ಧರಂ ಸಿಂಗ್ ನಿಧನಕ್ಕೆ ರಾಜ್ಯದಾದ್ಯಂತ ಶಾಲೆ-ಕಾಲೇಜು ರಜೆ ಘೋಷಣೆ
ಬೆಂಗಳೂರು, ಜುಲೈ 27: ಮಾಜಿ ಮುಖ್ಯಮಂತ್ರಿ ಎನ್.ಧರಂ ಸಿಂಗ್ ಅವರು ನಿಧನರಾದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಗುರುವಾರ ಮಧ್ಯಾಹ್ನ ಶಾಲಾ-ಕಾಲೇಜುಗಳು ಹಾಗೂ ಸರಕಾರಿ ಕಚೇರಿಗಳಿಗೆ ರಜಾ ಘೋಷಣೆ ಮಾಡಿದೆ. ಶುಕ್ರವಾರ ಕಲಬುರಗಿ, ಬೀದರ್ ಜಿಲ್ಲೆಗಳ ಶಾಲೆ-ಕಾಲೇಜು ಹಾಗೂ ಸರಕಾರಿ ಕಚೇರಿಗಳಿಗೆ ರಜಾ ಘೋಷಿಸಲಾಗಿದೆ.
ರಾಜ್ಯದಾದ್ಯಂತ ಮೂರು ದಿನ ಶೋಕಾಚರಣೆ ಘೋಷಣೆಯಾಗಿದೆ. ಗುರುವಾರ ಸಂಜೆ ಕೆಪಿಸಿಸಿ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿದೆ. ಹಾವೇರಿಯಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿಗೆ ವಾಪಸಾಗಿದ್ದಾರೆ. ಧರಂ ಸಿಂಗ್ ಅವರ ಅಂತ್ಯಕ್ರಿಯೆ ಶುಕ್ರವಾರ ಕಲಬುರಗಿಯ ಜೇವರ್ಗಿಯ ನಾಗನಹಳ್ಳಿಯಲ್ಲಿ ನಡೆಯಲಿದೆ.

ಅದಕ್ಕೂ ಮುನ್ನ ಗುರುವಾರ ಬೆಂಗಳೂರಿನ ಧರಂ ಸಿಂಗ್ ಅವರ ನಿವಾಸದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಪಾರ್ಥಿವ್ ಶರೀರವನ್ನು ಇಡಲಾಗುವುದು.
ಎಂಬತ್ತು ವರ್ಷ ವಯಸ್ಸಿನ ಎನ್ ಧರಂ ಸಿಂಗ್ ಗುರುವಾರ ಬೆಳಗ್ಗೆ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಹೃದಯ ಸ್ತಂಭನದಿಂದ ಮೃತಪಟ್ಟರು. ಕರ್ನಾಟಕದ ಹದಿನೇಳನೇ ಮುಖ್ಯಮಂತ್ರಿ ಆಗಿ ಮೇ 28, 2004ರಿಂದ ಫೆಬ್ರವರಿ 3,2006ರವರೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟ ಸರಕಾರದಲ್ಲಿ ಮುಖ್ಯಮಂತ್ರಿ ಹುದ್ದೆ ನಿಭಾಯಿಸಿದ್ದರು.











Click it and Unblock the Notifications