ರಂಜಾನ್ ಮಾಸಕ್ಕೂ ಭಯೋತ್ಪಾದಕರ ದಾಳಿಗೂ ಇದೆಂಥ ನಂಟು!?
ರಂಜಾನ್ ತುಂಬ ಪವಿತ್ರವಾದ ಮಾಸ. ಇಸ್ಲಾಂನಲ್ಲಿ ಬಹಳ ಪ್ರಾಶಸ್ತ್ಯ ನೀಡುವ ಈ ಮಾಸದಲ್ಲಿ ಉಗ್ರಗಾಮಿಗಳು ದಾಳಿ ನಡೆಸುವುದು ಕೂಡ ಹೆಚ್ಚು. ಈ ವರ್ಷ ಮೇ ಇಪ್ಪತ್ತಾರರಿಂದ ರಂಜಾನ್ ಅರಂಭವಾಗಿದೆ. ಲಂಡನ್ ನಲ್ಲಿ ನಡೆದ ಭಯೋತ್ಪಾದಕರ ದಾಳಿಯೂ ಸೇರಿದಂತೆ ಒಟ್ಟು ನೂರಾ ನಲವತ್ತೊಂಬತ್ತು ಮಂದಿ ಬಲಿಯಾಗಿದ್ದಾರೆ. ಈ ಸಂಖ್ಯೆ ಇನ್ನೂ ಹೆಚ್ಚಾಗುವಂತಿದೆ.
ಉಗ್ರ ಸಂಘಟನೆಗಳು ರಂಜಾನ್ ಮಾಸದಲ್ಲೇ ಪ್ರಮುಖ ದಾಳಿಗಳನ್ನು ಸಂಘಟಿಸುತ್ತವೆ. ಇಂಥ ಪವಿತ್ರ ಮಾಸದಲ್ಲಿ ಆತ್ಮಾಹುತಿಗೆ ಮುಂದಾಗುವವರಿಗೆ ಹೆಚ್ಚಿನ ಆಮಿಷ ಕೂಡ ಒಡ್ಡಲಾಗುತ್ತದೆ.
ಬಾಗ್ದಾದ್ ನಲ್ಲಿ ನಡೆದ ಅವಳಿ ಸ್ಫೋಟ, ಆಫ್ಘಾನಿಸ್ತಾನದ ದಾಳಿ, ಮನಿಲಾದ ಕ್ಯಾಸಿನೋದಲ್ಲಿ ನಡೆದ ಸ್ಫೋಟ ಹಾಗೂ ಮೊನ್ನೆ ಶನಿವಾರದ ಲಂಡನ್ ನ ದಾಳಿಯ ಲೆಕ್ಕವೂ ಸೇರಿ ನೂರಾರು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ.[ಮತ್ತಷ್ಟು ದಾಳಿ ಐಸಿಸ್ ನಿಂದ ಪಾಶ್ಚಿಮಾತ್ಯ ದೇಶಗಳಿಗೆ ಬೆದರಿಕೆ]
ಬಾಗ್ದಾದ್ ನಲ್ಲಿ ಗುರಿ ಮಾಡಿಕೊಂಡಿದ್ದು ಐಸ್ ಕ್ರೀಂ ಮಾರಾಟ ಮಳಿಗೆ ಹಾಗೂ ವೃದ್ಧಾಪ್ಯ ವೇತನ ವಿತರಿಸುವ ಕೇಂದ್ರವನ್ನು. ಐಸ್ ಕ್ರೀಂ ಮಳಿಗೆಯಲ್ಲಿ ಮಕ್ಕಳು ಕುಟುಂಬದ ಜತೆಗೆ ಬಂದಿದ್ದವರು ಸೇರಿ ಹತ್ತು ಮಂದಿ ಉಸಿರು ಚೆಲ್ಲಿದರು. ಮೊದಲ ಬಾಂಬ್ ಸ್ಫೋಟದಲ್ಲಿ ಹನ್ನೆರಡು ಮಂದಿ ಪ್ರಾಣ ಬಿಟ್ಟರು. ಎರಡೂ ಸ್ಫೋಟದಲ್ಲಿ ನೂರಕ್ಕೂ ಹೆಚ್ಚು ಮಂದಿ ತೀರಿಕೊಂಡರು.
ಇನ್ನು ಆಫ್ಘಾನಿಸ್ತಾನದಲ್ಲಿ ನೂರು ಮಂದಿವರೆಗೆ ಸತ್ತರು. ನೂರಕ್ಕೂ ಹೆಚ್ಚು ಜನರಿಗೆ ಗಾಯವಾಯಿತು. ಆಫ್ಘಾನಿಸ್ತಾನದ ತುಂಬ ಸುರಕ್ಷಿತ ಪ್ರದೇಶ ಎನ್ಸಿಕೊಂಡ ಕಾಬೂಲ್ ನಲ್ಲೇ ಸ್ಫೋಟವಾಯಿತು. ಜರ್ಮನ್ ರಾಯಭಾರ ಕಚೇರಿ ಕೆಲ ಭಾಗ ನಾಶವಾಯಿತು. ಜರ್ಮನಿ ಹಾಗೂ ಅಮೆರಿಕದ ಹಲವರು ತೀರಿಕೊಂಡರು.[ಉಗ್ರರ ದಾಳಿಗೆ ಬೆಚ್ಚಿದ ಲಂಡನ್, ಹೈ ಅಲರ್ಟ್ ಘೋಷಣೆ!]
ಹಕಾನಿ ಗುಂಪು ಈ ದಾಳಿಯ ನೇತೃತ್ವ ವಹಿಸಿಕೊಂಡಿತ್ತು ಎಂಬುದು ಆಫ್ಘನ್ ಅಧಿಕಾರಿಗಳ ಗುಮಾನಿ. ಮನಿಲಾದ ಕ್ಯಾಸಿನೋ ಮೇಲೆ ನಡೆದ ದಾಳಿ ಜವಾಬ್ದಾರಿಯನ್ನು ಐಎಸ್ ಐಎಸ್ ವಹಿಸಿಕೊಂಡಿದೆ. ಅಲ್ಲಿ ನಲವತ್ತು ಜನರು ಪ್ರಾಣ ಕಳೆದುಕೊಂಡರು. ಒಟ್ಟಿನಲ್ಲಿ ರಂಜಾನ್ ಮಾಸದಲ್ಲಿ ಹಲವು ರಾಷ್ಟ್ರಗಳಲ್ಲಿ ರಾಯಭಾರ ಕಚೇರಿಯನ್ನೇ ಮುಚ್ಚಲಾಗುತ್ತದೆ.
ಇನ್ನೂ ರಂಜಾನ್ ಮಾಸ ಪೂರ್ಣವಾಗಲು ಸಮಯ ಇದೆ. ಅಷ್ಟರಲ್ಲಿ ಇನ್ನೇನು ಅನಾಹುತ ಆಗುತ್ತದೋ?