ಶಿಡ್ಲಘಟ್ಟ: ಜೋರಿದೆ ಜೆಡಿಎಸ್ ಬಂಡಾಯ ಅಭ್ಯರ್ಥಿಯ ಹವಾ
ಶಿಡ್ಲಘಟ್ಟ, ಮಾರ್ಚ್ 01: ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ ಜೆಡಿಎಸ್ ಹಲವು ಕ್ಷೇತ್ರಗಳಲ್ಲಿ ಬಂಡಾಯದ ಬಿಸಿ ಎದುರಿಸುತ್ತದೆ ಅದರಲ್ಲಿ ಒಂದು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಕ್ಷೇತ್ರ.
ಚಿಕ್ಕಬಳ್ಳಾಪುರ ಜಿಲ್ಲೆಯ ಜೆಡಿಎಸ್ನ ಪ್ರಮುಖ ನಾಯಕ ಎನಿಸಿಕೊಂಡಿರುವ ಬಿ.ಎಂ.ರವಿಕುಮಾರ್ ಅವರಿಗೆ ಜೆಡಿಎಸ್ ಟಿಕೆಟ್ ಕೈ ತಪ್ಪಿದ ಹಿನ್ನೆಲಯಲ್ಲಿ ಅವರು ಬಂಡಾಯ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ.
ಬೆಂಗಳೂರು ನಗರದ ಜೆಡಿಎಸ್ ಅಭ್ಯರ್ಥಿಗಳ ಪರಿಚಯ
ಕಳೆದ ಬಾರಿ ವಿಧಾನಸಭೆ ಚುನಾವಣೆ ಸಮಯ ಜೆಡಿಎಸ್ನ ಎಂ.ರಾಜಣ್ಣ ಜಯದಲ್ಲಿ ಪ್ರಮುಖ ಪಾತ್ರವಹಿಸಿದ್ದ ಬಿ.ಎಂ.ರವಿಕುಮಾರ್ ಅವರು ಕ್ಷೇತ್ರದಲ್ಲಿ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಚುನಾವಣೆ ಇನ್ನೂ ದೂರಿದ್ದಾಗಲೇ ಸಮಾಜಮುಖಿ ಕಾರ್ಯಗಳನ್ನು ಪ್ರಾರಂಭಿಸಿದ್ದ ಅವರು ಜನಗಳನ್ನು ತಮ್ಮತ್ತ ಸೆಳೆಯುವಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ ಎಂಬುದು ಸ್ಥಳೀಯ ವಿಶ್ಲೇಷಕರ ಅಭಿಪ್ರಾಯ.
ಬಗ್ಗದ ಜೆಡಿಎಸ್ ವರಿಷ್ಠರು
ಕ್ಷೇತ್ರದಲ್ಲಿ ಮಾಸ್ ನಾಯಕ ಎನಿಸಿಕೊಂಡಿರುವ ರವಿಕುಮಾರ್ ಅವರಿಗೆ ಟಿಕೆಟ್ ನೀಡದಿದ್ದಲ್ಲಿ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಶಿಡ್ಲಘಟ್ಟ ಹಾಗೂಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಪುರಸಭೆ, ಜಿಲ್ಲಾ ಪಂಚಾಯಿತಿಯ ಜೆಡಿಎಸ್ ಬೆಂಬಲಿತ ಜನಪ್ರತಿನಿಧಿಗಳು ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಎಚ್ಚರಿಕೆ ನೀಡಿದ್ದರು ಆಗ ಸಕಾರಾತ್ಮಕವಾಗಿ ಸ್ಪಂದಿಸಿದ್ದ ವರಿಷ್ಠರು ಆ ನಂತರ ಹಾಲಿ ಶಾಸಕರಿಗೇ ಟಿಕೆಟ್ ಎಂಬ ನಿಯಮ ರೂಪಿಸಿಕೊಂಡು ಅದರಂತೆ ಟಿಕೆಟ್ ಹಂಚಿದುರಿಂದ ರವಿಕುಮಾರ್ ಅವರು ಟಿಕೆಟ್ ವಂಚಿತವಾಗಿದ್ದಾರೆ ಎನ್ನಲಾಗಿದೆ.
ವರ್ಷಕ್ಕೂ ಮೊದಲೆ ಪ್ರಚಾರ ಕಾರ್ಯ ಆರಂಭ!
ಈ ಬಾರಿ ಚುನಾವಣೆ ನಿಲ್ಲುವ ಸ್ಪಷ್ಟ ಉದ್ದೇಶವಿದ್ದ ರವಿಕುಮಾರ್ ಅವರು ವರ್ಷಕ್ಕೆ ಮೊದಲೇ ಮತದಾರರನ್ನು ಸೆಳೆಯಲು ಹಲವು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಲೇ ಬಂದಿದ್ದರು. ಮುಸ್ಲಿಮರಿಗೆ 4.8 ಎಕರೆ ಉಚಿತ ಜಮೀನು ನೀಡಿಕೆ, 108 ಜೋಡಿಗೆ ಸಾಮೂಹಿಕ ಮದುವೆ ಕಾರ್ಯಕ್ರಮ, ಮಹಿಳೆಯರಿಗೆ ಓಂ ಶಕ್ತಿ ಪ್ರವಾಸ ಆಯೋಜನೆ, ಗರ್ಭಿಣಿ ಸ್ತ್ರೀಯರಿಗೆ 10000 ಹಣ ನೀಡಿಕೆ, ಅಂಗವಿಕಲರಿಗೆ ವಾಹನ, ಮಹಿಳೆಯರಿಗೆ ಹೊಲಿಗೆ ಯಂತ್ರ, ದೇವೇಗೌಡ ಅವರ ಹೆಸರಿನಲ್ಲಿ ಆಂಬುಲೆನ್ಸ್ ದಾನ ಇನ್ನೂ ಹಲವು ಕಾರ್ಯಕ್ರಮಗಳ ಮೂಲಕ ಜನಪ್ರಿಯತೆ ಗಳಿಸಿಕೊಂಡಿದ್ದಾರೆ.
ಓಂ ಶಕ್ತಿ ಯಶಸ್ವಿ
ಕಳೆದ ವಿಧಾನಸಭೆ ಚುನಾವಣೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಜೆಡಿಎಸ್ ಪಕ್ಷಕ್ಕೆ ಗೆಲುವು ತಂದು ಕೊಟ್ಟು ಉತ್ತಮ ಚುನಾವಣಾ ಚಾಣಾಕ್ಷ ಎನಿಸಿಕೊಂಡಿರುವ ರವಿಕುಮಾರ್ ಈ ಬಾರಿ ತಮ್ಮ ಗೆಲುವಿಗೆ ಮಹಿಳಾ ಮತದಾರರನ್ನು ನೆಚ್ಚಿಕೊಂಡಿದ್ದಾರೆ. ಹಾಗಾಗಿಯೇ ಗರ್ಭಿಣಿಯರಿಗೆ ಹಣ ಮತ್ತು ಕಿಟ್ ವಿತರಣೆ, ಹೊಲಿಗೆ ಯಂತ್ರ, ಹಸು ವಿತರಣೆ ಮಾಡಿದ್ದಾರೆ ಆದರೆ ಎಲ್ಲಕ್ಕಿಂತಲೂ ಪ್ರಮುಖವಾಗಿ ಓಂ ಶಕ್ತಿ ಪ್ರವಾಸ ಆಯೋಜನೆ ರವಿ ಅವರಿಗೆ ಭಾರಿ ಸಂಖ್ಯೆಯಲ್ಲಿ ಮಹಿಳಾ ಅಭಿಮಾನಿಗಳನ್ನು ಸೃಷ್ಠಿಸಿದೆ. ಇದರ ಜೊತೆ ಉತ್ತಮ ವಾಗ್ಮಿಯೂ ಆಗಿರುವ ರವಿ ಅವರು ಯುವಕರನ್ನೂ ಸೆಳೆದು ಯುವನಾಯಕ ಎನಿಸಿಕೊಂಡಿದ್ದಾರೆ.
ವರಿಷ್ಠರೊಂದಿಗೆ ಮಾತುಕತೆ
ಬಿ.ಎನ್.ರವಿಕುಮಾರ್ ಅವರೊಂದಿಗೆ ಹಳಸಿರುವ ಸಂಬಂಧವನ್ನು ಸಂಧಾನದ ಮೂಲಕ ಮತ್ತೆ ರೂಪಿಸಿಕೊಳ್ಳಲು ಶಾಸಕ ಎಂ.ರಾಜಣ್ಣ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ. ರವಿಕುಮಾರ್ ಬೆಂಬಲದ ಹೊರತಾಗಿ ಗೆಲವು ಕಷ್ಟಸಾಧ್ಯ ಎಂಬ ಅರಿವಿರುವ ಅವರು ಜೆಡಿಎಸ್ ವರಿಷ್ಠರ ಸಹಾಯದ ಮೂಲಕ ರವಿಕುಮಾರ್ ಅವರೊಂದಿಗೆ ಸಂಧಾನ ಮಾಡಿಕೊಮಡು ಅವರನ್ನು ಮತ್ತೆ ಜೆಡಿಎಸ್ಗೆ ಕರೆತರುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ ಎನ್ನಲಾಗಿದೆ. ದೇವೇಗೌಡ ಅವರ ಅಪ್ಪಟ ಭಕ್ತ ಎನಿಸಿಕೊಂಡಿರುವ ರವಿಕುಮಾರ್ ಅವರು ಚುನಾವಣೆ ಗೆದ್ದು ಜೆಡಿಎಸ್ಗೆ ಮರಳುವೆ ಎಂದು ಈಗಾಗಲೇ ಹೇಳಿದ್ದಾರೆ.
ಜನಪ್ರತಿನಿಧಿಗಳ ಬೆಂಬಲ
ಕಾಂಗ್ರೆಸ್ ನಲ್ಲೂ ವಿ.ಮುನಿಯಪ್ಪ ಮತ್ತು ಆಂಜಿನಪ್ಪ ಅವರುಗಳ ಮಧ್ಯೆ ಟಿಕೆಟ್ಗಾಗಿ ಹಣಾಹಣಿ ನಡೆಯುತ್ತಿರುವ ಕಾರಣ, ಜೆಡಿಎಸ್ ಬಂಡಾಯದ ಲಾಭವನ್ನು ಕಾಂಗ್ರೆಸ್ ಪಡೆಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಈಗ ಕ್ಷೇತ್ರದಲ್ಲಿ ಪಕ್ಷಾಂತರ ಪರ್ವ ನಡೆಯುತ್ತಿದ್ದು, ಹಲವು ಕಾಂಗ್ರೆಸ್ ಮುಖಂಡರು ಬಂಡಾಯ ಅಭ್ಯರ್ಥಿಯ ಪರ ಹಾಗೂ ಕೆಲವರು ಜೆಡಿಎಸ್ಗೆ ಬೆಂಬಲ ಘೋಷಿಸಿದ್ದಾರೆ. ಜೆಡಿಎಸ್ನಿಂದ ಕಾಂಗ್ರೆಸ್ಗೂ ಕೆಲವರು ಹಾರಿದ್ದಾರೆ. ಜೆಡಿಎಸ್ ನ ಪ್ರಮುಖ ನಾಯಕರು ಹಾಗೂ ಜನಪ್ರತಿನಿಧಿಗಳಾದ ಬಂಕ್ ಮುನಿಯಪ್ಪ, ನಾಗರಾಜ, ಲಕ್ಷ್ಮಿನಾರಾಯಣ, ಶಿವರೆಡ್ಡಿ, ತನುಜಾ ರಘು ಅವರುಗಳು ರವಿಕುಮಾರ್ ಬೆಂಬಲಕ್ಕೆ ನಿಂತಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ 2018: ಜೆಡಿಎಸ್ ಪ್ರಣಾಳಿಕೆ
ಜೆಡಿಎಸ್ ಮೊದಲ ಪಟ್ಟಿ : ರೆಬಲ್ ಶಾಸಕರ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ!
ಕರ್ನಾಟಕ ವಿಧಾನಸಭೆ ಚುನಾವಣೆ : ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ