Get Updates
Get notified of breaking news, exclusive insights, and must-see stories!

ಕಾರ್ಮಿಕ ನಾಯಕ ಅನಂತಸುಬ್ಬರಾವ್ ನಿಧನ: ಅಪ್ಪ ಸತ್ತ ನೋವಿನಲ್ಲೂ KSRTC ಕಾರ್ಮಿಕರ ಸಂಕಷ್ಟಕ್ಕೆ ಮಿಡಿದ ಮಗಳು

ಬೆಂಗಳೂರು: ದಶಕಗಳಿಂದ ಕಾರ್ಮಿಕರ ಪರವಾಗಿ ಹೋರಾಡಿದ ಜನಪ್ರಿಯ ಕಾರ್ಮಿಕ ಮುಖಂಡರಾದ ಮತ್ತು ಭಾರತ ಕಮ್ಯುನಿಸ್ಟ್ ಪಕ್ಷದ ಹಿರಿಯ ನಾಯಕ ಎಚ್‌.ವಿ. ಅನಂತಸುಬ್ಬರಾವ್ ಅವರು (85) ಹೃದಯಾಘಾತದಿಂದ ನಿಧನರಾದರು. ಅವರ ಸಾವಿನ ಘಳಿಗೆಯಲ್ಲೂ ಅವರ ಪುತ್ರಿ ಜ್ಯೋತಿ ಅನಂತಸುಬ್ಬರಾವ್ ಅವರು ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಅವರ ಸಾಮಾಜಿಕ ಕಳಕಳಿಗೆ, ತಂದೆಯಂತೆ ಕಾರ್ಮಿಕರ ಪರ ವಹಿಸಿದ ಕಾಳಜಿಗೆ ಕಾರ್ಮಿಕರು ಧನ್ಯವಾದ ತಿಳಿಸಿದ್ದಾರೆ.

ಅನಂತಸುಬ್ಬರಾವ್ ಅವರು ಲಕ್ಷಾಂತರ ಕಾರ್ಮಿಕ ಪರವಾಗಿ ಧ್ವನಿ ಎತ್ತಿದವರು. ಸರ್ಕಾರ ಗಮನ ಸೆಳೆಯುವಲ್ಲಿ ಮುಂಚೂಣಿಯಲ್ಲಿದ್ದರು. ಅವರ ನಿಧನ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿಯಾಗಿ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಸಿಎಂ ಸಂತಾಪ ಸೂಚಿಸಿದ ಹೊತ್ತಿನಲ್ಲೂ ಮಗಳ ಜ್ಯೋತಿ ಅನಂತಸುಬ್ಬರಾವ್ ಅವರು, 'ಸರ್ ದಯವಿಟ್ಟು ನೌಕರರ ಸಮಸ್ಯೆಗಳನ್ನು ಬಗೆಹರಿಸಿ. ಅವರಲ್ಲಿ ಅದೇ ಒಂದು ದೊಡ್ಡ ಕೊರಗಾಗಿತ್ತು. ನಾನು ನಿಮ್ಮಲ್ಲಿ ಈ ನೋವಿನ ಗಳಿಗೆಯಲ್ಲೂ ಕೇಳಿಕೊಳ್ಳುತ್ತೇನೆ' ಎಂದು ಸಿಎಂ ಫೇಸ್‌ಬುಕ್‌ ಪೋಸ್ಟ್ ಗೆ ಕಾಮೆಂಟ್ ಮಾಡಿ ಮನವಿ ಮಾಡಿದ್ದಾರೆ.

Ananth Subba Rao Passes Away His Daughter Jyothi Urges CM to Resolve KSRTC Workers Issues

ನೌಕರರ ಸಮಸ್ಯೆಗಳಿಗೆ ಮುಕ್ತಿ ಸಿಕ್ಕರೆ, ಅವರ ಬೇಡಿಕೆಗಳು ಈಡೇರಿದರೆ ತಂದೆ ಆತ್ಮಕ್ಕೆ ಶಾಂತಿ ಸಿಗಲಿದೆ. ಅವರ ಆಶಯ ಈಡೇರಲಿದೆ ಎಂಬರ್ಥದಲ್ಲಿ ಮಗಳ ಸಹ ಸರ್ಕಾರಕ್ಕೆ ವಿನಂತಿಸಿಕೊಂಡರು. ಸಾವಿನ ಮನೆಯಲ್ಲಿ ಸಾಮಾಜಿಕ ಕಾಳಜಿ ಮೆರೆಯುವುದು ಅಪರೂಪ. ಅಂತಹ ಮಾನವೀಯ ಕೆಲಸ ಜ್ಯೋತಿ ಅವರು ಮಾಡಿದ್ದಾರೆ. ಸಾರ್ವಜನಿಕರಿಗೆ ಮೃತರ ಪಾರ್ಥಿವ ಶರೀರ ಅಂತಿಮ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿದೆ.

ಅರಕಲಗೂಡು ತಾಲೂಕಿನ ಅನಂತ್‌ಸುಬ್ಬರಾವ್

ಅನಂತ್ ಸುಬ್ಬರಾವ್ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನವರು. 1990 ರ ದಶಕದಲ್ಲಿ ಟ್ರೇಡ್ ಯೂನಿಯನ್ ಚಳುವಳಿಗೆ ಪ್ರವೇಶಿಸಿದರು. ಅವರು ಎಲ್ಐಸಿ ನೌಕರರ ಸಂಘದಲ್ಲಿ ನಾಯಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ನಂತರ ರಾಜ್ಯದ ಅತ್ಯಂತ ಪ್ರಭಾವಶಾಲಿ ಕಾರ್ಮಿಕ ನಾಯಕರಲ್ಲಿ ಒಬ್ಬರಾಗಿ ಹೊರ ಹೊಮ್ಮಿದರು. ಭಾರತ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ಹಿರಿಯ ನಾಯಕರಾದ ಅವರು, ಕರ್ನಾಟಕ ವಿಧಾನಸಭಾ ಚುನಾವಣೆಗಳಲ್ಲಿ ಸಿಪಿಐ ಟಿಕೆಟ್‌ನಲ್ಲಿ ಸ್ಪರ್ಧಿಸಿದರು.

ರಾಜ್ಯದಲ್ಲಿ ಎಐಟಿಯುಸಿಯ ಅತೀ ಹೆಚ್ಚು ಕಾಲ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಮಾಡಿದರು. ಸ್ಕೀಮ್ ವರ್ಕರ್‌ಗಳು ಮತ್ತು ಸಾರ್ವಜನಿಕ ಸಾರಿಗೆ ನೌಕರರಂತಹ ಹೊಸ ವಲಯಗಳಿಗೂ ಸಂಘಟನೆ ವಿಸ್ತರಿಸಿ, ಅವರ ಸಮಸ್ಯೆಗಳಿಗೆ ಪರಿಹಾರ ಕೊಡಿಸುವ ಕೆಲಸ ಮಾಡಿದರು. ಅವರ ನಾಯಕತ್ವದಲ್ಲಿ, ಐಟಿಸಿ ಮತ್ತು ಎಂಐಸಿಒ ಬಾಷ್‌ನಂತಹ ಪ್ರಮುಖ ಕೈಗಾರಿಕೆಗಳಲ್ಲಿನ ಒಕ್ಕೂಟಗಳನ್ನು ಬಲಪಡಿಸಲಾಯಿತು. 50 ವರ್ಷಗಳಿಗೂ ಹೆಚ್ಚು ಕಾಲ, ಅವರು ಸಾರ್ವಜನಿಕ ಸಾರಿಗೆ ಕಾರ್ಮಿಕರೊಂದಿಗೆ ನಿಕಟವಾಗಿ ಕೆಲಸ ಮಾಡಿದರು. ಅವರ ನೇತೃತ್ವದಲ್ಲಿ ಅನೇಕ ಮುಷ್ಕರಗಳು ಮತ್ತು ಆಂದೋಲನಗಳು ನಡೆದವು. ಈ ವೇಳೆ ಅವರು ಸಾಕಷ್ಟು ಸಲ ಜೈಲು ಶಿಕ್ಷೆಗೆ ಗುರಿಯಾದರು. ಆದರೂ ಅಂಜದೇ ಕಾರ್ಮಿಕರ ಪರವಾಗಿ ನಿಂತಿದ್ದಾರೆ. ಪತ್ರಕರ್ತರಿಗೆ ಮೂಲ ಸೌಕರ್ಯ ಸಿಗಬೇಕೆಂದು ದನಿ ಎತ್ತಿದ್ದರು, ಹೋರಾಡಿದ್ದರು.

ಅನಂತ್ ಸುಬ್ಬರಾವ್‌ರ ಕುಟುಂಬ, ಸಾವಿನಲ್ಲೂ ಸಾರ್ಥಕತೆ

ಅನಂತ್ ಸುಬ್ಬರಾವ್ ಅವರಿಗೆ ಇಬ್ಬರು ಪುತ್ರಿಯರು. ಒಬ್ಬರು ರೇಖಾ ಮತ್ತೊಬ್ಬರು ಜ್ಯೋತಿ. ಅವರ ಹಿರಿಯ ಮಗಳು ರೇಖಾ ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ. ಜನವರಿ 30 ರೊಳಗೆ ಹಿಂದಿರುಗುವ ನಿರೀಕ್ಷೆಯಿದೆ. ಅವರು ಬಂದ ನಂತರ, ಕುಟುಂಬವು ಅವರ ದೇಹವನ್ನು ಸರ್ಕಾರಿ ವೈದ್ಯಕೀಯ ಕಾಲೇಜಿಗೆ ದಾನ ಮಾಡಲು ನಿರ್ಧರಿಸಿದೆ. ಇದು ಅವರ ಜೀವಮಾನದ ಸಾರ್ವಜನಿಕ ಸೇವೆಗೆ ಬದ್ಧತೆಯನ್ನು ಪ್ರತಿಬಿಂಬಿವಾಗಿದೆ. ಮುಖ್ಯವಾಗಿ ಕುಟುಂಬವು ಅವರ ನೇತ್ರದಾನಕ್ಕೂ ಒಪ್ಪಿಗೆ ನೀಡುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದೆ. ಸಾವಿನಲ್ಲೂ ಈ ಕುಟುಂಬ ಇತರರಿಗೆ ಮಾದರಿ ಆಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಗಣ್ಯರ ಸಂತಾಪ

ರಾಜಕೀಯ ವರ್ಣಪಟಲದಾದ್ಯಂತ ಸಂತಾಪಗಳು ಹರಿದು ಬಂದಿವೆ. ಎಕ್ಸ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ಭಾರತ ಕಮ್ಯುನಿಸ್ಟ್ ಪಕ್ಷದ ಹಿರಿಯ ನಾಯಕ ಹಾಗೂ ಜನಪ್ರಿಯ ಕಾರ್ಮಿಕ ಮುಖಂಡರಾದ ಎಚ್‌.ವಿ. ಅನಂತಸುಬ್ಬರಾವ್ ಅವರು ನಿಧನರಾದ ಸುದ್ದಿ ತಿಳಿದು ದುಃಖವಾಯಿತು. ಸುದೀರ್ಘ ನಾಲ್ಕು ದಶಕಗಳ ಕಾಲ ಕಾರ್ಮಿಕ ಮುಖಂಡರಾಗಿ ಅನೇಕ ಚಳವಳಿಗಳನ್ನು ಮುನ್ನಡೆಸಿದ್ದ ಹೋರಾಟಗಾರ ಅನಂತಸುಬ್ಬರಾವ್ ನನಗೂ ಆತ್ಮೀಯರಾಗಿದ್ದರು. ಅವರ ದಣಿವರಿಯದ ಹೋರಾಟದ ಛಲ ಮತ್ತು ಸೈದ್ಧಾಂತಿಕ‌ ಬದ್ಧತೆ ಹೋರಾಟಗಾರರಿಗೆ ಒಂದು ಮಾದರಿ.

ಅವರ ನಿರ್ಗಮನದಿಂದ ಸಮಾಜಕ್ಕೆ, ಮುಖ್ಯವಾಗಿ ಕಾರ್ಮಿಕ ವರ್ಗಕ್ಕೆ ತುಂಬಲಾರದ ನಷ್ಟವಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಲಭಿಸಲಿ, ಅವರ ಕುಟುಂಬವರ್ಗಕ್ಕೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಹೇಳಿದರು.

ಪ್ರಾಮಾಣಿಕ ಹೋರಾಟಗಾರ ಇನ್ನಿಲ್ಲ: ಬಸವರಾಜ ಬೊಮ್ಮಾಯಿ

ಕಾರ್ಮಿಕ ಮುಖಂಡ ಎಚ್. ವಿ. ಅನಂತಸುಬ್ಬರಾವ್ ಅವರು ಹೃದಯಾಘಾತದಿಂದ ನಿಧನ ಹೊಂದಿರುವ ಸುದ್ದಿ ಕೇಳಿ ಅತ್ಯಂತ ದುಖಃವಾಗಿದೆ. ಸುಮಾರು ನಾಲ್ಕು ದಶಕಗಳ ಕಾಲ ಕಾರ್ಮಿಕರ ಪರವಾಗಿ ನಿರಂತವಾಗಿ ಹೋರಾಟ ನಡೆಸಿದ್ದ ಅವರು ಕಾರ್ಮಿಕರಿಗೆ ನ್ಯಾಯ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಅಗಲಿಕೆಯಿಂದ ರಾಜ್ಯ ಒಬ್ಬ ಪ್ರಾಮಾಣಿಕ ಹೋರಾಟಗಾರನನ್ನು ಕಳೆದುಕೊಂಡಂತಾಗಿದೆ. ಅವರ ನಿಧನ ಕಾರ್ಮಿಕ ಸಂಘಟನೆಗಳಿಗೆ ತುಂಬಲಾರದ ನಷ್ಟ ಉಂಟುಮಾಡಿದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+