ತಾಜ್ ಮಹಲ್: ಕೋಣೆ ತೆರೆಸಬೇಕೆಂದ ಅರ್ಜಿದಾರರಿಗೆ ಕೋರ್ಟ್ ಛೀಮಾರಿ
ನವದೆಹಲಿ, ಮೇ 12: ತಾಜ್ ಮಹಲ್ನಲ್ಲಿ ಬಂದ್ ಆಗಿರುವ 20 ಕೋಣೆಗಳನ್ನು ತೆರೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಅಲಹಾಬಾದ್ ಹೈಕೋರ್ಟ್ ಇಂದು ಗುರುವಾರ ಕೈಗೆತ್ತಿಕೊಂಡು, ಅರ್ಜಿದಾರನಿಗೆ ಛೀಮಾರಿ ಹಾಕಿತು. ತಾಜ್ ಮಹಲ್ ಹಿಂದೆ ಹಿಂದು ದೇವಾಲಯವಾಗಿತ್ತು. ಬಂದ್ ಆಗಿರುವ 20 ಕೋಣೆಗಳಲ್ಲಿ ಸಾಕಷ್ಟು ಸಾಕ್ಷ್ಯಾಧಾರಗಳು ರಹಸ್ಯವಾಗಿ ಉಳಿದಿವೆ. ಭಾರತೀಯ ಪುರಾತತ್ವ ಇಲಾಖೆಗೆ ಈ ಕೋಣೆಗಳನ್ನು ತೆರೆಯುವಂತೆ ನಿರ್ದೇಶಿಸಬೇಕು ಎಂದು ಡಾ. ರಜನೀಶ್ ಸಿಂಗ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದರು.
ಇಂದು ಇದರ ವಿಚಾರಣೆ ನಡೆಸಿದ ನ್ಯಾ| ಡಿ ಕೆ ಉಪಾಧ್ಯಾಯ್ ಮತ್ತು ನ್ಯಾ| ಸುಭಾಷ್ ವಿದ್ಯಾರ್ಥಿ ಇದ್ದ ಅಲಹಾಬಾದ್ ಹೈಕೋರ್ಟ್ ನ್ಯಾಯಪೀಠ, ಪಿಐಎಲ್ ವ್ಯವಸ್ಥೆಯನ್ನೇ ಅಣಕಿಸುವಂತೆ ಮಾಡಬೇಡಿ ಎಂದು ಹೇಳಿ ಅರ್ಜಿದಾರನನ್ನೇ ತರಾಟೆಗೆ ತೆಗೆದುಕೊಂಡಿತು.
ಪತಿ ಅತ್ಯಾಚಾರವೆಸಗಿದರೂ ವಿನಾಯ್ತಿ ಇಲ್ಲ: ಹೈಕೋರ್ಟ್ ಆದೇಶಕ್ಕೆ ತಡೆ ನೀಡದ ಸುಪ್ರೀಂ
"ನಿಮ್ಮ ಮನವಿ ಪುರಸ್ಕರಿಸಬೇಕೆಂದು ನಮಗೆ ಅನಿಸುತ್ತಿಲ್ಲ. ಮೊದಲು ಹೋಗಿ ಸಂಶೋಧನೆ ಮಾಡಿ. ಸ್ನಾತಕೋತ್ತರ ಪದವಿ ಮಾಡಿ. ಪಿಎಚ್ಡಿ ಮಾಡಿ" ಎಂದು ನ್ಯಾಯಾಧೀಶರು ತಿಳಿಹೇಳಿದರು.
"ತಾಜ್ ಮಹಲ್ನಲ್ಲಿ ಹಲವು ರೂಮುಗಳು ಬೀಗ ಹಾಕಿವೆ. ಭದ್ರತಾ ಕಾರಣದಿಂದ ಬಂದ್ ಆಗಿವೆ ಎಂದು ಅಧಿಕಾರಿಗಳು ಹೇಳುತ್ತಾರೆ. ತಾಜ್ ಮಹಲ್ನಲ್ಲಿ ರಹಸ್ಯವಾಗಿ ಉಳಿದಿರುವುದೆಲ್ಲಾ ಸಾರ್ವಜನಿಕಗೊಳಿಸಬೇಕು. ತಾಜ್ ಮಹಲ್ ಬಗ್ಗೆ ಸತ್ಯ ತಿಳಿದುಕೊಳ್ಳು ಹಕ್ಕು ಈ ದೇಶದ ನಾಗರಿಕರಿಗೆ ಇದೆ" ಎಂಬುದು ಅರ್ಜಿದಾರನ ವಾದವಾಗಿತ್ತು. ಈ ವಿಚಾರಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ನ್ಯಾಯಪೀಠ, ಪಿಐಎಲ್ ವ್ಯವಸ್ಥೆಯನ್ನೇ ಅಣಕಿಸಬೇಡಿ ಎಂದಿತು.
ಸೇವೆಯಿಂದ ವಜಾಗೊಂಡ 10 ವರ್ಷದ ಬಳಿಕ ಮಹಿಳೆಗೆ ಹೈಕೋರ್ಟ್ ನಿಂದ 'ನ್ಯಾಯ'..!
"ನಿಮ್ಮ ಮನವಿ ನಮಗೆ ಸಮಾಧಾನ ಕೊಟ್ಟಿಲ್ಲ. ಸತ್ಯಶೋಧನಾ ಸಮಿತಿ ಮೂಲಕ ಸತ್ಯಾಂಶ ಹೊರಬರಬೇಕೆಂದು ಕೇಳುತ್ತಿದ್ದೀರಾ? ಇದು ನಿಮ್ಮ ಹಕ್ಕಲ್ಲ. ಆರ್ಟಿಐ ಕಾಯ್ದೆ ವ್ಯಾಪ್ತಿಗೂ ಬರಲ್ಲ" ಎಂದು ಕೋರ್ಟ್ ಹೇಳಿತು.
"ಈ ವಿಚಾರದ ಬಗ್ಗೆ ನಾವು ಹೇಗೆ ತೀರ್ಪು ಕೊಡಲು ಸಾಧ್ಯ? ನಿಮ್ಮ ಹಕ್ಕೇನಿದೆ. ನಿರ್ದಿಷ್ಟ ಅಧ್ಯಯನ ನಡೆಸಬೇಕೆಂದು ಕೇಳುವುದು ನಿಮ್ಮ ಹಕ್ಕಾ?" ಎಂದು ಅರ್ಜಿದಾರನನ್ನು ನ್ಯಾಯಾಧೀಶರು ಪ್ರಶ್ನಿಸಿದರು.
ಅರ್ಜಿದಾರ ಡಾ. ರಜನೀಶ್ ಸಿಂಗ್ ಅಯೋಧ್ಯೆಯ ಬಿಜೆಪಿ ಮಾಧ್ಯಮ ವಿಭಾಗದ ಮುಖ್ಯಸ್ಥರಾಗಿದ್ದಾರೆ. "ತಾಜ್ ಮಹಲ್ ಕಟ್ಟಡ ಮೂಲತಃ ತೇಜೋ ಆಲಯ ಎಂಬ ಶಿವನ ದೇವಾಲಯವಾಗಿತ್ತು. ಅದನ್ನು ನಾಶ ಮಾಡಿ ತಾಜ್ ಮಹಲ್ ಕಟ್ಟಲಾಗಿದೆ. ಈ ಬಗ್ಗೆ ಹಲವು ಇತಿಹಾಸಕಾರರು ಪುರಾವೆಗಳನ್ನು ನೀಡಿದ್ದಾರೆ. ಲಾಕ್ ಆಗಿರುವ ರೂಮುಗಳನ್ನು ತೆರೆಸಿದರೆ ಇನ್ನಷ್ಟು ಸಾಕ್ಷ್ಯಗಳು ಸಿಗುತ್ತವೆ. ರೂಮು ತೆರೆಸುವುದು ತಪ್ಪೇನಿಲ್ಲ. ವಾಸ್ತವ ಏನಿದೆ ಅದು ಹೊರಗೆ ಬರಲಿ" ಎಂದು ತಮ್ಮ ಅರ್ಜಿಯಲ್ಲಿ ಕೇಳಿದ್ದರು.
ಈ ಹಿಂದೆ ಪುರಾತತ್ವ ಇಲಾಖೆಯು ತಾಜ್ ಮಹಲ್ ಬಗ್ಗೆ ನಡೆಸಲಾದ ಸರ್ವೇಕ್ಷಣೆ ಮತ್ತು ಅಧ್ಯಯನದ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿತ್ತು. ಅದರ ಪ್ರಕಾರ, ತಾಜ್ ಮಹಲ್ ಹಿಂದೆ ಹಿಂದು ದೇವಸ್ಥಾನ ಆಗಿತ್ತೆನ್ನುವುದಕ್ಕೆ ಸಾಕ್ಷ್ಯಾಧಾರ ಇಲ್ಲ. ಅದು ಸಮಾಧಿಯ ಉದ್ದೇಶದಿಂದಲೇ ಕಟ್ಟಿದ ಕಟ್ಟಡವಾಗಿದೆ ಎಂದು ಎಎಸ್ಐ ತನ್ನ ಅಫಿಡವಿಟ್ನಲ್ಲಿ ಸ್ಪಷ್ಟಪಡಿಸಿತ್ತು.
Recommended Video
(ಒನ್ಇಂಡಿಯಾ ಸುದ್ದಿ)