ಮೈಸೂರು; ಲಾಕ್ಡೌನ್ನಲ್ಲಿ ಜೆಸಿಬಿ ಘರ್ಜನೆ, ಅಕ್ರಮ ಕಟ್ಟಡ ತೆರವು
ಮೈಸೂರು, ಜೂನ್ 04; ನಂಜನಗೂಡು ನಗರದಲ್ಲಿ ನಾಲೆಗಳ ಮೇಲೆಯೇ ಅಕ್ರಮವಾಗಿ ಕಟ್ಟಡ ನಿರ್ಮಿಸಿ ಅಂಗಡಿ, ಹೋಟೆಲ್ ನಡೆಸುತ್ತಿದ್ದವರಿಗೆ ಲಾಕ್ಡೌನ್ ವೇಳೆಯಲ್ಲಿ ತೆರವುಗೊಳಿಸಿ ಶಾಕ್ ನೀಡಲಾಗಿದೆ.
ಕಳೆದ ಹಲವು ವರ್ಷಗಳಿಂದ ನಂಜನಗೂಡು ನಗರದ ಕಾವೇರಿ ನೀರಾವರಿ ಇಲಾಖೆಗೆ ಸೇರಿದ ನಾಲೆ ಮೇಲೆ ಹಾಕಲಾಗಿದ್ದ ಕವರ್ ಡೆಕ್ ಮೇಲೆಯೇ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಿ ಅಲ್ಲಿ ಗೋಬಿ ಮಂಚೂರಿ, ಚಿಕನ್ ಅಂಗಡಿ, ಹೋಟೆಲ್, ಗೂಡಂಗಡಿ, ಹೀಗೆ ವಿವಿಧ ರೀತಿಯ ವ್ಯಾಪಾರ ವಹಿವಾಟುಗಳನ್ನು ನಡೆಸಲಾಗುತ್ತಿತ್ತು.
ಅಂಗಡಿಗಳನ್ನು ಅಲ್ಲಿಂದ ತೆರವುಗೊಳಿಸುವುದು ಕೂಡ ನಗರ ಸಭೆಗೆ ತಲೆನೋವಾಗಿ ಪರಿಣಮಿಸಿತ್ತು.
ಇದೀಗ ಲಾಕ್ಡೌನ್ ಸಮಯದಲ್ಲಿ ಯಾವುದೇ ವ್ಯಾಪಾರ ವಹಿವಾಟು ಇಲ್ಲದ ಕಾರಣ ಮತ್ತು ಜನ ಗುಂಪು ಸೇರದ ಹಿನ್ನಲೆಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ಕಾವೇರಿ ನೀರಾವರಿ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಅಕ್ರಮ ಕಟ್ಟಡಗಳನ್ನು ತೆರೆವು ಗೊಳಿಸಿದ್ದು ಆ ಮೂಲಕ ಬಹಳಷ್ಟು ವರ್ಷಗಳಿಂದ ಬಗೆಹರಿಯದೆ ಉಳಿದಿದ್ದ ಸಮಸ್ಯೆಗೆ ಪರಿಹಾರ ದೊರೆತಂತಾಗಿದೆ.
ಹಾಗೆ ನೋಡಿದರೆ ಕಾವೇರಿ ನೀರಾವರಿ ಇಲಾಖೆಗೆ ಸೇರಿದ ನಾಲೆ ಮೇಲೆಯೇ ಗೋಬಿ ಮಂಚೂರಿ, ಚಿಕನ್ ಅಂಗಡಿಗಳು, ಬೀಡಿ ಅಂಗಡಿ, ಮಿಲಿಟರಿ ಹೋಟೆಲ್ಗಳು ತಲೆ ಎತ್ತಿದದ್ದವು. ಅದರ ಜೊತೆಗೆ ಕಬಾಬ್ ಅಂಗಡಿಗಳು ಇದ್ದುದರಿಂದ ಕುಡುಕರು ಕುಡಿದು ಅಲ್ಲಿಯೇ ಮಲಗುತ್ತಿದ್ದರು.
ಇದು ಹೀಗೆಯೇ ಮುಂದುವರೆದರೆ ನಾಲೆಗೂ ಹಾನಿ ಆಗುವ ಸಾಧ್ಯತೆ ಇತ್ತು. ನೀರಾವರಿ ಇಲಾಖೆಗೆ ಕೂಡ ಇದೊಂದು ಸಮಸ್ಯೆಯಾಗಿ ಪರಿಣಮಿಸಿತ್ತು. ಹೀಗಾಗಿ ಅವರು ಪೊಲೀಸ್ ಇಲಾಖೆ ಮತ್ತು ನಗರಸಭೆಗೆ ಪತ್ರ ಬರೆದು ಕಟ್ಟಡಗಳನ್ನು ತೆರವು ಮಾಡುವಂತೆ ಮನವಿ ಮಾಡಿದ್ದರು.

ಕಾವೇರಿ ನೀರಾವರಿ ಇಲಾಖೆ ಅಧಿಕಾರಿಗಳ ಮನವಿಗೆ ಸ್ಪಂದಿಸಿದ ನಗರಸಭೆ ಮತ್ತು ಪೊಲೀಸ್ ಇಲಾಖೆ ಶುಕ್ರವಾರ ಜೆಸಿಬಿಯಿಂದ ಬೆಳ್ಳಂಬೆಳಗ್ಗೆ ಅಂಗಡಿಗಳನ್ನು ತೆರವುಗೊಳಿದ್ದು, ಈ ವೇಳೆ ಕೆಲವರು ತಡೆಯೊಡ್ಡುವ ಪ್ರಯತ್ನ ಮಾಡಿದರೂ ಅದಕ್ಕೆ ಸೊಪ್ಪು ಹಾಕದೆ ತೆರವು ಕಾರ್ಯವನ್ನು ಮುಂದುವರೆಸಲಾಯಿತು.
ನಗರಸಭೆ ಆಯುಕ್ತ ರಾಜಣ್ಣ ಮಾತನಾಡಿ, "ಅಕ್ರಮ ಕಟ್ಟಡಗಳು ಬಹಳ ವರ್ಷಗಳ ಹಿಂದೆಯೇ ತಲೆ ಎತ್ತಿದ್ದು, ಇವುಗಳಿಂದ ಬಹಳ ತೊಂದರೆ ಯಾಗುತ್ತಿತ್ತು. ಇದನ್ನೆಲ್ಲ ಅರಿತು ತೆರವು ಗೊಳಿಸಲಾಗಿದೆ. ಹಾಗೆಯೇ ನಗರದ ಸುಭಾಷ್ ಪಾರ್ಕ್ ನಲ್ಲಿರುವ ತರಕಾರಿ ಮಳಿಗೆ ಹಾಗೂ ಮಟನ್ ಮಳಿಗೆಗಳನ್ನು ಲಾಕ್ಡೌನ್ ಕಳೆದ ನಂತರ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು. ಇದಲ್ಲದೆ ಮಟನ್ ಮಾರ್ಕೆಟ್ ಮಳಿಗೆಗಳನ್ನು ಬೇರೆ ಕಡೆ ಸ್ಥಳಾಂತರ ಮಾಡಲಾಗುವುದು" ಎಂದು ಹೇಳಿದರು.












Click it and Unblock the Notifications