ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ
ಬೆಂಗಳೂರು: ಬೆಂಗಳೂರಿನಲ್ಲಿ ಅಡುಗೆ ಅನಿಲ ಸಿಲಿಂಡರ್ ಪೂರೈಕೆ ಸಮಸ್ಯೆ ತೀವ್ರವಾಗಿ ಬಿಗುಡಾಯಿಸುತ್ತಿದೆ. ವಾಣಿಜ್ಯ ಅನಿಲ ಸಿಲಿಂಡರ್ಗಳ ಪೂರೈಕೆ ಅಡಚಣೆಗಳ ಮಧ್ಯೆ ದೇಶೀಯ ಅನಿಲ ಸಿಲಿಂಡರ್ಗಳ ಪೂರೈಕೆಯ ಸಮಸ್ಯೆ ಹೆಚ್ಚಾಗಿದೆ ಎಂದು ಬೆಂಗಳೂರಿನ ನಿವಾಸಿಗಳು ದೂರಿದ್ದಾರೆ. ಹಲವು ಬಾರಿ ಬುಕಿಂಗ್ಗೆ ಪ್ರಯತ್ನಿಸಿದರೂ ಸಹಿತ 'ನೀವು ಇತ್ತೀಚೆಗೆ ಸಿಲಿಂಡರ್ ಖರೀದಿಸಿದ್ದೀರಿ. ಈಗ ಮತ್ತೆ ನಿಮಗೆ ಸಿಲಿಂಡರ್ ಬುಕ್ ಮಾಡಲು ಸಾಧ್ಯವಿಲ್ಲವೆಂದು' ಮೊಬೈಲ್ಗೆ ಸಂದೇಶ ಬಂದದ್ದು ನೋಡಿ ನಾಗರಿಕರು ದಂಗಾಗಿದ್ದಾರೆ. ಏಜೆನ್ಸಿಗಳ ಅಕ್ರಮ ವ್ಯವಹಾರ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. 3000 ರೂಪಾಯಿ ನಿಡಿ ಕಾಳಸಂತೆಯಲ್ಲಿ ಸಿಲಿಂಡರ್ ಖರೀದಿಸುತ್ತಿದ್ದಾರೆ.
ಹೌದು, ಕೆಲವು ಏಜೆನ್ಸಿಗಳು ದೇಶೀಯ ಅನಿಲ ಸಿಲಿಂಡರ್ ದಾಸ್ತಾನು ಅನ್ನು ಇಂದಿನ ಸನ್ನಿವೇಶದಲ್ಲಿ ಹೆಚ್ಚು ಹಣ ನೀಡುವ ಹೋಟೆಲ್, ರೆಸ್ಟೋರೆಂಟ್ ಹಾಗೂ ಇನ್ನಿತರ ಉದ್ಯಮಿಗಳಿಗೆ ಕೊಡುತ್ತಿದ್ದಾರೆ. ಮೂರು ಪಟ್ಟು ಹಣ ನೀಡುವವರಿಗೆ ಸಿಲಿಂಡರ್ ಸಿಗುತ್ತಿದೆ. ಬುಕಿಂಗ್ ತಡೆ ಹಿಡಿಯುವ ಮೂಲಕ ಏಜೆನ್ಸಿಗಳು ಗ್ರಾಹಕರಿಗೆ ಮೋಸ ಮಾಡುತ್ತಿವೆ ಎಂದು ನಾಗರಿಕರು ಅಸಮಾಧಾನ ಹೊರ ಹಾಕುತ್ತಿದ್ದಾರೆ.

ಬುಕಿಂಗ್ಗೆ ನಿರ್ಬಂಧ, ಸುಳ್ಳು ಸಂದೇಶ ರವಾನೆ, ಅಕ್ರಮ
ವೈಟ್ಫೀಲ್ಡ್ನ ಅನುಭಾ ಗುಪ್ತಾ ಅವರು ಮಂಗಳವಾರ ಅಪ್ಲಿಕೇಶನ್ಗೆ ಲಾಗಿನ್ ಆಗಿ ಅಡುಗೆ ಅನಿಲ ಬುಕಿಂಗ್ಗೆ ಪ್ರಯತ್ನಿಸಿದ್ದಾರೆ. ಎಚ್ಪಿ ಗ್ಯಾಸ್ ಏಜೆನ್ಸಿಗೆ ಸುಮಾರು 12 ಗಂಟೆಗಳಿಂದ ಕರೆ ಮಾಡಿದರು ಪ್ರಯೋಜನವಾಗಿಲ್ಲ. ಕೊನೆಗೆ ತಮಗೆ ಆರ್ಡರ್ ಮಾಡಲು ಅವಕಾಶ ನೀಡದೇ, ನಿರ್ಬಂಧಿಸಿರುವ ಸಂದೇಶವನ್ನು ಅವರು ಸ್ವೀಕರಿಸಿದ್ದಾರೆ.
ಒಬ್ಬರ ಹೆಸರಿನಲ್ಲಿ 7 ಸಿಲಿಂಡರ್ ಬುಕ್, ಗ್ರಾಹಕ ಶಾಕ್
ಮತ್ತೊಬ್ಬ ನಾಗರಿಕರು ಅಪ್ಲಿಕೇಶನ್ ಮೂಲಕ ಗ್ಯಾಸ್ ಬುಕಿಂಗ್ ಮಾಡಲು ಯತ್ನಿಸಿದ್ದಾರೆ. 'ನೀವು 2 ವಾರಗಳಲ್ಲಿ ಈಗಾಗಲೇ ಸಿಲಿಂಡರ್ ಬುಕ್ ಮಾಡಿ ಪಡೆದಿದ್ದೀರಿ. ಇನ್ನು ಮುಂದೆ ಬುಕ್ ಮಾಡಲು ನಿಮಗೆ ಅವಕಾಶ ಇರುವುದಿಲ್ಲ' ಎಂಬ ಸಂದೇಶ ಬಂದಿದೆ. ಎರಡು ವಾರದ ಹಿಂದೆ ನಾನು ಸಿಲಿಂಡರ್ ಬುಕ್ ಮಾಡಿಲ್ಲ. ಇತ್ತೀಚೆಗೆ ಹೊಸ ಸಿಲಿಂಡರ್ ಪಡೆಯದಿದ್ದರೂ ಈ ರೀತಿ ಸಂದೇಶ ಏಕೆ ಬಂದಿದೆ? ಎಂದು ಅವರು ಅಪ್ಲಿಕೇಷನ್ ಇತಿಹಾಸ ಪರಿಶೀಲಿಸಿದಾಗ ಅವರ ಹೆಸರಿನಲ್ಲಿಸುಮಾರು 7 ಸಿಲಿಂಡರ್ಗಳು ಬುಕ್ ಆಗಿದ್ದು ಪತ್ತೆ ಆಗಿದೆ. ಇದನ್ನು ನೋಡಿ ಅವರಿಗೆ ಆಘಾತವಾಗಿದೆ.
ಸಿಲಿಂಡರ್ ನೀಡದೇ ಡೆಲಿವರಿ ಮೆಸೆಜ್ ರವಾನೆ
ಬೊಮ್ಮಸಂದ್ರ ನಿವಾಸಿ ಆಕಾಶ್ ಎಂಬುವವರು ಮಾರ್ಚ್ 11 ರಂದು ವಿಫಲ ಯತ್ನಗಳ ಬಳಿಕ ಯಶಸ್ವಿಯಾಗಿ ಭಾರತ್ ಗ್ಯಾಸ್ ಸಿಲಿಂಡರ್ ಬುಕ್ ಮಾಡಿದ್ದಾರೆ. ಮಾರನೇ ದಿನ ಮಾರ್ಚ್ 12 ರಂದು ನಿಮಗೆ ಸಿಲಿಂಡರ್ ಡೆಲಿವರಿ ಕೊಡಲಾಗಿದೆ ಎಂಬ ಸಂದೇಶ ಅವರ ಮೊಬೈಲ್ಗೆ ಬಂದಿದೆ. ಆದರೆ ಇದು ಸಂದೇಶಕ್ಕೆ ಸೀಮಿತವಾಗಿದ್ದು, ಅವರು ಭೌತಿಕವಾಗಿ ಅವರು ಸಿಲಿಂಡರ್ ಸ್ವೀಕರಿಸಿರಲಿಲ್ಲ. ಇದೆಲ್ಲ ನೋಡಿದರೆ ಏಜೆನ್ಸಿಯವರು ಗ್ರಾಹಕರಿಗೆ ನೀಡುವ ಸಿಲಿಂಡರ್ಗಳನ್ನು ಕಾಳಸಂತೆಗೆ ಒದಗಿಸುತ್ತಿದ್ದಾರೆ. ಹೆಚ್ಚಿನ ಹಣಕ್ಕೆ ಮಾರುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ ಎಂದು ಜನ ದೂರಿದ್ದಾರೆ.
ಬೆಂಗಳೂರಲ್ಲಿ ದುಪ್ಪಟ್ಟು ಹಣಕ್ಕೆ ಅನಿಲ ಮಾರಾಟ
ಬನಶಂಕರಿ, ಕನಕಪುರ ರಸ್ತೆ, ಗುಂಜೂರು, ಬನ್ನೇರುಘಟ್ಟ ರಸ್ತೆ, ರಾಜಾಜಿನಗರ ಮತ್ತು ಓಕಳಿಪುರಂ, ಬೊಮ್ಮಸಂದ್ರ ಸೇರಿ ಇನ್ನಿತತ ಕಡೆಗಳಲ್ಲಿ ಇಂಡೇನ್ ಗ್ಯಾಸ್ ಏಜೆನ್ಸಿಗಳ ಕಳೆದ ಎರಡು ದಿನಗಳಿಂದ ದೂರವಾಣಿಗೆ ಲಭ್ಯವಾಗಿಲ್ಲ. ್ಗ್ರಾ ಗ್ರಾಹಕರಿಗೆ ಸ್ಪಂದಿಸುತ್ತಿಲ್ಲ ಎಂಬ ಸಾಕಷ್ಟು ದೂರುಗಳು ನೀಡುತ್ತಿದ್ದಾರೆ. ನಿರಂತರ ಪ್ರಯತ್ನದ ನಂತರವು ಗ್ಯಾಸ್ ಪಡೆಯುವಲ್ಲಿ ವಿಫಲವಾದ ಗ್ರಾಹಕರು ಕಪ್ಪು ಮಾರುಕಟ್ಟೆಯಲ್ಲಿ 1,600- 3,000 ರೂಪಾಯಿ ನೀಡಿ ಅನಿಲ ಸಿಲಿಂಡರ್ ಖರೀದಿಸಿದ್ದಾರೆ. ಇಂತಹ ಬೆಳವಣಿಗೆ ವಿರುದ್ಧ ಸರ್ಕಾರ ಕಠಿಣ ನಿರ್ಧಾರ ಕೈಗೊಳ್ಳಬೇಕೆಂದು ಅವರು ತಿಳಿಸಿದ್ದಾರೆ.
ಗ್ಯಾಸ್ ಬುಕ್ ಮಾಡುತ್ತಿದ್ದಂತೆ ಖಚಿತತೆಯ ಸಂದೇಶ ಬರುತ್ತದೆ. ನಂತರ ನಿಗದಿತ ಅವಧಿಯೊಳಗೆ (72 ಗಂಟೆ) ಗ್ರಾಹಕರು ಸಿಲಿಂಡರ್ ಸ್ವೀಕರಿಸುತ್ತಾರೆ. ಈ ಸಾಮಾನ್ಯ ವ್ಯವಸ್ಥೆಗೆ ಬ್ರೇಕ್ ಬಿದ್ದಿದೆ. ಬುಕ್ ಮಾಡಿದವರಿಗೆ ಸಂದೇಶ ಬರುತ್ತಿಲ್ಲ. ಕೆಲವರಿಗೆ ಸಿಲಿಂಡರ್ಗಳೇ ಬರುತ್ತಿಲ್ಲ. ಇನ್ನೂ ಕೆಲವರ ಹೆಸರಿನಲ್ಲಿ ಹಲವಾರು ಸಿಲಿಂಡರ್ ಬುಕ್ ಆಗಿ ಕಾಳಸಂತೆಯಲ್ಲಿ ದುಪ್ಪಟ್ಟು ದರಕ್ಕೆ ಮಾರಾಟವಾಗುತ್ತಿವೆ. ಏಜೆನ್ಸಿಗಳು ಇರಲ್ಲಿ ಶಾಮೀಲಾಗಿದ್ದು, ಇಂತಹ ಅಕ್ರಮಕ್ಕೆ ತಡೆ ನೀಡುವಂತೆ ಬೆಂಗಳೂರು ನಾಗರಿಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.












Click it and Unblock the Notifications