ಮೈಸೂರು ಅರಮನೆಯಲ್ಲಿ ಗತವೈಭವದ ಆಯುಧಪೂಜೆ !
ಆಯುಧ ಪೂಜೆಯನ್ನು ಎಲ್ಲೆಡೆ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಪಾರಂಪರಿಕ ನಗರಿ ಮೈಸೂರಿನಲ್ಲಿ ಆಯುಧಪೂಜೆಯ ಸಂಭ್ರಮ ಕಳೆಕಟ್ಟಿದೆ. ಅದರಲ್ಲೂ ರಾಜಪರಂಪರೆಯನ್ನು ಜಗತ್ತಿಗೆ ಸಾರುತ್ತಿರುವ ಅರಮನೆಯಲ್ಲಿ ಹಿಂದಿನ ಕಾಲದಲ್ಲಿ ಮಹಾರಾಜರು ಹೇಗೆ ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಾ ಬರುತ್ತಿದ್ದರೋ ಅದೇ ರೀತಿಯಲ್ಲಿ ಇಂದಿಗೂ ಆಯುಧ ಪೂಜೆ ನಡೆಯುತ್ತಿರುವುದು ವಿಶೇಷವಾಗಿದೆ.
ಆಯುಧ ಪೂಜೆ ದಿನ ಮದುವೆ, ಯುಗಾದಿಗೆ ತಿಥಿ: ಶಂಕರಣ್ಣನ ಬದುಕು ಹೀಗ್ಯಾಕಾಯ್ತು?
ಹಾಗೆನೋಡಿದರೆ ಹಿಂದಿನ ಕಾಲದಲ್ಲಿ ರಾಜಮಹಾರಾಜರು ಆಯುಧಪೂಜೆಗೆ ಮಹತ್ವ ನೀಡುತ್ತಿದ್ದರು. ಶತ್ರು ಸಂಹಾರ ಮಾಡುವ ಆಯುಧಗಳಿಗೆ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಅವತ್ತಿನ ಕಾಲದಲ್ಲಿ ತಮ್ಮ ಬಳಿಯಿದ್ದ ಯದ್ಧಕ್ಕೆ ಬಳಸುತ್ತಿದ್ದ ಆಯುಧಗಳನ್ನು ಜೋಡಿಸಿಟ್ಟು ಜತೆಗೆ ಸೈನ್ಯದ ಭಾಗವಾಗಿದ್ದ ಆನೆ, ಕುದುರೆಗಳಿಗೆ ಪೂಜೆ ಸಲ್ಲಿಸುತ್ತಿದ್ದರು.
ದಸರಾ 2022: ರಾವಣನಿಗೆ 10 ತಲೆಗಳು ಏಕೆ? ಇದರ ಅರ್ಥವೇನು?
ದ್ರೌಪದಾಯುಗದಲ್ಲಿ ಅರ್ಜುನನು ಅಜ್ಞಾತವಾಸದಲ್ಲಿದ್ದ ಸಂದರ್ಭ ಬನ್ನಿಮರದಲ್ಲಿಟ್ಟ ಶಸ್ತ್ರಗಳನ್ನು ತೆಗೆದು ಪೂಜಿಸಿದ ದಿನ ಆಯುಧ ಪೂಜೆಯೆಂದೂ, ವಿರಾಟನ ಗೋವುಗಳನ್ನು ಸೆರೆ ಹಿಡಿದ ಕೌರವಸೈನ್ಯದ ಮೇಲೆ ಆಕ್ರಮಣ ಮಾಡಿ ವಿಜಯ ಸಾಧಿಸಿದ ದಿನ ವಿಜಯದಶಮಿ ಎಂದು ಹೇಳಲಾಗುತ್ತಿದೆ.
ದಸರಾ 2022: ರಾವಣನಿಗೆ 10 ತಲೆಗಳು ಏಕೆ? ಇದರ ಅರ್ಥವೇನು?
ಯುದ್ಧದ ಗೆಲುವಿಗಾಗಿ ಆಯುಧ ಪೂಜೆ
ಇತಿಹಾಸದ ಪುಟಗಳಲ್ಲಿ ರಾಜರ ಕಾಲದಲ್ಲಿ ಆಯುಧ ಪೂಜೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿತ್ತು ಎನ್ನುವುದು ದಾಖಲಾಗಿದೆ. ಸೈನ್ಯ ಮತ್ತು ಆಯುಧಗಳು ರಾಜರ ಆಡಳಿತದಲ್ಲಿ ಪ್ರಮುಖವಾಗಿದ್ದವು. ಸದಾ ಯುದ್ಧಗಳಲ್ಲಿಯೇ ನಿರತರಾಗಿರುತ್ತಿದ್ದ ರಾಜರು ಆಯುಧಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದರಲ್ಲದೆ ಯುದ್ಧದ ಗೆಲುವಿಗಾಗಿ ಆಯುಧ ಪೂಜೆ ಮಾಡುತ್ತಿದ್ದರು.
ಪ್ರಜಾಪ್ರಭುತ್ವದ ಈ ಕಾಲದಲ್ಲಿ ಕೆಲವರು ತಮ್ಮ ಮನೆಗಳಲ್ಲಿರುವ ಆಯುಧ, ವಾಹನ, ದಿನನಿತ್ಯ ಕೆಲಸ ಕಾರ್ಯಗಳಿಗೆ ಬಳಸುವ ಯಂತ್ರಗಳು ಸೇರಿದಂತೆ ವಿವಿಧ ಉಪಕರಣಗಳಿಗೆ ಪೂಜೆ ಸಲ್ಲಿಸುತ್ತಾರೆ. ಇದೆಲ್ಲದರ ನಡುವೆ ಮೈಸೂರು ಅರಮನೆಯಲ್ಲಿ ಅಂದಿನ ರಾಜಮಹಾರಾಜರ ಕಾಲದಲ್ಲಿ ಹೇಗೆ ಆಯುಧ ಪೂಜೆಯನ್ನು ನಡೆಸಲಾಗುತ್ತಿತ್ತೋ ಅದೇ ರೀತಿಯಲ್ಲಿ ಈಗಲೂ ನಡೆಸುತ್ತಿರುವುದು ವಿಶೇಷವಾಗಿದೆ.
ಯದುವೀರರಿಂದ ಆಯುಧ ಪೂಜೆ
ಈ ಪೂಜಾ ಕಾರ್ಯಕ್ರಮ ಖಾಸಗಿಯಾಗಿರುವುದರಿಂದ ಯಾರಿಗೂ ಪ್ರವೇಶವಿರುವುದಿಲ್ಲ. ಇನ್ನು ಆಯುಧಪೂಜಾ ಕಾರ್ಯಕ್ರಮ ಹೇಗೆ ನಡೆಯುತ್ತದೆ ಎನ್ನುವುದನ್ನು ನೋಡುವುದಾದರೆ, ಯುವರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಂಬಾ ವಿಲಾಸ ಅರಮನೆಯ ಕರಿಕಲ್ಲು ತೊಟ್ಟಿಯಲ್ಲಿ ಆಯುಧಗಳು ಸೇರಿದಂತೆ ತಮ್ಮಲ್ಲಿರುವ ವಾಹನ ಪಟ್ಟದ ಆನೆ, ಕುದುರೆ ಹಸುಗಳಿಗೆ ಪೂಜೆಯನ್ನು ಸಲ್ಲಿಸುತ್ತಾರೆ.
ಪ್ರಾತಃಕಾಲದಲ್ಲಿ ಆರಂಭಗೊಳ್ಳುವ ಪೂಜಾ ಕಾರ್ಯಕ್ರಮ ಮಧ್ಯಾಹ್ನದವರೆಗೂ ನಡೆಯುತ್ತದೆ. ಮೊದಲಿಗೆ ಅರಮನೆಯ ಆವರಣದಲ್ಲಿ ಆಯುಧಪೂಜೆಯನ್ನು ರಾಜಪರಂಪರೆಯಂತೆ ಆರಂಭಿಸಲಾಗುತ್ತದೆ. ಆರಂಭದಲ್ಲಿ ಸಾಲಿಗ್ರಾಮ ಪೂಜೆ ನೇರವೇರಿಸಿ, ನಂತರ ಅರಮನೆ ಆವರಣದಲ್ಲಿರುವ ಕೋಡಿ ಸೋಮೇಶ್ವರ ದೇವಾಲಯಕ್ಕೆ ಚಿನ್ನದ ಖಡ್ಗ, ಪಿಸ್ತೂಲು ಸೇರಿದಂತೆ ಅರಮನೆಯ ಆಯುಧಗಳನ್ನು ಚಿನ್ನಲೇಪಿತ ಪಲ್ಲಕ್ಕಿಯಲ್ಲಿ ಕೊಂಡೊಯ್ದು ಪುರಾತನ ಬಾವಿಯ ಗಂಗೆಯಿಂದ ಅದನ್ನು ಶುಚಿಗೊಳಿಸಿ ಬಳಿಕ ಪೂಜೆ ನೆರವೇರಿಸಲಾಗುತ್ತದೆ.
ವಿವಿಧ ಪೂಜೆ ಹೋಮ ಹವನ
ಇದೇ ಸಮಯದಲ್ಲಿ ಅರಮನೆಯಲ್ಲಿ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ವಿವಿಧ ಪೂಜೆ ಹೋಮ ಹವನಗಳನ್ನು ನೇರವೇರಿಸುತ್ತಾರೆ. ಅಷ್ಟರಲ್ಲಿ ಅದೇ ಸಮಯಕ್ಕೆ ಕೋಡಿ ಸೋಮೇಶ್ವರ ದೇವಾಲಯದಿಂದ ಶುಚಿಗೊಳಿಸಿ ಪಲ್ಲಕಿಯಲ್ಲಿ ತಂದ ಆಯುಧ ಸೇರಿದಂತೆ ಇತರೆ ವಸ್ತುಗಳನ್ನು ಅರಮನೆಯ ಆನೆಬಾಗಿಲು ಮೂಲಕ ಕಲ್ಯಾಟಮಂಟಪಕ್ಕೆ ಕೊಂಡೊಯ್ದು ಜೋಡಿಸಲಾಯಿತು.
ಆ ನಂತರ ಆಗಮಿಸಿದ ರಾಜಪುರೋಹಿತರು ನೀಡಿದ ಮಾರ್ಗದರ್ಶನದಂತೆ ಆಯುಧಗಳನ್ನು ಜೋಡಿಸಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಎಲ್ಲ ಆಯುಧಗಳಿಗೆ ಪೂಜೆ ಸಲ್ಲಿಸುತ್ತಾರೆ. ಇದೆಲ್ಲದರ ನಡುವೆ ನವರಾತ್ರಿ ಆರಂಭದಲ್ಲಿ ಖಾಸಗಿ ದರ್ಬಾರ್ಗೆ ಮುನ್ನ ಸಿಂಹಾಸನಕ್ಕೆ ಜೋಡಿಸಿದ್ದ ಸಿಂಹಕ್ಕೆ ಪೂಜೆ ಸಲ್ಲಿಸಿ ಅದನ್ನು ವಿಸರ್ಜಿಸಲಾಗುತ್ತದೆ.
ಕರಿಕಲ್ಲು ತೊಟ್ಟಿಯಲ್ಲಿ ವಾಹನಗಳಿಗೆ ಪೂಜೆ
ಆಯುಧಪೂಜೆಯ ಹಿನ್ನಲೆಯಲ್ಲಿ ಬೆಳಿಗ್ಗೆ ಚಂಡಿಕಾ ಹೋಮ ಆರಂಭಿಸಿ ಬಳಿಕ ಪೂರ್ಣಾಹುತಿ ನಡೆಯುತ್ತದೆ. ನಂತರ ಕರಿಕಲ್ಲು ತೊಟ್ಟಿಯಲ್ಲಿ ಅರಮನೆಯಲ್ಲಿರುವ ಐಷಾರಾಮಿ ಕಾರು ಮತ್ತು ಇತರೆ ವಾಹನಗಳಿಗೂ ಪೂಜೆಯನ್ನು ಮಾಡಲಾಗುತ್ತದೆ.
ಹಿಂದಿನ ಕಾಲದ ಸಂಪ್ರದಾಯದಂತೆ ಅರಮನೆಯಲ್ಲಿರುವ ಪಟ್ಟದ ಆನೆ, ಪಟ್ಟದ ಕುದುರೆಗಳು, ಪಟ್ಟದ ಒಂಟೆಗಳು, ಪಟ್ಟದ ಹಸುಗಳು ಹಾಗೂ ಅರಮನೆ ಆರು ಆನೆಗಳಿಗೂ ಸಂಪ್ರದಾಯಬದ್ಧ ಪೂಜೆ ನೆರವೇರಿಸಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಈ ವೇಳೆ ರಾಜವಂಶಸ್ಥೆ ಪ್ರಮೋದಾದೇವಿ ಹಾಗೂ ಯದುವೀರರ ಪತ್ನಿ ತ್ರಿಷಿಕಾಕುಮಾರಿ ಮತ್ತು ಪುತ್ರ ಆದ್ಯವೀರ್ ಸೇರಿದಂತೆ ರಾಜಮನೆತನದ ಹಲವರು ಉಪಸ್ಥಿತರಿರುತ್ತಾರೆ.
ಒಟ್ಟಿನಲ್ಲಿ ಹೇಳಬೇಕಾದರೆ ನವರಾತ್ರಿಯ ಅಂತಿಮ ಘಟ್ಟದ ಸಂಭ್ರಮೋಲ್ಲಾಸದ ಈ ಸಂದರ್ಭ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ಜರುಗುವ ಆಯುಧಪೂಜೆ ಆಳರಸರ ಗತಕಾಲದ ವೈಭವವನ್ನು ನಮ್ಮ ಮುಂದೆ ತೆರೆದಿಡುವ ದೃಶ್ಯಕಾವ್ಯ ಎಂದರೆ ತಪ್ಪಾಗಲಾರದು.