ವಿವಾಹಕ್ಕೆ ಹೋದ ಮೂವರು ಪೊಲೀಸರಿಗೆ ಕಡ್ಡಾಯ ರಜೆ!
ಕೊಪ್ಪಳ, ಜುಲೈ 20; ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ರಾಜಕೀಯ ಮುಖಂಡನ ಪುತ್ರನ ಮದುವೆಯಲ್ಲಿ ಪಾಲ್ಗೊಂಡಿದ್ದ ಮೂವರು ಪೊಲೀಸರನ್ನು ಕಡ್ಡಾಯ ರಜೆ ಮೇಲೆ ತೆರಳು ಆದೇಶ ನೀಡಲಾಗಿದೆ.
ಕೊಪ್ಪಳ ಎಸ್ಪಿ ಟಿ. ಶ್ರೀಧರ್ ಮಂಗಳವಾರ ಈ ಕುರಿತು ಆದೇಶ ನೀಡಿದ್ದಾರೆ. ಗಂಗಾವತಿ ಡಿವೈಎಸ್ಪಿ ರುದ್ರೇಶ್ ಉಜ್ಜನಕೊಪ್ಪ, ಗಂಗಾವತಿ ಗ್ರಾಮೀಣ ಸಿಪಿಐ ಉದಯರವಿ ಮತ್ತು ಕನಕಗಿರಿ ಪಿಎಸ್ಐ ತಾರಾಬಾಯಿ ವಿವಾಹದಲ್ಲಿ ಪಾಲ್ಗೊಂಡಿದ್ದರು.
ಯಲ್ಲಾಲಿಂಗ ಕೊಲೆ ಪ್ರಕರಣದ ಆರೋಪಿ ಹನುಮೇಶ ನಾಯಕ ಪುತ್ರ ಆನಂದ ನಾಯಕ ವಿವಾಹ ಕನಕಗಿರಿಯ ತಾಲೂಕಿನಲ್ಲಿ ಜುಲೈ 18ರಂದು ನಡೆದಿತ್ತು. ಮೂವರು ಅಧಿಕಾರಿಗಳು ಪೊಲೀಸ್ ಸಮವಸ್ತ್ರದಲ್ಲಿಯೇ ವಿವಾಹದಲ್ಲಿ ಪಾಲ್ಗೊಂಡಿದ್ದರು. ಈ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಮಾಧ್ಯಮಗಳಲ್ಲಿ ಈ ಕುರಿತು ವರದಿಗಳು ಪ್ರಸಾರವಾಗಿದ್ದವು. ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಮತ್ತು ಐಜಿಪಿ ನಿರ್ದೇಶನದ ಅನ್ವಯ ಮೂವರು ಪೊಲೀಸರನ್ನು ಕಡ್ಡಾಯ ರಜೆ ಮೇಲೆ ಕಳಿಸಲಾಗಿದೆ.
2015ರಲ್ಲಿ ವಿದ್ಯಾರ್ಥಿ ಯಲ್ಲಾಲಿಂಗ ಕೊಲೆ ನಡೆದಿತ್ತು. ಕೊಪ್ಪಳ ಮಾತ್ರವಲ್ಲದೇ ಇಡೀ ರಾಜ್ಯದಲ್ಲಿ ಈ ಹತ್ಯೆ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಸಿಐಡಿ ಈ ಕೊಲೆ ಪ್ರಕರಣದ ತನಿಖೆಯನ್ನು ನಡೆಸುತ್ತಿದೆ.
ಕೊಲೆ ಪ್ರಕರಣದ ಆರೋಪಿಗಳು ಜಾಮೀನಿನ ಮೇಲೆ ಹೊರಬಂದಿದ್ದಾರೆ. ಹನುಮೇಶ ನಾಯಕ ಸಹ ಪ್ರಕರಣದಲ್ಲಿ ಆರೋಪಿ. ಈತನ ಪುತ್ರನ ವಿವಾಹದಲ್ಲಿ ಪೊಲೀಸರು ಸಮವಸ್ತ್ರ ಧರಿಸಿ ಪಾಲ್ಗೊಂಡಿದ್ದರು.












Click it and Unblock the Notifications