕಂದಿನಿಂದಲೂ ಹೋರಾಟ ನಡೆಸುತ್ತಾ ಬಂದಿದ್ದೇನೆ, ನಾನು ಗೆಲ್ಲಲೇ ಬೇಕಿದೆ. ತೋಟದ ಕಾರ್ಮಿಕನ ಮಗನಾಗಿ ನಾನು ಪರಿಶ್ರಮದಿಂದ ಈ ಹಂತಕ್ಕೇರಿದ್ದೇನೆ. ಪ್ರಧಾನಿ ಮೋದಿ ಅವರು ನನ್ನ ಹೀರೋ ಎಂದರು.
ವಿಶೇಷ ಪುಟ | ಲೋಕಸಭಾ ಚುನಾವಣೆ 2019
ಈ ಬಗ್ಗೆ ಮುಂಚಿತವಾಗಿ ಸುಳಿವು ಪಡೆದಿದ್ದ ಉದಿತ್ ರಾಜ್ ಅವರು ಸೋಮವಾರದಂದು ಟ್ವೀಟ್ ಮಾಡಿ ತಮ್ಮ ದುಃಖ ತೋಡಿಕೊಂಡಿದ್ದರು. ಅಮಿತ್ ಶಾ ಜೀ, ನಾನು ನಿಮ್ಮೊಂದಿಗೆ ಮಾತನಾಡಲು ಹಲವು ಬಾರಿ ಯತ್ನಿಸಿದೆ. ನಿಮಗೆ ಎಸ್ಎಂಎಸ್ ಕೂಡಾ ಕಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂಪರ್ಕಿಸಲು ಯತ್ನಿಸಿದೆ. ಮನೋಜ್ ತಿವಾರಿ ಅವರು ಕೂಡಾ ನನಗೆ ಟಿಕೆಟ್ ಸಿಗಲಿದೆ ಎಂದು ಭರವಸೆ ನೀಡಿದ್ದರು. ನಿರ್ಮಲಾ ಸೀತಾರಾಮನ್ ಅವರನ್ನು ಸಂಪರ್ಕಿಸಲು ಯತ್ನಿಸಿದೆ, ಅರುಣ್ ಜೇಟ್ಲಿ ಅವರಿಗೂ ಮನವಿ ಮಾಡಿದೆ' ಎಂದು ಬರೆದುಕೊಂಡಿದ್ದಾರೆ.
ನನಗೆ ಟಿಕೆಟ್ ಸಿಗದಿದ್ದರೆ ದಲಿತರಿಗೆ ಆಗುವ ಅನ್ಯಾಯ ಎಂದು ಕಾರ್ಯಕರ್ತರು ಘೋಷಣೆ ಕೂಗುತ್ತಿದ್ದಾರೆ. ದಲಿತರಿಗೆ ಬಿಜೆಪಿ ಅನ್ಯಾಯ ಮಾಡುವುದಿಲ್ಲ ಎಂಬ ನಂಬಿಕೆ ಇದೆ ಎಂದು ಟ್ವೀಟ್ ಮಾಡಿದ್ದರು. 2014ರಲ್ಲಿ ರಾಜ್ ಅವರು ಆಮ್ ಆದ್ಮಿ ಪಕ್ಷ (ಎಎಪಿ)ದ ರಾಖಿ ಬಿರ್ಲಾ ಅವರನ್ನು ಒಂದು ಲಕ್ಷಕ್ಕೂ ಅಧಿಕ ಅಂತರದಿಂದ ಸೋಲಿಸಿದ್ದರು. ವಾಯುವ್ಯ ದೆಹಲಿ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ಸಿನಿಂದ ರಾಜೇಶ್ ಲಿಲೊಥಿಯಾ ಸ್ಪರ್ಧಿಸುತ್ತಿದ್ದಾರೆ.