Get Updates
Get notified of breaking news, exclusive insights, and must-see stories!

Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ

Sulekere: ಮಂಡ್ಯ ಜಿಲ್ಲೆಯ ನಾಗಮಂಗಲ ಮತ್ತು ಮದ್ದೂರು ತಾಲ್ಲೂಕಿನಲ್ಲಿರುವ ಸೂಳೇಕೆರೆಗಳ ಹೆಸರನ್ನು ಬದಲಾಯಿಸುವಂತೆ ಮಂಡ್ಯ ಜಿಲ್ಲಾ ಮಹಿಳಾ ಸಂಘಟನೆಗಳ ಒಕ್ಕೂಟ ಮನವಿ ಮಾಡಿದ್ದು, ಈ ಬಗ್ಗೆ ವ್ಯಾಪಕ ಚರ್ಚೆ ನಡೆದಿದೆ. ಈ ಬಗ್ಗೆ ಸಾಹಿತಿ, ಪತ್ರಕರ್ತ ಡಾ. ಎನ್. ಜಗದೀಶ್ ಕೊಪ್ಪ ಅವರ ಬರಹ ಇಲ್ಲಿದೆ.

ಮಂಡ್ಯ ನೆಲದ ನನ್ನ ಅಕ್ಕತಂಗಿಯರ ಗಮನಕ್ಕೆ. ನನ್ನ ದೃಷ್ಟಿಯಲ್ಲಿ ಸೂಳೇಕೆರೆ ಎಂಬ ಹೆಸರು ಬದಲಾವಣೆ ಅವಿವೇಕತನದ ಪರಮಾವಧಿ. ಇಂದು ಬೆಳಿಗ್ಗೆ ಮಿತ್ರ ಹಾಗೂ ಜಾನಪದ ತಜ್ಞ ವ.ನಂ. ಶಿವರಾಮು, ಈ ಪತ್ರವನ್ನು ನನಗೆ ಕಳಿಸಿಕೊಟ್ಟಿದ್ದರು. ಕಳೆದವಾರ, ಮಹಿಳಾ ಸಮಾವೇಶ ಕುರಿತು ಮಾತನಾಡಿದ ನನ್ನ ಜಿಲ್ಲೆಯ ಲೇಖಕಿಯರು, ಪದಗಳಿವೆ ಎದೆಯೊಳಗೆ ಕೃತಿಯಲ್ಲಿ ಮಂಡ್ಯ ಜಿಲ್ಲೆಯ ದೇವದಾಸಿಯರ ಕುರಿತು ಬರೆದಿದ್ದಾರಾ, ಎಂದು ಕೇಳಿದಾಗ, ಈ ತಾಯಂದಿರ ಕಥನ ಅಥವಾ ಇತಿಹಾಸ ಒಂದು ಜಿಲ್ಲೆಗೆ ಅಥವಾ ರಾಜ್ಯಕ್ಕೆ ಸೀಮಿತವಾಗಿಲ್ಲ. ನಾನು ಇಡೀ ದೇಶದ ಹಾಗೂ ಒಂದನೇ ಶತಮಾನದಿಂದ ಇಪ್ಪತ್ತನೇ ಶತಮಾನದವರೆಗೆ ದಾಖಲಿಸಿದ್ದೀನಿ ನೋಡ್ರವ್ವಾ ಎಂದು ವಿವರಿಸಿದೆ.

Sulekere

ಈಗ ಇದೇ ನನ್ನ ಅಕ್ಕತಂಗಿಯರು ಸೂಳೇಕೆರೆ ಎಂಬ ಹೆಸರನ್ನು ಬದಲಿಸಲು ಹೊರಟಿದ್ದಾರೆ. ಜೊತೆಗೆ ನಮ್ಮ ತಲೆಯೊಳಗೆ ಇರುವುದು ಮಿದುಳಲ್ಲ, ಸಗಣಿ ಎಂದು ಜಗತ್ತಿಗೆ ತೋರಿಸಿದ್ದಾರೆ. ಚಿತ್ರದುರ್ಗದ ಚಳ್ಳೇಕೆರೆ ಬಳಿ ಇರುವ ಇಡೀ ಭಾರತದಲ್ಲಿ ದೊಡ್ಡಕೆರೆಗಳಲ್ಲಿ ಒಂದಾದ ಸೂಳೇಕೆರೆಯ ಹೆಸರನ್ನು ಶಾಂತಿಸಾಗರ ಎಂದು ಬದಲಿಸಲು ಹೊರಟಾಗ, ಮಾಜಿ ಮುಖ್ಯಮಂತ್ರಿ ಜೆ.ಹೆಚ್. ಪಟೇಲರು, ಎಲ್ಲರಿಗೂ ಉಗಿದು ಬುದ್ಧಿ ಹೇಳಿದ್ದರು. ಸ್ಥಳೀಯ ಪಾಳೇಗಾರನ ಪುತ್ರಿ ಅಪ್ಪನ ಮಾತು ಮೀರಿ, ಪ್ರೀತಿಸಿದ ಯುವಕನನ್ನು ವಿವಾಹವಾಗುತ್ತಾಳೆ ( ಹೆಸರು ಮರೆತು ಹೋಗಿದೆ. ನನ್ನ ಕೃತಿಯಲ್ಲಿ ದಾಖಲಿಸಿದ್ದೀನಿ) ಶಾಂತವ್ವ ಎಂದು ನೆನಪು. ಆಕೆ ಅಪ್ಪನ ಪ್ರೀತಿ ಗಿಟ್ಟಿಸಲು ಕೆರೆ ಕಟ್ಟಿಸಲು ಮುಂದಾಗುತ್ತಾಳೆ. ಆಕೆ ಆಯ್ಕೆ ಮಾಡಿಕೊಂಡ ಸ್ಥಳ ದೇವದಾಸಿಯರು ವಾಸಿಸುತ್ತಿದ್ದ ಊರಾಚೆಗಿನ ಸ್ಥಳವಾಗಿರುತ್ತದೆ.

ಆಕೆ ಕೆರೆ ನಿರ್ಮಿಸುವ ವಿಷಯ ತಿಳಿಸಿದಾಗ, ಎಲ್ಲರೂ ಸ್ಥಳವನ್ನು ಉಚಿತವಾಗಿ ನೀಡಿ, ತಮ್ಮಲ್ಲಿದ್ದ ಚಿನ್ನ, ಹಣವನ್ನು ದಾನಮಾಡುತ್ತಾರೆ. ಇಂದು ನಾಡಿನಾದ್ಯಂತ ಇರುವ ಸೂಳೇಕೆರೆ ಹೆಸರಿನ ಹಿಂದೆ ಇಂತಹ ಔದಾರ್ಯದ ಮತ್ತು ದಾನದ ಕತೆಗಳಿವೆ. ಸೂಳೇಕೆರೆ ಹೆಸರು ಬದಲಾಗಬೇಕೆಂದು ಇಚ್ಛಿಸುವ ನನ್ನ ಅಕ್ಕತಂಗಿಯರಿಗೆ ಒಂದು ಮನವಿ. ನೀವು ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಸೋಮೇಶ್ವರ ದೇವಾಲಯದ ಹಿಂದೆ ಓರ್ವ ದೇವದಾಸಿ ನಿರ್ಮಿಸಿರುವ ನೂರು ಅಡಿ ಆಳವಿರುವ ಕಲ್ಯಾಣಿ ಇದೆ ನೋಡಿಬನ್ನಿ. ನಿಮಗೆ ಅಲ್ಲಿ ಅಥವಾ ಹುಬ್ಬಳ್ಳಿಯಲ್ಲಿ ಊಟ, ವಸತಿ ವ್ಯವಸ್ಥೆ ಮಾಡುತ್ತೇನೆ.

ಆ ಕಲ್ಯಾಣಿಯ ವಿನ್ಯಾಸ, ಮೆಟ್ಟಿಲು, ಹಾಕಿರುವ ಕಲ್ಲುಗಳನ್ನು ನೋಡಿದಾಗಲೆಲ್ಲಾ, ಸೋಮೇಶ್ವರನ ಬದಲಾಗಿ, ಆ ತಾಯಿಗೆ ಕೈ ಮುಗಿದು ಬಂದಿದ್ದೀನಿ. ಹತ್ತು ವರ್ಷದ ಹಿಂದೆ, ಹೂಳು ತುಂಬಿದ್ದ ಕಲ್ಯಾಣಿಯನ್ನು ಸುಧಾಮೂರ್ತಿಯವರು ಎರಡು ಕೋಟಿ ಖರ್ಚು ಮಾಡಿ ದುರಸ್ತಿ ಮಾಡಿಸಿದರು. ಸುಧಾಮೂರ್ತಿಯವರ ತಂದೆ ಲಕ್ಷ್ಮೇಶ್ವರದಲ್ಲಿ ಸರ್ಕಾರಿ ವೈದ್ಯರಾಗಿದ್ದ ಕಾರಣ, ಅವರ ಬಾಲ್ಯದ ವಿದ್ಯಾಭ್ಯಾಸ ಹಾಗೂ ಆಟ ಎಲ್ಲವೂ ಆ ಕಲ್ಯಾಣಿಯ ಹತ್ತಿರ ನಡೆದಿತ್ತು. ದಯವಿಟ್ಟು ನನ್ನ ಪದಗಳಿವೆ ಎದೆಯೊಳಗೆ ಕೃತಿಯನ್ನು ಓದಿರಿ. ಅದರಲ್ಲಿ ದೇವದಾಸಿಯರು ಕಟ್ಟಿಸಿದ ದೇಗುಲ. ಚಿನ್ನದ ಗೋಪುರ ಹಾಗೂ ಕೊಡುಗೆಯಾಗಿ ನೀಡಿದ ಚಿನ್ನದ ಆರತಿ ತಟ್ಟೆ, ಕೆರೆ, ಕಾಲುವೆ ಮತ್ತು ಅನ್ನ ಛತ್ರದ ವಿವರಗಳಿವೆ. ನಂತರ ನಿಮ್ಮ ನಿರ್ಧಾರ ತಿಳಿಸಿ.

ಒಂದು ವೇಳೆ ಮಂಡ್ಯ ಜಿಲ್ಲಾಡಳಿತ ಮಂಡ್ಯ ಜಿಲ್ಲೆಯ ಕೆರೆಗಳ ಹೆಸರನ್ನು ಬದಲಾಯಿಸಲು ಹೊರಟರೇ, ಜಿಲ್ಲಾಧಿಕಾರಿ ಕಚೇರಿ ಎದುರು ಗೆಳೆಯರ ಜೊತೆ ಉಪವಾಸ ಸತ್ಯಾಗ್ರಹ ಮಾಡಬೇಕಾಗುತ್ತದೆ. ಈ ವಿಷಯ ನಿಮ್ಮ ಗಮನದಲ್ಲಿರಲಿ. ಅಕ್ಕತಂಗಿಯರೇ, ಕಳೆದ ನಾಲ್ಕು ದಶಕಗಳಿಂದ ನಿಮ್ಮಿಂದ ಜಗಣ್ಣಾ ಎಂದು ಕರೆಸಿಕೊಂಡು, ಮಂಡ್ಯ ಜಿಲ್ಲೆಯ ಎಲ್ಲಾ ಮಹಿಳಾ ಹೋರಾಟಗಳಲ್ಲಿ ಪಾಲ್ಗೊಂಡವನು ನಾನು.. 26 ವರ್ಷದ ಹಿಂದೆ, ಎಸ್.ಎಂ. ಕೃಷ್ಣ ನೇತೃತ್ವದ ಸರ್ಕಾರ ಕೌಡ್ಲೆ ಸಮೀಪದ ಯಡವನಹಳ್ಳಿ ಮಹಿಳೆಯರ ಮೇಲೆಹಲ್ಲೆ ಮಾಡಿ, ಬಂಧಿಸಿದಾಗ, ಒಂದು ವಾರ ಕಾಲ ಜಿಲ್ಲಾಧಿಕಾರಿ ಕಚೇರಿ ಎದುರು ನಿಮ್ಮ ಜೊತೆ ಧರಣಿ ಕೂತು ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿ ಸರ್ಕಾರ ಮಣಿಯುವಂತೆ ಮಾಡಿದ್ದೆ.

ಮೈಸೂರಿನ ಜಿ.ಹೆಚ್. ನಾಯಕರ ಪತ್ನಿ ಮೀರಾನಾಯಕರು ನಲವತ್ತು ಮಹಿಳೆಯರನ್ನು ಮಂಡ್ಯಕ್ಕೆ ಕರೆದುಕೊಂಡು ಬಂದು ದಿನವಿಡಿ ಪ್ರತಿಭಟನೆ ನಡೆಸಿದ್ದರು. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ಭೀಮಯ್ಯನರ ಪುತ್ರಿ ಹಾಗೂ ವಕೀಲೆ ಮೈಸೂರಿನ ರಾಧಾಮಣಿಯವರು ಉಚಿತವಾಗಿ ಕಾನೂನು ಸಲಹೆ ನೀಡಿದ್ದರು. ಹೋರಾಟದಲ್ಲಿ ಪಾಲ್ಗೊಂಡಿದ್ದ ನನ್ನ ತಂಗಿಯರಾದ ಸುನಂದಾ ಜಯರಾಂ, ನಾಗರೇವಕ್ಕಾ, ಮತ್ತು ಶಶಿ ಕಲಾ ಈ ಮೂವರನ್ನು ಕೇಳಿದರೆ ನಿಮಗೆ ಹೋರಾಟದ ಇತಿಹಾಸ ಅರ್ಥವಾಗುತ್ತದೆ. ಯಾವ ಕಾರಣಕ್ಕೂ ನಮ್ಮ ಮಂಡ್ಯ ನೆಲದ ಆ ತಾಯಂದಿರ ಭವ್ಯ ಇತಿಹಾಸಕ್ಕೆ ಮಸಿ ಬಳಿಯಬೇಡಿ. ಸೋಮೇಶ್ವರದ ಕಲ್ಯಾಣಿಯ ಚಿತ್ರ ನೋಡಿ. ಇದನ್ನು ಸೂಳೆ ನಿರ್ಮಿಸಿದಳು ಎಂದು ಹೆಸರು ಬದಲಿಸಲು ಸಾಧ್ಯವೆ ?

- ಜಗದೀಶ್ ಕೊಪ್ಪ.

Sulekere: ಮಂಡ್ಯ ಜಿಲ್ಲಾ ಮಹಿಳಾ ಸಂಘಟನೆಗಳ ಒಕ್ಕೂಟದ ಮನವಿ ಏನು

ಮಂಡ್ಯ ಜಿಲ್ಲೆಯ ನಾಗಮಂಗಲ ಮತ್ತು ಮದ್ದೂರು ತಾಲ್ಲೂಕಿನಲ್ಲಿರುವ ಸೂಳೇಕೆರೆಗಳ ಹೆಸರನ್ನು ಬದಲಾಯಿಸುವಂತೆ ಮಂಡ್ಯ ಜಿಲ್ಲಾ ಮಹಿಳಾ ಸಂಘಟನೆಗಳ ಒಕ್ಕೂಟ ಮನವಿ ಮಾಡಿದೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಬಿಂಡಗನವಿಲೆ ರಸ್ತೆಯಲ್ಲಿರುವ ನಾಗಮಂಗಲದ ಅತ್ಯಂತ ದೊಡ್ಡಕೆರೆ ಸೂಳೇಕೆರೆ ಮತ್ತು ಮಂಡ್ಯ ಜಿಲ್ಲೆಯ ಅತೀ ದೊಡ್ಡ ಕೆರೆ ಮದ್ದೂರಿನ ಅಂಬರಹಳ್ಳಿ, ಕನ್ನಲಿ ಮಾರ್ಗದಲ್ಲಿರುವ ಸೂಳೇಕೆರೆಗಳಿಗೆ ಇರುವ ಹೆಸರನ್ನು ಬದಲಾಯಿಸಿ ಇತಿಹಾಸಕ್ಕೆ ಸೂಕ್ತವಾದ ಹೆಸರನ್ನು ಮರುನಾಮಕರಣ ಮಾಡಬೇಕು ಎಂದು ಮನವಿ ಮಾಡಿವೆ.

ಮಂಡ್ಯ ಜಿಲ್ಲೆಯ ಎಲ್ಲಾ ಮಹಿಳ ಸಂಘಟನೆಗಳ ಮುಖಂಡರು ಮತ್ತು ಆಸಕ್ತ ಮಹಿಳೆಯರು ಒಂದುಗೂಡಿ ಚರ್ಚಿಸಿ, "ಹೆಣ್ಣೇ ಹೆಣ್ಣನ್ನು ಗೌರವಿಸು" ಘೋಷಣೆಯೊಂದಿಗೆ ಸೂಳೇಕೆರೆ ಎಂಬ ಕೆರೆಗಳ ಹೆಸರನ್ನು ಬದಲಾಯಿಸಿ ಮುಂದಿನ ತಲೆಮಾರಿಗೆ ಇತಿಹಾಸವನ್ನು ಅಚ್ಚಳಿಸದೇ ಉಳಿಸುವ ನಿಟ್ಟಿನಲ್ಲಿ ಈ ಮೇಲ್ಕಂಡ ಕೆರೆಗಳ ಹೆಸರುಗಳನ್ನು ಬದಲಿಸಿ, ಹೆಣ್ತನವನ್ನು ಗೌರವಿಸಿ ಎಂದು ಆಗ್ರಹಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+