ಯುಕೆಪಿ: 1275 ಎಕರೆ ಭೂಸ್ವಾಧೀನ ಎತ್ತಿಹಿಡಿದ ಹೈಕೋರ್ಟ್
ಬೆಂಗಳೂರು ಜು.22. ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಮುಳುಗಡೆ ಸಂತ್ರಸ್ತರ ಪುನರ್ವಸತಿ ಉದ್ದೇಶಕ್ಕಾಗಿ 1275 ಎಕರೆ ಕೃಷಿ ಜಮೀನು ಸ್ವಾಧೀನಪಡಿಸಿಕೊಂಡ ಸರ್ಕಾರದ ಕ್ರಮವನ್ನು ಹೈಕೋರ್ಟ್ ವಿಭಾಗೀಯಪೀಠ ಎತ್ತಿಹಿಡಿದಿದೆ.
ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಬಾಗಲಕೋಟೆಯ ಸಚಿವ ಗೋವಿಂದ ಕಾರಜೋಳ ಅವರ ಪುತ್ರರಾದ ಗೋಪಾಲ ಹಾಗೂ ರವಿ ಮತ್ತಿತರು ಕೃಷಿಕರು ಸಲ್ಲಿಸಿದ್ದ ಮೇಲ್ಮನವಿಗಳನ್ನು ಧಾರವಾಡದ ವಿಭಾಗೀಯ ನ್ಯಾಯಪೀಠದಲ್ಲಿ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಪಿ.ಕೃಷ್ಣಭಟ್ ಅವರಿದ್ದ ನ್ಯಾಯಾಲಯ ವಜಾಗೊಳಿಸಿದೆ.
ವಾದ ಪ್ರತಿವಾದ ಆಲಿಸಿದ ಬಳಿಕ ನ್ಯಾಯಪೀಠ, ಬೃಹತ್ ಯೋಜನೆಗಳನ್ನು ಕೈಗೊಳ್ಳುವಾಗ ನ್ಯಾಯಾಲಯಗಳು ಎಂಜಿನಿಯರ್ ಅಥವಾ ಲೆಕ್ಕಿಗನ ಪಾತ್ರ ನಿರ್ವಹಿಸಬಾರದು. ಕೋರ್ಟ್ ಗಳು ಇಂತಹ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ, ಏಕೆಂದರೆ ಸರ್ಕಾರ ತಜ್ಞರ ಅಭಿಪ್ರಾಯ ಪಡೆದೇ ಯೋಜನೆಗಳನ್ನು ಕೈಗೊಂಡಿರುತ್ತದೆ ಎಂದು ಹೇಳಿದೆ. ಹಾಗಾಗಿ ಈ ಭೂ ಸ್ವಾಧೀನ ವಿಚಾರದಲ್ಲಿ ನ್ಯಾಯಪೀಠ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಮೇಲ್ಮನವಿಯನ್ನು ತಿರಸ್ಕರಿಸಿದೆ.
'ಸರ್ಕಾರವು, ನವನಗರಗಳನ್ನು ನಿರ್ಮಾಣ ಮಾಡುವಾಗ ಮತ್ತು ಸಾರ್ವಜನಿಕ ಉದ್ದೇಶಕ್ಕಾಗಿ ಕೃಷಿಕರ ಜಮೀನು ಸ್ವಾಧೀನಪಡಿಸಿಕೊಂಡಾಗ ಅದಕ್ಕೆ ಅನೇಕ ಸವಾಲುಗಳಿರುತ್ತವೆ. ಮುಳುಗಡೆ ಪ್ರದೇಶದ ಜನರಿಗೆ ನವನಗರ ಕಟ್ಟಿಕೊಡುವಾಗ ಸದ್ಯದ ಸ್ಥಿತಿಗತಿಗನ್ನು ಗಮನದಲ್ಲಿ ಇರಿಸಿಕೊಂಡೇ ಮುಂದುವರಿಯಬೇಕಾಗುತ್ತದೆ' ಎಂದು ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ.
"ಹಿಂದೆ ಇದ್ದ ರೀತಿಯಲ್ಲೇ ಹೊಸ ನಗರಗಳನ್ನೂ ನಿರ್ಮಾಣ ಮಾಡಬೇಕೆಂಬ ಧೋರಣೆ ಸಮರ್ಪಕ ಎನಿಸುವುದಿಲ್ಲ. ಸಾರ್ವಜನಿಕರ ಮೂಲಭೂತ ಅಗತ್ಯಗಳಾದ ಶಾಲಾ-ಕಾಲೇಜು, ವಿಶ್ವವಿದ್ಯಾಲಯ, ಕಾಲೇಜು ಇತ್ಯಾದಿಗಳ ದೊಡ್ಡ ಪಟ್ಟಿಯೇಗಳನ್ನು ಪೂರೈಸ ಬೇಕಾಗುತ್ತದೆ. ಅವುಗಳನ್ನೆಲ್ಲಾ ಜನರಿಗೆ ಮರು ಕಲ್ಪಿಸಿಕೊಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿರುತ್ತದೆ. ಆದ್ದರಿಂದ, ಈ ಪ್ರಕರಣದಲ್ಲಿ ಮುಚಖಂಡಿ ಮತ್ತು ಬಾಗಲಕೋಟೆ ಗ್ರಾಮ ವ್ಯಾಪ್ತಿಯ 1275 ಎಕರೆ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡ ಸರ್ಕಾರದ ಕ್ರಮ ನ್ಯಾಯೋಚಿತವಾಗಿದೆ' ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಆಲಮಟ್ಟಿ ಆಣೆಕಟ್ಟು ಎತ್ತರವನ್ನು 523 ರಿಂದ 525 ಮೀಟರ್ ಗೆ ಎತ್ತರಿಸುವಂತೆ ನ್ಯಾಯಮಂಡಳಿ ನೀಡಿದ್ದ ತೀರ್ಪಿನ ಅನುಸಾರ ಮುಳಗಡೆ ಪ್ರದೇಶದ ವಿಸ್ತೀರ್ಣವೂ ಹೆಚ್ಚಾಗಿತ್ತು. ಈ ನಿಟ್ಟಿನಲ್ಲಿ ಬಾಗಲಕೋಟೆಯ ನವನಗರ ನಿರ್ಮಾಣಕ್ಕಾಗಿ ಮತ್ತಷ್ಟು ಕೃಷಿ ಜಮೀನು ವಶಪಡಿಸಿಕೊಳ್ಳಲಾಗಿತ್ತು. ಆ ಕ್ರಮವನ್ನು ಪ್ರಶ್ನಿಸಲಾಗಿತ್ತು.
Recommended Video