ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಒಳಗೊಳಗೆ ಭುಗಿಲೆದ್ದ ಅಸಮಾಧಾನ?
ಬೆಂಗಳೂರು: ಪ್ರದೀಪ್ ಈಶ್ವರ್ ಹೆಸರು ಬಹುಶಃ ಈಗ ರಾಜ್ಯದ ಬಹುತೇಕರಿಗೆ ಚಿರಪರಿಚಿತ ಎನ್ನಬಹುದು. ಯಾಕಂದ್ರೆ ಹಾಲಿ ಸಚಿವರನ್ನ ಸೋಲಿಸಿ ಬಿಜೆಪಿಗೆ ಶಾಕ್ ಕೊಟ್ಟು ಗೆದ್ದಿದ್ದು ಶಾಸಕ ಪ್ರದೀಪ್ ಈಶ್ವರ್. ಆದರೆ ಪ್ರದೀಪ್ ಈಶ್ವರ್ ಗೆಲುವಿನಲ್ಲಿ ಪಾತ್ರ ವಹಿಸಿದ್ದ ಕಾಂಗ್ರೆಸ್ ಮುಖಂಡರೇ ಈಗ ಶಾಸಕರ ವಿರುದ್ಧ ಗರಂ ಆಗಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.
ಈ ಮೂಲಕ ಚಿಕ್ಕಬಳ್ಳಾಪುರ ಶಾಸಕರಾಗಿ ಪ್ರದೀಪ್ ಈಶ್ವರ್ ಆಯ್ಕೆಯಾಗಿ 1 ತಿಂಗಳು ಕಳೆದಿಲ್ಲ ಆಗಲೇ ಕಿರಿಕ್ ಶುರುವಾಯ್ತಾ? ಅನ್ನೋ ಡೌಟ್ ಹುಟ್ಟುಹಾಕಿದೆ. ಶಾಸಕರ ನಡೆಯ ಕುರಿತು ಕಾಂಗ್ರೆಸ್ ಪಕ್ಷದ ಕೆಲ ಸ್ಥಳೀಯ ಮುಖಂಡರು ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗ್ತಿದೆ. 'ನಮಸ್ತೆ ಚಿಕ್ಕಬಳ್ಳಾಪುರ' ಕಾರ್ಯಕ್ರಮದಿಂದ ಹಿಡಿದು ಇತ್ತೀಚಿನ ಕಾರ್ಯಕರ್ತರಿಗೆ ಕೃತಜ್ಞತಾ ಸಭೆ ತನಕ ಅಸಮಾಧಾನ ಡಬಲ್ ಆಗಿದೆ ಅನ್ನೋ ಮಾತುಗ ಕೇಳಿಬರುತ್ತಿದೆ. ಇಷ್ಟೇ ಅಲ್ಲ ರಾಜ್ಯ ಕಾಂಗ್ರೆಸ್ ನಾಯಕರಿಗೂ ತಮ್ಮ ಅಸಮಾಧಾನದ ಕುರಿತು ದೂರು ಹೋಗಿದೆಯಂತೆ!
ಫೋನ್ ಕಾಲ್ ಎತ್ತಲ್ವಾ?
ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಸ್ಥಳೀಯ ಕಾಂಗ್ರೆಸ್ ಮುಖಂಡರು ಅಸಮಾಧಾನ ಹೊರ ಹಾಕಲು ಕಾರಣ ಫೋನ್ ಕಾಲ್! ಅಷ್ಟಕ್ಕೂ ಚಿಕ್ಕಬಳ್ಳಾಪುರದ ನೂತನ ಶಾಸಕರಾಗಿರುವ ಪ್ರದೀಪ್ ಈಶ್ವರ್ ಮುಖಂಡರ ಕಾಲ್ ರಿಸೀವ್ ಮಾಡಲ್ಲ ಅನ್ನೋ ಆರೋಪ ಇದೆ. ಅಲ್ಲದೆ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುವುದು, ಮುಖಂಡರನ್ನು ವಿಶ್ವಾಸಕ್ಕೆ ಪಡೆಯದೆ ಏನು ಅನಿಸುತ್ತೋ ಅದನ್ನ ಮಾಡೋದು ಹೀಗೆ ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡರು ಶಾಸಕ ಪ್ರದೀಪ್ ಈಶ್ವರ್ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎನ್ನಲಾಗ್ತಿದೆ. ಇನ್ನೊಂದು ಪ್ರಮುಖ ಸಮಸ್ಯೆ ಕೂಡ ಇದೆ, ಆ ಬಗ್ಗೆ ಮಾಹಿತಿ ಮುಂದೆ ಓದಿ.
ಮಾಹಿತಿ ನೀಡಲ್ವಾ ಪ್ರದೀಪ್ ಈಶ್ವರ್?
ಹಾಗೇ ಇನ್ನೊಂದ್ಕಡೆ 'ನಮಸ್ತೆ ಚಿಕ್ಕಬಳ್ಳಾಪುರ' ಕಾರ್ಯಕ್ರಮದ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಪ್ರದೀಪ್ ಈಶ್ವರ್ ಸದ್ದು ಮಾಡ್ತಿದ್ದಾರೆ. ಈ ಕಾರ್ಯಕ್ರಮದ ಮೂಲಕವೇ ವಿರೋಧ ಪಕ್ಷಗಳ ನಾಯಕರ ಮನೆಗೂ ಭೇಟಿ ನೀಡ್ತಿದ್ದಾರಂತೆ ಪ್ರದೀಪ್ ಈಶ್ವರ್. ಈ ಎಲ್ಲಾ ಕಾರಣಕ್ಕೆ ಸ್ಥಳೀಯ ಮುಖಂಡರು ಗರಂ ಆಗಿದ್ದಾರೆ ಎನ್ನಲಾಗಿದೆ. ಗ್ರಾಮಕ್ಕೆ, ವಾರ್ಡ್ಗಳಿಗೆ ಭೇಟಿ ನೀಡುವ ವಿಚಾರ ಸ್ಥಳೀಯ ಮುಖಂಡರಿಗೂ ತಿಳಿಸುವುದಿಲ್ಲ ಎಂದು ಅಸಮಾಧಾನ ಭುಗಿಲೆದ್ದಿದೆ.
ದೂರು ನೀಡಿದ 'ಕೈ' ಮುಖಂಡರು?
'ನಮಸ್ತೆ ಚಿಕ್ಕಬಳ್ಳಾಪುರ' ಕಾರ್ಯಕ್ರಮದ ಮೂಲಕ ಬೆಳಗ್ಗೆ 6ರಿಂದ 9 ಗಂಟೆ ಮತ್ತು ಸಂಜೆ 6ರಿಂದ 9ರವರೆಗೆ ಖುದ್ದು ಶಾಸಕರು ಗ್ರಾಮಗಳಿಗೆ, ಮನೆಗೆ ಭೇಟಿ ನೀಡಿ ಜನರ ಕಷ್ಟ ಆಲಿಸುವ ಉದ್ದೇಶ ಹೊಂದಿದ್ದಾರೆ. ಆದ್ರೆ ಈ ವೇಳೆ ಸ್ಥಳೀಯ ಮುಖಂಡರನ್ನೇ ಮರೆತುಬಿಟ್ಟರೆ ಹೇಗೆ?ಇದೇ ಕಾರಣಕ್ಕೆ ಅಸಮಾಧಾನದ ಕುರಿತು ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡರು ಸಚಿವ ಡಾ.ಎಂ.ಸಿ.ಸುಧಾಕರ್, ಕಾಂಗ್ರೆಸ್ ನಾಯಕರಾದ ಎಂ.ಆರ್.ಸೀತಾರಾಂ & ಎಂ.ವೀರಪ್ಪ ಮೊಯಿಲಿ ಅವರ ಬಳಿ ದೂರು ನೀಡಿದ್ದಾರೆ ಹಾಗೂ ಅಸಮಾಧಾನ ವ್ಯಕ್ತಪಡಿಸಿದ್ದಾರಂತೆ.
ಎಲ್ಲಾ ಆರೋಪಕ್ಕೆ ಉತ್ತರವೂ ಸಿದ್ಧ!
ಹೀಗೆ ಶಾಸಕರ ಮೇಲೆ ಹಲವು ಆರೋಪ ಇರುವಂತೆ, ಇದೀಗ ಶಾಸಕರ ವಿರುದ್ಧ ಆರೋಪ ಮಾಡುತ್ತಿರುವ ಕೆಲವು ಸ್ಥಳೀಯ ಕಾಂಗ್ರೆಸ್ ಮುಖಂಡರ ವಿರುದ್ಧವೂ ಪ್ರತ್ಯಾರೋಪಗಳಿವೆ. ಆ ಪ್ರಕಾರ, ನೂತನ ಶಾಸಕರಿಗೆ ತಮ್ಮ ಕೆಲಸ ಮಾಡಿಸಿಕೊಡಿ ಅಂತಾ ಒತ್ತಡ ಹಾಕುತ್ತಾರೆ ಎಂದು ಶಾಸಕರ ಆಪ್ತರು ಪ್ರತ್ಯಾರೋಪ ಮಾಡ್ತಿದ್ದಾರೆ. ಇನ್ನೂ ಕೆಲ ಮುಖಂಡರು ಖುದ್ದು ತಾವೇ ಅಧಿಕಾರಿಗಳಿಗೆ ಕರೆ ಮಾಡಿ, ಒತ್ತಡ ಹಾಕುತ್ತಿರುವ ಆರೋಪ ಕೂಡ ಇದೆ. ಇಂತಹ ಕೆಲ ಮುಖಂಡರಿಂದ ಶಾಸಕರು ಅಂತರ ಕಾಯ್ದುಕೊಳ್ತಿದ್ದಾರೆ ಅನ್ನೋದು ಆಪ್ತರ ಮಾತು.
ಹೀಗೆ ಚಿಕ್ಕಬಳ್ಳಾಪುರ ರಾಜಕೀಯದಲ್ಲಿ 2023ರ ವಿಧಾನಸಭೆ ಚುನಾವಣೆ ದೊಡ್ಡ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಅತ್ತ ಹಾಲಿ ಸಚಿವರು ಸೋತಿದ್ದಾರೆ, ಇತ್ತ ಕಾಂಗ್ರೆಸ್ ಪಕ್ಷವು ಮತ್ತೆ ತನ್ನ ಕೋಟೆ ವಶಕ್ಕೆ ಪಡೆದಿದೆ. ಪರಿಸ್ಥಿತಿ ಹೀಗಿದ್ದಾಗಲೇ ಹೊಸ ಶಾಸಕರ ಕಾರ್ಯವೈಖರಿ ಬಗ್ಗೆ ಸ್ಥಳೀಯ ಮುಖಂಡರು ಗರಂ ಆಗಿದ್ದಾರೆ. ಆದ್ರೆ ಇದ್ರಲ್ಲಿ ಶಾಸಕರ ತಪ್ಪು ಇಲ್ಲ ಅಂತ ಆಪ್ತ ವಲಯ ಹೇಳುತ್ತಿದೆ. ಹೀಗಾಗಿ ಕಾಂಗ್ರೆಸ್ ನಾಯಕರು ಈ ಅಸಮಾಧಾನ ಬೆಂಕಿಯನ್ನ ಹತ್ತಿರದಿಂದ ಗಮನಿಸುತ್ತಿರೋದು ಸುಳ್ಳಲ್ಲ.