ಕಾಶ್ಮೀರದಲ್ಲಿರುವ ಅತ್ತೆ-ಮಾವ ಸಂಪರ್ಕಕ್ಕೆ ಸಿಗುತ್ತಿಲ್ಲ: ಊರ್ಮಿಳಾ ಮಾತೋಂಡ್ಕರ್
ಮುಂಬೈ, ಆಗಸ್ಟ್ 30: ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿ, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ಕೇಂದ್ರ ಸರ್ಕಾರದ ನಡೆಯಿಂದ ಕಾಶ್ಮೀರ ಸಹಜ ಸ್ಥಿತಿಯಲ್ಲಿಲ್ಲ ಎಂದಿರುವ ನಟಿ, ಕಾಂಗ್ರೆಸ್ ನಾಯಕಿ ಊರ್ಮಿಳಾ ಮಾತೋಂಡ್ಕರ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
"ನನ್ನ ಅತ್ತೆ-ಮಾವ ಕಾಶ್ಮೀರದಲ್ಲಿ ವಾಸವಾಗಿದ್ದಾರೆ. ಅವರು ನಮ್ಮ ಸಂಪರ್ಕಕ್ಕೆ ಸಿಕ್ಕು 22 ದಿನವಾಯಿತು. ಅವರ ಮಗನಿಗೂ ತಂದೆ-ತಾಯಿಯೊಂದಿಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ" ಎಂದು ಊರ್ಮಿಳಾ ದೂರಿದ್ದಾರೆ.
"370 ನೇ ವಿಧಿಯನ್ನು ರದ್ದುಗೊಳಿಸಿದ್ದು ಪ್ರಶ್ನೆಯಲ್ಲ, ಆದರೆ ಅದನ್ನು ಅಮಾನವೀಯ ರೀತಿಯಲ್ಲಿ ರದ್ದುಗೊಳಿಸಿದ್ದರ ಬಗ್ಗೆ ಆಕ್ಷೇಪವಿದೆ. ನನ್ನ ಅತ್ತೆ ಮತ್ತು ಮಾವ ಕಾಶ್ಮೀರದಲ್ಲಿ ವಾಸವಿದ್ದಾರೆ. ಇಬ್ಬರೂ ಮಧುಮೇಹಿಗಳು. ಇಂದಿಗೆ ಸರಿಯಾಗಿ 22 ದಿನವಾಯಿತು. ನನಗಾಗಲೀ, ನನ್ನ ಪತಿಗಾಗಲೀ ಅವರೊಂದಿಗೆ ಮಾತನಾಡಲು ಸಾಧ್ಯವಾಗಿಲ್ಲ. ಅವರಿಗೆ ಮನೆಯಲ್ಲಿ ಔಷಧವಾದರೂ ಇದೆಯಾ, ಇಲ್ಲವಾ ಎಂಬ ಮಾಹಿತಿಯೂ ನಮಗಿಲ್ಲ. ಹೀಗಾದರೆ ಜನರು ಬದುಕುವುದು ಹೇಗೆ?" ಎಂದು ಅವರು ಪ್ರಶ್ನಿಸಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮುಂಬೈ ಉತ್ತರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಊರ್ಮಿಳಾ ಮಾತೋಂಡ್ಕರ್, ಬಿಜೆಪಿಯ ಗೋಪಾಲ್ ಶೆಟ್ಟಿ ವಿರುದ್ಧ ಸೋಲುಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಕೇಂದ್ರ ಸರ್ಕಾರ ಆಗಸ್ಟ್ 5 ರಂದು 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಕಣಿವೆ ರಾಜ್ಯದಲ್ಲಿ ಅಂತರ್ಜಾಲ ಸಂಪರ್ಕವನ್ನೂ ಕಡಿತಗೊಳಿಸಿತ್ತು, ನಿಷೇಧಾಜ್ಞೆ ಜಾರಿಗೊಳಿಸಿತ್ತು. ಕಣಿವೆ ರಾಜ್ಯಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಗಳನ್ನು ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು.












Click it and Unblock the Notifications