ಚುನಾವಣಾ ಸೋಲಿಗೆ ಕಾರಣ ಹೊರಹಾಕಿದ ನಿಖಿಲ್, ತಮ್ಮವರ ವಿರುದ್ಧವೇ ಅಸಮಾಧಾನ
ತುಮಕೂರು, ನವೆಂಬರ್ 18: ಲೋಕಸಭೆ ಚುನಾವಣೆ ಮುಗಿದು ಏಳು ತಿಂಗಳ ನಂತರ ತಮ್ಮ ಸೋಲಿನ ಬಗ್ಗೆ ವಿಶ್ಲೇಷಣೆ ಮಾಡಿರುವ ನಿಖಿಲ್ ಕುಮಾರಸ್ವಾಮಿ, ಚುನಾವಣಾ ಸೋಲಿಗೆ ತಮ್ಮವರೇ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.
ತುಮಕೂರಿನಲ್ಲಿ ನಿನ್ನೆ ಸಂಜೆ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿರುವ ನಿಖಿಲ್ ಕುಮಾರಸ್ವಾಮಿ, 'ನಮ್ಮವರೇ ಕೆಲವು ಹಿತ ಶತ್ರುಗಳಿಂದ ನಾನು ಸೋತೆ' ಎಂದು ಹೇಳಿದ್ದಾರೆ.
''ಚುನಾವಣೆಯ ವೇಳೆ ಹಿತ ಶತ್ರುಗಳ ಬಗ್ಗೆ ಎಚ್ಚರವಿರಲಿ'' ಎಂದು ನಮ್ಮ ತಾತ ದೇವೇಗೌಡ ಅವರು ಹೇಳುತ್ತಿದ್ದರು. ಅಂತಹವರಿಂದಲೇ ನನಗೆ ಮೋಸವಾಯಿತು' ಎಂದ ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಪಕ್ಷದವರಿಂದಲೇ ತಮಗೆ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸೋಲುಂಟಾಯಿತು ಎಂದು ಪರೋಕ್ಷವಾಗಿ ಹೇಳಿದ್ದಾರೆ.

'ಚುನಾವಣೆ ಸಮಯದಲ್ಲಿ ಋಣಾತ್ಮಕ ಹೇಳಿಕೆ ಕೊಡಬಾರದೆಂದು ಸುಮ್ಮನೇ ಇದ್ದೆ. ವಿವಾದಾತ್ಮಕವಾಗಿ ಮಾತನಾಡಾರದೆಂದು ನಾಲಿಗೆ ಕಚ್ಚಿ ಹಿಡಿದಿದ್ದೆ. ಆದರೆ ನಮ್ಮ ಸುತ್ತಮುತ್ತ ಇರುವವರನ್ನು ನಿಯಂತ್ರಿಸಲು ಆಗಲಿಲ್ಲ' ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ನಿಖಿಲ್ ಕುಮಾರಸ್ವಾಮಿ ಅವರು ಮಂಡ್ಯ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಎದುರಾಳಿ ಸುಮಲತಾ ಅಂಬರೀಶ್ ವಿರುದ್ಧ ಸೋಲನುಭವಿಸಿದ್ದರು. ಚುನಾವಣೆ ಸಂದರ್ಭ ಕುಮಾರಸ್ವಾಮಿ, ಎಚ್.ಡಿ.ರೇವಣ್ಣ ಸೇರಿದಂತೆ ಎಲ್.ಆರ್.ಶಿವರಾಮೇಗೌಡ ಮತ್ತಿತರರು ನೀಡಿದ ವಿವಾದಾತ್ಮಕ ಹೇಳಿಕೆಗಳು ನಿಖಿಲ್ ಗೆ ಮುಳುವಾಗಿದ್ದವು. ನಿಖಿಲ್ ಕುಮಾರಸ್ವಾಮಿ ವಿರುದ್ಧ ಸುಮಲತಾ ಅವರು 1.25 ಲಕ್ಷ ಮತಗಳ ಅಂತರದಿಂದ ಜಯಗಳಿಸಿದರು.












Click it and Unblock the Notifications