"ಜೆಡಿಎಸ್ ಕಟ್ಟಿಹಾಕುವ ಕೆಲಸ ಯಾರಿಂದಲೂ ಸಾಧ್ಯವಿಲ್ಲ"
ಮಂಡ್ಯ, ಆಗಸ್ಟ್ 19: "ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ವಹಿಸಿರುವುದರಿಂದ ಜೆಡಿಎಸ್ ನ ಯಾವುದೇ ನಾಯಕರಿಗೆ ತೊಂದರೆ ಆಗುವುದಿಲ್ಲ" ಎಂದು ಮಾಜಿ ಸಚಿವ ಪುಟ್ಟರಾಜು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿಬಿಐ ತನಿಖೆಯಿಂದ ಜೆಡಿಎಸ್ ಅನ್ನು ಕಟ್ಟಿಹಾಕಬಹುದು ಎಂಬ ಬಿಜೆಪಿ ಲೆಕ್ಕಾಚಾರ ಫಲಿಸದು. ನೆರೆ ಸಂತ್ರಸ್ತರಿಗೆ ಪರಿಹಾರ ಕೊಡುವುದನ್ನು ಬಿಟ್ಟು ಜನರ ದಿಕ್ಕು ತಪ್ಪಿಸಲು ಬಿಜೆಪಿ ಸಿಬಿಐ ತನಿಖೆಯ ದಾಳ ಉರುಳಿಸಿದೆ. ಫೋನ್ ಕದ್ದಾಲಿಕೆ ವಿಚಾರದಿಂದ ಏನೇನೂ ಪ್ರಯೋಜನವಾಗದು. ಸಿಬಿಐ ಅಧಿಕಾರಿಗಳು ಹಿಂದಿನ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಸರ್ಕಾರದ ಫೋನ್ ಕದ್ದಾಲಿಕೆಯನ್ನು ತನಿಖೆ ಮಾಡಬೇಕು. ಆಗ ಮಾತ್ರ ಎಲ್ಲವೂ ಬಹಿರಂಗವಾಗುತ್ತದೆ" ಎಂದು ತಿಳಿಸಿದರು.

"ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ವಿಚಾರದಲ್ಲಿ ಯಡಿಯೂರಪ್ಪ ಸರ್ಕಾರ ಏನೂ ಮಾಡುತ್ತಿಲ್ಲ. ಕೇಂದ್ರದಿಂದ ಒಂದೇ ಒಂದು ರೂಪಾಯಿ ಅನುದಾನ ಕೂಡ ತಂದಿಲ್ಲ. ಕೇವಲ ಮಂತ್ರಿಮಂಡಲ ರಚನೆಯಲ್ಲಿ ಅವರು ಬ್ಯುಸಿಯಾಗಿದ್ದಾರೆ. ಈ ಮೂಲಕ ಉತ್ತರ ಕರ್ನಾಟಕದ ಜನರಿಗೆ ಟೋಪಿ ಹಾಕುವ ಕೆಲಸ ಮಾಡುತ್ತಿದ್ದಾರೆ" ಎಂದರು.












Click it and Unblock the Notifications