ಕೆಆರ್ ಪೇಟೆ ತಾಲೂಕಿನಲ್ಲಿ ಜೆಡಿಎಸ್ ಕಾರ್ಯಕರ್ತನ ಕೊಲೆ
ಕೆಆರ್ ಪೇಟೆ ತಾಲೂಕಿನ ಮುರಕನಹಳ್ಳಿಯಲ್ಲಿ ಜೆಡಿಎಸ್ ಕಾರ್ಯಕರ್ತನನ್ನು ಶನಿವಾರ ರಾತ್ರಿ ಕೊಲೆ ಮಾಡಲಾಗಿದೆ. ಮೊದಲೇ ಹೊಗೆಯಾಡುತ್ತಿದ್ದ ಕಾಂಗ್ರೆಸ್-ಜೆಡಿಎಸ್ ರಾಜಕೀಯ ವೈಷಮ್ಯದ ಜೊತೆಗೆ ಈ ಕೊಲೆ ಸೇರಿಕೊಂಡು ಬಿಗುವಿನ ವಾತಾವರಣ ನಿರ್ಮಾಣವಾಗಿದೆ
ಮಂಡ್ಯ, ಜನವರಿ 1: ಜಿಲ್ಲೆಯ ಕೆ.ಆರ್.ಪಟ್ಟಣದ ಮುರಕನಹಳ್ಳಿಯಲ್ಲಿ ಶನಿವಾರ ರಾತ್ರಿ ಜೆಡಿಎಸ್ ಕಾರ್ಯಕರ್ತ ಹರೀಶ್ ಎಂಬಾತನ ಕೊಲೆಯಾಗಿದೆ. ರಾಜಕೀಯ ವೈಷಮ್ಯದಿಂದಲೇ ಈ ಕೊಲೆಯಾಗಿದೆ ಎಂದು ಜೆಡಿಎಸ್ ಕಾರ್ಯಕರ್ತರು ಆರೋಪ ಮಾಡಿದ್ದಾರೆ. ಹತ್ತು ದಿನಗಳ ಅವಧಿಯಲ್ಲಿ ಮೂರಕ್ಕೂ ಹೆಚ್ಚು ಮಂದಿ ಜೆಡಿಎಸ್ ಕಾರ್ಯಕರ್ತರು ಜಿಲ್ಲೆಯಲ್ಲಿ ಕೊಲೆಯಾಗಿದ್ದಾರೆ.
ಚಾಕುವಿನಿಂದ ಇರಿದು ಹರೀಶ್ ಕೊಲೆ ಮಾಡಲಾಗಿದೆ. ಕೊಲೆಯ ಸುದ್ದಿ ಹರಡುತ್ತಿದ್ದಂತೆ ಆಕ್ರೋಶಗೊಂಡ ಜನರು ಕೆಲ ವಾಹನಗಳಿಗೆ ಬೆಂಕಿ ಹೊತ್ತಿಸಿದ್ದಾರೆ. ಈ ಬೆಂಕಿಯನ್ನು ನಂದಿಸಲು ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಲಾಗಿದೆ. ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣ ಆಗಿದ್ದು, ಭಯದ ವಾತಾವರಣ ಮುಂದುವರಿದಿದೆ.[ಬುದ್ಧಿವಾದ ಹೇಳಿದ್ದಕ್ಕೆ ಬದುಕನ್ನೇ ಕೊನೆಗೊಳಿಸಿದ ಹದಿನೇಳರ ಪೋರರು]
ಮಾಜಿ ಶಾಸಕರ ಮಗನೇ ಈ ಕೊಲೆ ಮಾಡಿಸಿದ್ದಾನೆ ಎಂದು ಜೆಡಿಎಸ್ ಕಾರ್ಯಕರ್ತರು ಆರೋಪ ಮಾಡಿದ್ದಾರೆ. ಸ್ಥಳದಲ್ಲಿ ಪೊಲೀಸರು ಮೊಕ್ಕಾಂ ಹೂಡಿದ್ದು, ಬಿಗಿ ಕಾವಲು ಹಾಕಲಾಗಿದೆ. ಕಳೆದ ಕೆಲ ದಿನಗಳಿಂದ ವೈಯಕ್ತಿಕ ಕಾರಣವೂ ಸೇರಿದಂತೆ ರಾಜಕೀಯ ವೈಷಮ್ಯಕ್ಕಾಗಿ ಜೆಲ್ಲೆಯಲ್ಲಿ ಜೆಡಿಎಸ್ ಕಾರ್ಯಕರ್ತರ ಕೊಲೆಗಳಾಗಿವೆ. ಸ್ಥಳೀಯ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.