ಉಗ್ರರೇನು ನಿಮ್ಮ ನೆಂಟರಾ? ರಾಹುಲ್, ಅಖಿಲೇಶ್, ಮಾಯಾವತಿಗೆ ಶಾ ಪ್ರಶ್ನೆ
ಘಾಜಿಪುರ, ಏಪ್ರಿಲ್ 25: 'ಉಗ್ರರನ್ನು ಕೊಂದರೆ ನೀವೇಗೆ ದುಃಖಪಟ್ಟುಕೊಳ್ಳುತ್ತೀರಿ? ನಿಮ್ಮ ಮುಖದಲ್ಲೇಕೆ ಚಿಂತೆಯ ಗೆರೆ ಮೂಡುತ್ತದೆ? ಅವರೇನು ನಿಮ್ಮ ಸಂಬಂಧಿಕರೇ?' ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ವಿರೋಧಪಕ್ಷಗಳ ನಾಯಕರ ವಿರುದ್ಧ ವ್ಯಂಗ್ಯದ ಬಾಣ ತೂರಿದ್ದಾರೆ.
ಉತ್ತರ ಪ್ರದೇಶದ ಘಾಜಿಪುರದಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಮತ್ತು ಎಸ್ಪಿ ನಾಯಕ ಅಖಿಲೇಶ್ ಯಾದವ್ ಅವರ ವಿರುದ್ಧ ವಾಕ್ಪ್ರಹಾರ ನಡೆಸಿದರು.
ಬೌದ್ಧ, ಹಿಂದೂ ಬಿಟ್ಟು ಎಲ್ಲ ನುಸುಳುಕೋರರನ್ನು ಹೊರಗಟ್ಟುತ್ತೇವೆ: ಶಾ
ಪಾಕಿಸ್ತಾನದ ಬಾಲಕೋಟ್ನಲ್ಲಿರುವ ಉಗ್ರರ ಶಿಬಿರಗಳ ಮೇಲೆ ವಾಯುದಾಳಿ ನಡೆಸಲಾಯಿತು. ಅದನ್ನು ಇಡೀ ದೇಶ ಸಂಭ್ರಮಿಸಿತ್ತು. ಆದರೆ, ಎರಡು ಕಡೆ ಸೂತಕದ ವಾತಾವರಣವಿತ್ತು. ಒಂದು ಪಾಕಿಸ್ತಾನ ಮತ್ತೊಂದು ರಾಹುಲ್, ಮಾಯಾವತಿ ಮತ್ತು ಅಖಿಲೇಶ್ ಕಚೇರಿಗಳಲ್ಲಿ ಎಂದು ಅಮಿತ್ ಶಾ ಲೇವಡಿ ಮಾಡಿದರು.
'ಪಾಕಿಸ್ತಾನದ ಉಗ್ರರನ್ನು ಕೊಂದಾಗ, ಇವರ ಮುಖದಲ್ಲಿನ ಕಾಂತಿ ಮಾಯವಾಗುತ್ತದೆ ಏಕೆಂದು ನಮಗೆ ಗೊತ್ತಾಗುತ್ತಿಲ್ಲ. ಇವರೇನು ನಿಮ್ಮ ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳೇ? ನಿಮ್ಮ ಮುಖ ಏಕೆ ಕಳೆಗುಂದಿತು?' ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.
'ನಾವು ಬಿಜೆಪಿಗೆ ಸೇರಿದವರು ಮತ್ತು ನರೇಂದ್ರ ಮೋದಿ ನಮ್ಮ ಪ್ರಧಾನಿ. ಉಗ್ರರೊಂದಿಗೆ ನಾವು 'ಐ ಲವ್ ಯು' ಎಂದು ಹೇಳಲು ಸಾಧ್ಯವಿಲ್ಲ. ದೇಶದ ಭದ್ರತೆಯೊಂದಿಗೆ ಯಾರೂ ಆಟವಾಡಲು ಸಾಧ್ಯವಾಗದು' ಎಂದರು.
ಸಾಧ್ವಿ ಪ್ರಜ್ಞಾ ಸಿಂಗ್ ವಿರುದ್ದ ಕಣಕ್ಕಿಳಿದ ಹೇಮಂತ್ ಕರ್ಕರೆ ಸಹದ್ಯೋಗಿ
ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ ಬೇಕೆಂಬ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಅವರ ಬೇಡಿಕೆಯ ಬಗ್ಗೆ ರಾಹುಲ್ ಗಾಂಧಿ ಮೌನವಹಿಸಿರುವುದನ್ನು ಅವರು ಟೀಕಿಸಿದರು.
ದೇಶಕ್ಕೆ ಇಬ್ಬರು ಪ್ರಧಾನಿಗಳು ಬೇಕೆಂಬ ಒಮರ್ ಅಬ್ದುಲ್ಲಾ ಅವರ ಹೇಳಿಕೆಗೆ ಏನು ಉತ್ತರ ಹೇಳುತ್ತೀರಿ ಎಂದು ರಾಹುಲ್ ಗಾಂಧಿ ಅವರನ್ನು ನಾನು ಕೇಳುತ್ತಿರುವುದು ಇದು 14ನೆಯ ದಿನ. ಅವರು ಮೌನವಾಗಿದ್ದಾರೆ. ಅವರಿಗೆ ಮತ ಬ್ಯಾಂಕಿನ ಬಗ್ಗೆ ಚಿಂತೆ. ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಲಿದ್ದಾರೆ. ಒಂದು ದಿನ ನಾವು ಅಧಿಕಾರದಲ್ಲಿ ಇಲ್ಲದಿರುವಂತಾದರೆ, ಬಿಜೆಪಿಗರು ವಿರೋಧಪಕ್ಷದ ಸ್ಥಾನದಲ್ಲಿ ಕುಳಿತುಕೊಂಡರೆ, ಒಬ್ಬನೇ ಒಬ್ಬ ಬಿಜೆಪಿ ಕಾರ್ಯಕರ್ತ ಇರುವವರೆಗೂ ಕಾಶ್ಮೀರವನ್ನು ಭಾರತದಿಂದ ಯಾರೂ ಪ್ರತ್ಯೇಕಿಸಲಾರರು ಎಂದರು.
ಬಿಜೆಪಿ ಇರುವವರೆಗೂ, ಭಾರತವನ್ನು ವಿಭಜಿಸುವ ಘೋಷಣೆಗಳನ್ನು ಕೂಗುವವರು ಜೈಲಿನ ಕಂಬಿಗಳ ಹಿಂದೆ ಇರುಬೇಕಾಗುತ್ತದೆ ಎಂದು ಎಚ್ಚರಿಸಿದರು.