ಸಿದ್ದರಾಮಯ್ಯ ಚಾಮುಂಡೇಶ್ವರಿ ಸ್ಪರ್ಧೆಗೆ ಹೈಕಮಾಂಡ್ ವಿರೋಧ
Recommended Video

ಬೆಂಗಳೂರು, ಏಪ್ರಿಲ್ 11: ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರಾ ಎಂಬುದರ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಸಿಎಂ ಸ್ಪರ್ಧೆಗೆ ಒಲವು ಹೊಂದಿದ್ದರೆ, ಹೈಕಮಾಂಡ್ ಮಾತ್ರ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ.
ಕ್ಷೇತ್ರದಲ್ಲಿ ಸಿದ್ದರಾಮಯ್ಯ ಗೆಲ್ಲುವುದು ಕಷ್ಟ ಎಂಬ ವರದಿಗಳು ಬರುತ್ತಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳಿಗೆ ಬೇರೆ ಕ್ಷೇತ್ರವನ್ನು ನೀಡಲು ಹೈಕಮಾಂಡ್ ಚಿಂತನೆ ನಡೆಸಿದೆ. ಆದರೆ ಸಿಎಂ ಮಾತ್ರ ತಮ್ಮ ನೆಚ್ಚಿನ ಚಾಮುಂಡೇಶ್ವರಿಯಲ್ಲೇ ಸ್ಪರ್ಧಿಸಲು ಒಲವು ಹೊಂದಿದ್ದು, ಇಲ್ಲಿ ಸ್ಪರ್ಧಿಸುವುದರಿಂದ ಪಕ್ಷಕ್ಕೆ ಲಾಭವಾಗಲಿದೆ ಎಂದು ಹೈಕಮಾಂಡ್ ಗೆ ಮನವರಿಕೆ ಮಾಡುತ್ತಿದ್ದಾರೆ.
ಆದರೆ ವಿರೋಧ ಪಕ್ಷಗಳೆಲ್ಲಾ ಸೇರಿ ಸಿದ್ದರಾಮಯ್ಯರನ್ನು ಸೋಲಿಸಬಹುದು ಎಂಬುದು ಹೈಕಮಾಂಡ್ ನ ಚಿಂತೆಯಾಗಿದೆ. ಅದರಲ್ಲೂ ಜೆಡಿಎಸ್ ನ ಜಿಟಿ ದೇವೇಗೌಡ ಮತದಾರರನ್ನು ದೊಡ್ಡ ಮಟ್ಟಕ್ಕೆ ಸೆಳೆಯುತ್ತಿರುವುದು ಹೈಕಮಾಂಡ್ ಗೆ ತಲೆನೋವಾಗಿದೆ. ಕ್ಷೇತ್ರದಲ್ಲಿ 2.5 ಲಕ್ಷ ಮತದಾರರಿದ್ದು ಇದರಲ್ಲಿ 70,000 ಒಕ್ಕಲಿಗ ಮತಗಳಿವೆ. ದೇವೇಗೌಡರು ಒಕ್ಕಲಿಗರ ಕಣ್ಮಣಿಯಾಗಿ ಕ್ಷೇತ್ರದಲ್ಲಿ ಮೂಡಿ ಬಂದಿರುವುದು ಸಿಎಂ ಗೆಲುವಿಗೆ ತೊಡರುಗಾಲು ಆಗಬಹುದು ಎನ್ನಲಾಗಿದೆ.

ಇದರ ಬದಲು ಹೈಕಮಾಂಡ್ ಬಾಗಲಕೋಟೆ ಜಿಲ್ಲೆಯ ಬದಾಮಿಯಿಂದ ಸ್ಪರ್ಧಿಸುವಂತೆ ಸಿದ್ದರಾಮಯ್ಯನವರಿಗೆ ಸಲಹೆ ನೀಡಿದೆ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕುರುಬ ಮತದಾರರು ಇರುವುದೇ ಇದಕ್ಕೆ ಕಾರಣ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ಆದರೆ ಸಿದ್ದರಾಮಯ್ಯ ಎಸ್.ಎಂ. ಕೃಷ್ಣ ಉದಾಹರಣೆಯನ್ನು ನೀಡಿ ಹೈಕಮಾಂಡ್ ನ್ನು ಎಚ್ಚರಿಸಿದ್ದಾರೆ. 2004ರಲ್ಲಿ ಕೃಷ್ಣ ಮಂಡ್ಯದ ಮದ್ದೂರು ಬಿಟ್ಟು ಚಾಮರಾಜಪೇಟೆ ಸ್ಪರ್ಧಿಸಿದರು ಇದರಿಂದ ಜನರಲ್ಲಿ ಕೆಟ್ಟ ಅಭಿಪ್ರಾಯ ಸೃಷ್ಟಿಯಾಗಿ ಕಾಂಗ್ರೆಸ್ ಸೋಲಬೇಕಾಯಿತು ಎಂದು ಹೇಳಿದ್ದಾರೆ. ಇದೀಗ ಹೈಕಮಾಂಡ್ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವ ನಿರ್ಧಾರ ಸೇರಿದಂತೆ ಈ ಕುರಿತು ತೀರ್ಮಾನ ತೆಗೆದುಕೊಳ್ಳಲು ಸಿದ್ದರಾಮಯ್ಯನವರಿಗೆ ಸ್ವಾತಂತ್ರ್ಯ ನೀಡಿದೆ.











Click it and Unblock the Notifications