ವಿವಾದಿತ ವಾಲ್ಮೀಕಿ ಯಾರು? ಪುಸ್ತಕ ಮುಟ್ಟುಗೋಲು
ಬೆಂಗಳೂರು, ಜು.25 : ವಾಲ್ಮೀಕಿ ಜನಾಂಗದ ಕೆಂಗಣ್ಣಿಗೆ ಗುರಿಯಾಗಿದ್ದ ವಿದ್ವಾಂಸ ಡಾ.ಕೆ.ಎಸ್.ನಾರಾಯಣಚಾರ್ಯ ಅವರು ಬರೆದ ವಾಲ್ಮೀಕಿ ಯಾರು? ಕೃತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲಿದೆ. ವಿಧಾನಪರಿಷತ್ತಿನಲ್ಲಿ ಸಭಾನಾಯಕ ಎಸ್.ಆರ್.ಪಾಟೀಲ್ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಕುರಿತು ಮಾಹಿತಿ ನೀಡಿದ್ದಾರೆ.
ಗುರುವಾರದ ವಿಧಾನ ಪರಿಷತ್ ಕಲಾಪದ ವೇಳೆ ಸಭಾನಾಯಕ ಎಸ್.ಆರ್.ಪಾಟೀಲ್ ಈ ವಿಷಯ ಪ್ರಕಟಿಸಿದ್ದಾರೆ. ವಾಲ್ಮೀಕಿ ಯಾರು? ಕೃತಿಯನ್ನು ನಿಷೇಧ ಮಾಡಬೇಕು ಎಂದು ಆಗ್ರಹಿಸಿದ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಸದಸ್ಯ ವಿ.ಎಸ್.ಉಗ್ರಪ್ಪ, ಸದನದ ಬಾವಿಗಿಳಿದು ಈ ಕುರಿತು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಗೆ ಮಣಿದ ಸರ್ಕಾರ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ನಿರ್ಧರಿಸಿದೆ ಮತ್ತು ಕೃತಿಯ ಬಗ್ಗೆ ರಾಜ್ಯದ ಹಲವು ಕಡೆ ದಾಖಲಾಗಿರುವ ದೂರುಗಳನ್ವಯ ಕೃತಿಕಾರರ ವಿರುದ್ಧ ಭಾರತೀಯ ದಂಡ ಸಂಹಿತೆಯಡಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಸ್.ಆರ್.ಪಾಟೀಲ್ ಸದನಕ್ಕೆ ಮಾಹಿತಿ ನೀಡಿದರು. [ವಾಲ್ಮೀಕಿ ಯಾರು? ಪುಸ್ತಕದ ವಿರುದ್ಧ ಭುಗಿಲೆದ್ದ ಆಕ್ರೋಶ]
ಉಗ್ರಪ್ಪ ಹೇಳಿದ್ದೇನು ? : ಸದನದಲ್ಲಿ ವಾಲ್ಮೀಕಿ ಯಾರು? ಪುಸ್ತಕದ ಕುರಿತು ಮಾತನಾಡಿದ ವಿ.ಎಸ್.ಉಗ್ರಪ್ಪ ಅವರು, ವಾಲ್ಮೀಕಿ ಬಗ್ಗೆ ಸಮಾಜದಲ್ಲಿ ಉತ್ತಮ ಗೌರವವಿದೆ. ಆದರೆ, ನಾರಾಯಣಾಚಾರ್ಯ ಅವರು ವಾಲ್ಮೀಕಿ ಬೇಡ ಜನಾಂಗದವನಲ್ಲ, ಬ್ರಾಹ್ಮಣ ಜನಾಂಗಕ್ಕೆ ಸೇರಿದವನು ಎಂದು ಕೃತಿಯಲ್ಲಿ ಬರೆದಿದ್ದಾರೆ ಎಂದರು.
ಕೃತಿಯಿಂದಾಗಿ ಜನಾಂಗದವರಿಗೆ ಸಾಕಷ್ಟು ನೋವು ಉಂಟಾಗಿದೆ. ಆದ್ದರಿಂದ ಸರ್ಕಾರ ಕೂಡಲೇ ಕೃತಿಯನ್ನು ನಿಷೇಧಿಸಬೇಕು, ಹೊರಬಂದಿರುವ ಕೃತಿಗಳನ್ನು ಸುಟ್ಟು ಹಾಕಬೇಕು ಎಂದು ಆಗ್ರಹಿಸಿದರು. ಜೆಡಿಎಸ್ ಸದಸ್ಯರಾದ ಬಸವರಾಜ ಹೊರಟ್ಟಿ, ಮರಿತಿಬ್ಬೇಗೌಡ ಅವರು ಕೃತಿಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರೆ, ಬಿಜೆಪಿಯ ನಾರಾಯಣ ಬಾಂಢಗೆ ಮತ್ತಿತರ ಸದಸ್ಯರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಹೊಸಪೇಟೆ ಬಂದ್ : ಸರ್ಕಾರ "ವಾಲ್ಮೀಕಿ ಯಾರು?" ಎಂಬ ಪುಸ್ತಕವನ್ನು ಮುಟ್ಟುಗೋಲು ಹಾಕಬೇಕು ಮತ್ತು ಪುಸ್ತಕ ಬರೆದ ಕೆ.ಎಸ್.ನಾರಾಯಣಾಚಾರ್ಯ ಅವರನ್ನು ಬಂಧಿಸಬೇಕು ಎಂದು ವಾಲ್ಮೀಕಿ ಜನಾಂಗದ ನಾಯಕರು ಕೆಲವು ದಿನಗಳ ಹಿಂದೆ ಒತ್ತಾಯಿಸಿದ್ದರು. ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಒತ್ತಾಯಿಸಿ ಹೊಸಪೇಟ್ ಬಂದ್ ನಡೆಸಿದ್ದರು.











Click it and Unblock the Notifications