ಕಾಂಗ್ರೆಸ್ ಬೆನ್ನಿಗೆ ಚೂರಿ ಇರಿಯಲು ಸಜ್ಜಾದ ಕಮಲನಾಥ್ & ಸನ್: ಬಿಜೆಪಿಯಿಂದ ಮೇಜರ್ ಆಪರೇಷನ್?
ಭೋಪಾಲ್ ಫೆಬ್ರವರಿ 17: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ಗೆ ಬಹುದೊಡ್ಡ ಶಾಕ್ ಎದುರಾಗಿದೆ. ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಹಾಗೂ ಅವರ ಪುತ್ರ ನಕುಲ್ ನಾಥ್ ಕಾಂಗ್ರೆಸ್ ಪಕ್ಷ ಕೈಬಿಡಲು ಸಜ್ಜಾಗಿದ್ದಾರೆ.
ಕಾಂಗ್ರೆಸ್ ಪಕ್ಷದ ಕೆಲ ನಿರ್ಧಾರಗಳಿಂದ ಬೇಸತ್ತು ಅಸಮಾಧಾನಗೊಂಡಿರುವ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಹಾಗೂ ಅವರ ಪುತ್ರ ನಕುಲ್ ನಾಥ್ ಕಾಂಗ್ರೆಸ್ ಪಕ್ಷ ತೊರೆಯಲು ನಿರ್ಧರಿಸಿದ್ದಾರೆ. ಈ ಬಗ್ಗೆ ಕಳೆದ ದಿನ ಮಧ್ಯಪ್ರದೇಶ ಬಿಜೆಪಿ ಮುಖ್ಯಸ್ಥ ವಿಡಿ ಶರ್ಮಾ ಅವರು ಸುಳಿವು ಕೂಡ ನೀಡಿದ್ದರು. ಇದು ಇಂದು ನಿಜವಾಗಿದೆ.

ಕಮಲ್ ನಾಥ್ ಅವರ ಪುತ್ರ ನಕುಲ್ ನಾಥ್ ಅವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಬಯೋದಿಂದ ಕಾಂಗ್ರೆಸ್ ಅನ್ನು ಕೈಬಿಟ್ಟಿದ್ದಾರೆ. ನಕುಲ್ ನಾಥ್ ಅವರ ಈ ನಡೆ ಅವರು ಮತ್ತು ತಂದೆ ಕಮಲ್ ನಾಥ್ ಅವರು ಬಿಜೆಪಿಗೆ ಪಕ್ಷಾಂತರ ಮಾಡುತ್ತಾರೆ ಎಂಬ ವದಂತಿಗಳಿಗೆ ತುಪ್ಪ ಸುರಿಯುವಂತೆ ಮಾಡಿದೆ. ಈ ಸುದ್ದಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿತ್ತು.
ಕಮಲ್ ನಾಥ್ ಅವರು ಇಂದು ದೆಹಲಿಗೆ ಬರಲಿದ್ದು, ಅವರು ಬಿಜೆಪಿ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ.
ಇದರಿಂದ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ಗೆ ದೊಡ್ಡ ಹೊಡೆತ ನೀಡಿದಂತಾಗಿದೆ. ಅಲ್ಲದೆ ಈ ವಾರದ ಆರಂಭದಲ್ಲಿ ಹಲವಾರು ನಾಯಕರು ಪಕ್ಷಗಳನ್ನು ಬದಲಾಯಿಸಿದರು. ಮಾಜಿ ಶಾಸಕ ದಿನೇಶ್ ಅಹಿರ್ವಾರ್ ಮತ್ತು ವಿದಿಶಾದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಕೇಶ್ ಕಟಾರೆ ಫೆಬ್ರವರಿ 12 ರಂದು ಬಿಜೆಪಿಗೆ ಸೇರ್ಪಡೆಗೊಂಡರು.
ಕಾಂಗ್ರೆಸ್ ಬಗ್ಗೆ ಅಸಮಾಧಾನ ಬಿಜೆಪಿಗೆ ಆಹ್ವಾನ:
ಅಯೋಧ್ಯೆಯ ರಾಮಮಂದಿರದ 'ಪ್ರಾಣ ಪ್ರತಿಷ್ಠಾ' ಸಮಾರಂಭದ ಆಹ್ವಾನವನ್ನು ಪಕ್ಷ ತಿರಸ್ಕರಿಸಿದ್ದಕ್ಕೆ ಅಸಮಾಧಾನಗೊಂಡಿರುವ ಇತರ ಹಿರಿಯ ಕಾಂಗ್ರೆಸ್ ನಾಯಕರಿಗೆ ಪಕ್ಷದ ಬಾಗಿಲು ತೆರೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಡಿ ಶರ್ಮಾ ನಿನ್ನೆ ಹೇಳಿದ್ದರು.
ಕಮಲ್ ನಾಥ್ ಅವರು ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹಗಳ ಬಗ್ಗೆ ಕೇಳಿದ ಪ್ರಶ್ನೆಗೆ ವಿಡಿ ಶರ್ಮಾ, "ಇಂದು ನಾನು ಕಾಂಗ್ರೆಸ್ ಶಾಸಕ ಹಾಗೂ ನಾಯಕರಿಗೆ ಒಮದುಗೆ ಪರಿಹಾರವನ್ನು ಹೇಳುತ್ತಿದ್ದೇನೆ. ಕಾಂಗ್ರೆಸ್ನಿಂದ ಪಕ್ಷಕ್ಕೆ ಯಾರೇ ಬಂದರೂ ನಾವು ನಮ್ಮ ಬಾಗಿಲು ತೆರೆದಿದ್ದೇವೆ. ಏಕೆಂದರೆ ಕಾಂಗ್ರೆಸ್ ರಾಮನನ್ನು ಬಹಿಷ್ಕರಿಸುತ್ತದೆ, ಭಾರತವು ರಾಮನನ್ನು ಬಹಿಷ್ಕರಿಸುತ್ತದೆ ಎಂದು ಭಾವಿಸುವ ಜನರು ಕಾಂಗ್ರೆಸ್ನಲ್ಲಿದ್ದಾರೆ. ಕಾಂಗ್ರೆಸ್ ರಾಮನನ್ನು ಅವಮಾನಿಸಿದಾಗ ಇದರಿಂದ ನೊಂದವರು, ಅಸಮಾಧಾನಗೊಂಡವರು ಇದ್ದಾರೆ ಮತ್ತು ಅವರಿಗೆ ಅವಕಾಶ ಸಿಗಬೇಕು'' ಎಂದು ಅವರು ಹೇಳಿದ್ದರು.
"ನೀವು ಯಾರ ಹೆಸರನ್ನು ತೆಗೆದುಕೊಳ್ಳುತ್ತೀರೋ ಅವರ ಹೃದಯದಲ್ಲಿ ನೋವು ಇದ್ದರೆ, ಅವರಿಗೂ ಸ್ವಾಗತ" ಎಂದು ಶುಕ್ರವಾರ ಭೋಪಾಲ್ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಶರ್ಮಾ ಹೇಳಿದರು.
ಕಾಂಗ್ರೆಸ್ ಹಾಗೂ ನಕುಲ್ ನಾಥ್ ನಡುವಿನ ಮನಸ್ತಾಪಕ್ಕೆ ಕಾರಣ:-
ಈ ತಿಂಗಳ ಆರಂಭದಲ್ಲಿ ಮಧ್ಯಪ್ರದೇಶದ ಲೋಕಸಭಾ ಕಾಂಗ್ರೆಸ್ ಸಂಸದ ನಕುಲ್ ನಾಥ್ ಅವರು ಛಿಂದ್ವಾರಾ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಎಂದು ಘೋಷಿಸಿದರು. ಆದರೆ ಇದು ಪಕ್ಷದಿಂದ ಇನ್ನೂ ಅಧಿಕೃತ ಘೋಷಣೆಯಾಗಿಲ್ಲ.
"ಈ ಬಾರಿಯೂ ಲೋಕಸಭೆ ಚುನಾವಣೆಗೆ ನಾನೇ ನಿಮ್ಮ ಅಭ್ಯರ್ಥಿ. ಕಮಲ್ ನಾಥ್ ಅಥವಾ ನಕುಲ್ ನಾಥ್ ಅವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆಯೇ ಎಂಬ ವದಂತಿಗಳು ಹರಡುತ್ತಿವೆ, ಕಮಲ್ ನಾಥ್ ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ನಾನು ಸ್ಪಷ್ಟಪಡಿಸುತ್ತೇನೆ " ಎಂದು ನಕುಲ್ ನಾಥ್ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ಹೇಳಿದರು. ಆದರೆ ಇದಕ್ಕೆ ಪಕ್ಷದಿಂದ ಇನ್ನೂ ಯಾವುದೇ ಘೋಷಣೆಗಳನ್ನು ಮಾಡಲಾಗಿಲ್ಲ. ಇದರಿಂದ ಮುಸುಕಿನ ಗುದ್ದಾಟ ನಡೆಯುತ್ತಿರುವಾಗಲೇ ಕಮಲ್ ನಾಥ್ ಹಾಗೂ ಪುತ್ರ ನಕುಲ್ ನಾಥ್ ತಮ್ಮ ಸಾಮಾಜಿಕ ಜಾಲತಾಣದಿಂದ ಕಾಂಗ್ರೆಸ್ ಪಕ್ಷ ಚಿಹ್ನೆಯನ್ನು ಕೈಬಿಟ್ಟಿದ್ದಾರೆ.
ಸತತ ಒಂಬತ್ತು ಅವಧಿಗೆ ಈ ಸ್ಥಾನವನ್ನು ಅಲಂಕರಿಸಿದ ಕಮಲ್ ನಾಥ್ ಅವರಿಗೆ ಛಿಂದ್ವಾರಾ ಬಹಳ ಹಿಂದಿನಿಂದಲೂ ಭದ್ರಕೋಟೆಯಾಗಿದೆ. 2019 ರ ಚುನಾವಣೆಯಲ್ಲಿ, ರಾಜ್ಯದ ಇತರ 28 ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸಿದರೂ, ನಕುಲ್ ನಾಥ್ ಅವರು ಚಿಂದ್ವಾರದಿಂದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.












Click it and Unblock the Notifications