ನಕಲಿ ಜಾತಿ ಪ್ರಮಾಣ ಪತ್ರ ಆರೋಪ, ಕೆಂಪಯ್ಯಗೆ ಕ್ಲೀನ್ ಚಿಟ್
ಬೆಂಗಳೂರು, ಆಗಸ್ಟ್ 29 : ಸರ್ಕಾರಿ ನೌಕರಿ ಪಡೆಯಲು ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿರುವ ಪ್ರಕರಣದಲ್ಲಿ ಕೆಂಪಯ್ಯ ಕ್ಲೀನ್ ಚಿಟ್ ಪಡೆದಿದ್ದಾರೆ. ದೂರಿನ ತನಿಖೆ ನಡೆಸಿದ ಎಸಿಬಿ, ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದೆ.
ದಿನೇಶ್ ಕಲ್ಲಹಳ್ಳಿ ಅವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಗೃಹ ಸಚಿವರ ಸಲಹೆಗಾರ ಕೆಂಪಯ್ಯ ವಿರುದ್ಧ ದೂರು ನೀಡಿದ್ದರು. ಸರ್ಕಾರಿ ಉದ್ಯೋಗ ಪಡೆಯಲು ಕೆಂಪಯ್ಯ ಅವರು ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ್ದಾರೆ ಎಂದು ಆರೋಪ ಮಾಡಿದ್ದರು.

ಕೆಂಪಯ್ಯ ಅವರು ಕಾಡು ಕುರುಬ ಜಾತಿಗೆ ಸೇರಿದವರಲ್ಲ. ಅವರು ಕುರುಬ ಜಾತಿಗೆ ಸೇರಿದವರು. ನಂತರ ಕಾಡು ಕುರುಬ ಎಂದು ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಸರ್ಕಾರಿ ಉದ್ಯೋಗ ಪಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ನಾಗರಿಕ ಹಕ್ಕು ನಿರ್ದೇಶನಾಲಯ (ಡಿಸಿಆರ್ಇ) ನೀಡಿರುವ ವರದಿಯನ್ನು ಆಧರಿಸಿ ಎಸಿಬಿ ಪ್ರಕರಣದಲ್ಲಿ ಕೆಂಪಯ್ಯ ಅವರಿಗೆ ಕ್ಲೀನ್ ಚಿಟ್ ನೀಡಿದೆ. ಕೆಂಪಯ್ಯ ಕಾಡು ಕುರುಬ ಸಮುದಾಯಕ್ಕೆ ಸೇರಿದವರು ಎಂದು ಡಿಸಿಆರ್ಇ ವರದಿ ನೀಡಿತ್ತು.
ಕೆಂಪಯ್ಯ ಅವರು 2017ರ ಮಾರ್ಚ್ನಲ್ಲಿ ಡಿಸಿಆರ್ಇಗೆ ಪತ್ರ ಬರೆದಿದ್ದರು. 2010ರಲ್ಲಿ ಕಂದಾಯ ನಿರೀಕ್ಷಕರು ನೀಡಿರುವ ಜಾತಿ ಪ್ರಮಾಣ ಪತ್ರ ನೀಡಿದ್ದರು. ಇದರಲ್ಲಿ ತಹಶೀಲ್ದಾರ್ ಸಹಿ ಇತ್ತು. ಕನಕಪುರ ತಾಲೂಕಿನ ಕಸಬ ಹೋಬಳಿ ಗೊಲ್ಲಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದ ಕಂದಾಯ ನಿರೀಕ್ಷಕರು ಕೆಂಪಯ್ಯ ಕಾಡು ಕುರುಬ ಸಮುದಾಯಕ್ಕೆ ಸೇರಿದವರು ಎಂದು ವರದಿ ನೀಡಿದ್ದರು.
ಕನಕಪುರ ಮೂಲದ ದಿನೇಶ್ ಕಲ್ಲಹಳ್ಳಿ ಅವರು ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ್ದು, 'ನಾನು ದೂರಿನ ಜೊತೆ ಸಲ್ಲಿಸಿದ್ದ ಪ್ರಮಾಣ ಪತ್ರಗಳನ್ನು ಎಸಿಬಿ, ಡಿಸಿಆರ್ಇ ಪರಿಶೀಲನೆ ನಡೆಸಿಲ್ಲ. ಎಸಿಬಿ ಮೇಲೆ ನನಗೆ ನಂಬಿಕೆ ಇಲ್ಲ' ಎಂದು ಹೇಳಿದ್ದಾರೆ.












Click it and Unblock the Notifications