Rain Damage: ರಾಜ್ಯದಲ್ಲಿ ಮಳೆ ಅಬ್ಬರ, 10 ಜಿಲ್ಲೆಗಳಲ್ಲಿ ಬೆಳೆ ನಾಶ; ಪರಿಹಾರದ ನಿರೀಕ್ಷೆಯಲ್ಲಿ ಅನ್ನದಾತ
ಬೆಂಗಳೂರು: ಕಳೆದ ವರ್ಷ ಕಲಬುರಗಿ ಸೇರಿ ಉತ್ತರ ಕರ್ನಾಟಕದಲ್ಲಿ ಸುರಿದ ಮಳೆಯಿಂದಾಗಿ ಎದುರಾದ ಪ್ರವಾಹಕ್ಕೆ ಅಪಾರ ಪ್ರಮಾಣ ಬೆಳೆ ನಷ್ಟವಾಗಿತ್ತು. ರೈತರಿಗೆ ಪರಿಹಾರ ವಿಚಾರವಾಗಿ ಆಗಲೂ ಕರ್ನಾಟಕ ಸರ್ಕಾರ ಒಂದಷ್ಟು ಆರೋಪಗಳನ್ನು ಎದುರಿಸಿತ್ತು. ಬಳಿಕ ಬೆಳೆ ಪರಿಹಾರ ನೀಡಿದ್ದರ ಲೆಕ್ಕ ನೀಡಿತ್ತು. ಇತ್ತೀಚೆಗೆ ರಾಜ್ಯದಲ್ಲಿ ಆಲಿಕಲ್ಲು ಸಹಿತ ವ್ಯಾಪಕ ಮಳೆ ದಾಖಲಾಗಿದ್ದರಿಂದ ಮತ್ತೆ ಅಪಾರ ಪ್ರಮಾಣದ ಬೆಳೆ ಹಾನಿ ಉಂಟಾಗಿದೆ. ಕೂಡಲೇ ಸಮೀಕ್ಷೆ ನಡೆಸಿ ಪರಿಹಾರ ಒದಗಿಸುವಂತೆ ಆಗ್ರಹ ಕೇಳಿ ಬಂದಿದೆ. ಈ ಭಾರಿ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂದು ರೈತರು ಕಾತರದಿಂದ ಕಾಯುತ್ತಿದ್ದಾರೆ.
ಈ ಸಂಬಂಧ ಎಕ್ಸ್ ಪೊಸ್ಟ್ ಮಾಡಿರುವ ಆರ್.ಅಶೋಕ್ ಅವರು, 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ರಾಜ್ಯಾದ್ಯಂತ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯಿಂದ ಸುಮಾರು 56,000 ಹೆಕ್ಟೇರ್ ಪ್ರದೇಶದಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಬೆಳೆಹಾನಿ ಸಮೀಕ್ಷೆ ನಡೆಸಿ, ಅನ್ನದಾತರಿಗೆ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಿ' ಒತ್ತಾಯಿಸಿದ್ದಾರೆ. ಎಲ್ಲೆಲ್ಲಿ ಮಳೆ ಆಗಿದೆ. ಯಾವೆಲ್ಲ ಬೆಳೆಗೆ ತೊಂದರೆ ಆಗಿದೆ ಎಂಬ ಮಾಹಿತಿ ಇಲ್ಲಿದೆ.

ಯಾವೆಲ್ಲ ಜಿಲ್ಲೆಗಳಲ್ಲಿ ಎಷ್ಟು ಹಾನಿ ಆಗಿದೆ
ಧಾರವಾಡ, ಹಾಸನ, ಹಾವೇರಿ, ಬೆಂಗಳೂರು, ವಿಜಯಪುರ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಕಳೆದ ವಾರದ ಬಿರುಗಾಳಿ ಸಹಿತ ಭಾರೀ ಪ್ರಮಾಣದಲ್ಲಿ ಆಲಿಕಲ್ಲು ಮಳೆ ಆಗಿತ್ತು. ಇದರಿಂದ ಧಾರವಾಡದ ಕಲಘಟಗಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಿಮಪಾತದ ಬಿದ್ದಂತಹ ಅನುಭವವಾಗಿತ್ತು. ಜಿಲ್ಲೆ ವ್ಯಾಪ್ತಿಯಲ್ಲಿ ಮಾವು, ಬಾಳೆ ಬೆಳೆಗಾರರಿಗೆ ತೊಂದರೆ ಆಯಿತು. ಆಲಿಕಲ್ಲು ಮಳೆಗೆ ಬೆಳೆ ಹಾನಿಗೊಂಡಿತ್ತು. ಒಟ್ಟು 450 ಎಕರೆ ಬೆಳೆ ಹಾನಿ ಆಗಿದೆ.
ಬಾಗಲಕೋಟೆಯಲ್ಲಿ 2400 ಎಕರೆ ತೋಟಗಾರಿಕೆ ಮಳೆ ಹಾನಿ ಉಂಟಾಗಿದೆ. ಚಿಕ್ಕಬಳ್ಳಾಪುರದಲ್ಲಿ 2.5 ರೂಪಾಯಿ ಮೌಲ್ಯದ ಬೆಳೆಹಾನಿ ಅಗಿದ್ದರೆ, ಬೆಳಗಾವಿಯಲ್ಲಿ 150 ಎಕರೆ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳು ಬಿರುಗಾಳಿ ಮಳೆಗೆ ನೆಲಕಚ್ಚಿವೆ. ಯಾದಗಿರಿ ಸೇರಿ ಬೇರೆ ಬೇರೆ ಜಿಲ್ಲೆಗಳಲ್ಲಿ ಜೋಳ, ಭತ್ತದ ಬೆಳೆಗಳು ಅಕಾಲಿಕ ಮಳೆಗೆ ಸಿಲುಕಿ ಇಳವರಿ ಕಳೆದುಕೊಂಡಿವೆ.
ರೈತರಿಗೆ ಆರ್ಥಿಕ ನಷ್ಟ
ವಿಜಯಪುರ, ಧಾರವಾಡ, ಶಿವಮೊಗ್ಗ, ರಾಯಚೂರು, ಗದಗ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಮಾವು ಬೆಳೆಗಾರರು ಕೈಗೆ ಬಂದ ಫಸಲನ್ನು ಕಳೆದುಕೊಂಡು ಸಂಕಷ್ಟ ಎದುರಿಸುವಂತಾಗಿದೆ. ಚಿತ್ರದುರ್ಗದಲ್ಲಿ ಅಡಿಕೆ, ಪಪ್ಪಾಯ, ಬಳ್ಳಾರಿಯಲ್ಲಿ ಭತ್ತದ ಬೆಳೆಗೆ ಹಾನಿ ಉಂಟಾಗಿದೆ. ಉತ್ತರ ಕನ್ನಡದಲ್ಲಿ ಮಾತ್ರ ಆಲಿಕಲ್ಲು ಮಳೆ ಆಗಿಲ್ಲ. ಹೀಗಾಗಿ ಈ ಭಾಗದಲ್ಲಿ ಹಲಸು, ಅಡಿಕೆ, ತೆಂಗು ಉತ್ತಮವಾಗಿದೆ. ಅಕಾಲಿಕ ಮಳೆಗೆ ಪೂರಕ ವಾತಾವರಣ ನಿರ್ಮಾಣವಾಗಿದೆ ಎಂದು ಮೂಲಗಳು ತಿಳಿಸಿವೆ.
ಒಟ್ಟು ಸುಮಾರು ಹತ್ತು ಜಿಲ್ಲೆಗಳಲ್ಲಿ ಅಕಾಲಿಕ ಪೂರ್ವ ಮುಂಗಾರು ಮಳೆಗೆ ಬೆಳೆ ನಷ್ಟವಾಗಿದೆ. ಹೀಗಾಗಿ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ವಿಪಕ್ಷ ನಾಯಕರು ಆಗ್ರಹಿಸಿದ್ದಾರೆ.












Click it and Unblock the Notifications