ರಾಹುಲ್ ಗಾಂಧಿ ದೇಶದ ಪ್ರಧಾನಿಯಾಗಲು ಸಮರ್ಥರು ಎಂದ ಶಿವಸೇನೆ ಸಂಸದ ಸಂಜಯ್ ರಾವತ್
ನವದೆಹಲಿ, ಜನವರಿ, 22: ಭಾರತ್ ಜೋಡೋ ಯಾತ್ರೆಯನ್ನು ಮುನ್ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾರತದ ಪ್ರಧಾನಿಯಾಗಲು ಸಮರ್ಥರಾಗಿದ್ದಾರೆ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಭಾರತ್ ಜೋಡೋ ಯಾತ್ರೆ ಬಗ್ಗೆ ಮಾತನಾಡಿರುವ ಅವರು, "ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್ ಗಾಂಧಿಯವರ ಯಾತ್ರೆಯ ಉದ್ದೇಶ ದ್ವೇಷ ಮತ್ತು ಭಯವನ್ನು ಹೋಗಲಾಡಿಸುವುದೇ ಹೊರತು. ವಿರೋಧ ಪಕ್ಷಗಳನ್ನು ತಮ್ಮ ಪಕ್ಷದ ಬ್ಯಾನರ್ ಅಡಿಯಲ್ಲಿ ಒಗ್ಗೂಡಿಸುವುದು ಅಲ್ಲ" ಎಂದು ಹೇಳಿದ್ದಾರೆ.
In a democracy, anyone can become the prime minister of the country, if the public decides: Sanjay Raut, Shiv Sena (Uddhav Thackeray) on Congress MP Rahul Gandhi pic.twitter.com/0oJU4ngWjt
— ANI (@ANI) January 22, 2023
ಜೊತೆಗೆ ಕಾಂಗ್ರೆಸ್ ಪಕ್ಷವನ್ನು ಹೊರತುಪಡಿಸಿ ಯಾವುದೇ ತೃತೀಯ ರಂಗ ಯಶಸ್ವಿಯಾಗುವುದಿಲ್ಲ ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವತ್ ಹೇಳಿದ್ದಾರೆ.
"ಸೈದ್ಧಾಂತಿಕ ಮತ್ತು ರಾಜಕೀಯ ಭಿನ್ನಾಭಿಪ್ರಾಯಗಳ ಹೊರತಾಗಿಯೂ ರಾಹುಲ್ ಗಾಂಧಿ ತಮ್ಮ ನಾಯಕತ್ವದ ಗುಣಗಳನ್ನು ತೋರಿಸುತ್ತಿದ್ದಾರೆ. 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಗೆ ದೊಡ್ಡ ಸವಾಲಾಗುತ್ತಾರೆ" ಎಂದು ಸಂಸದ ಸಂಜಯ್ ರಾವತ್ ಭವಿಷ್ಯ ನುಡಿದಿದ್ದಾರೆ.
ಶುಕ್ರವಾರ ಮಳೆಯ ನಡುವೆಯೂ ಹತ್ಲಿ ಮೋರ್ಹ್ ಮತ್ತು ಚಂದ್ವಾಲ್ ನಡುವೆ ರಾಹುಲ್ ಗಾಂಧಿಯವರೊಂದಿಗೆ ಸುಮಾರು 13 ಕಿಮೀ ದೂರ ನಡೆದ ಸಂಜಯ್ ರಾವುತ್, ಬಿಜೆಪಿಯು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಗ್ಗೆ ತಪ್ಪು ಕಲ್ಪನೆಯನ್ನು ಬಿತ್ತುತ್ತಿದೆ. ಆದರೆ ಈ ಯಾತ್ರೆಯು ಅವರ ಬಗೆಗಿನ ಎಲ್ಲಾ ತಪ್ಪು ಕಲ್ಪನೆಯನ್ನು ಹೊಡೆದುಹಾಕಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿ ಭಾರತದ ಪ್ರಧಾನಿಯಾಗಲು ಸಮರ್ಥರೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3,500 ಕಿಲೋಮೀಟರ್ಗೂ ಹೆಚ್ಚು ದೂರವನ್ನು ಕ್ರಮಿಸಲು ಎಲ್ಲರಿಗೂ ಸಾಧ್ಯವಿಲ್ಲ. ಇದಕ್ಕೆ ಸಾಕಷ್ಟು ದೃಢತೆ ಮತ್ತು ದೇಶದ ಬಗ್ಗೆ ಪ್ರೀತಿ ಬೇಕು. ಅವರು ದೇಶದ ಬಗ್ಗೆ ತಮ್ಮ ಕಾಳಜಿ ತೋರಿಸಿದ್ದಾರೆ. ಈ ಯಾತ್ರೆಯಲ್ಲಿ ನಾನು ಯಾವುದೇ ರಾಜಕೀಯವನ್ನು ನೋಡುವುದಿಲ್ಲ" ಎಂದು ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ನಾಯಕ ಸಂಜಯ್ ರಾವತ್ ತಿಳಿಸಿದ್ದಾರೆ.
ರಾಹುಲ್ ಗಾಂಧಿ ಅವರು ಸ್ವತಃ ಪ್ರಧಾನಿಯಾಗಲು ಸಿದ್ಧರಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ಜನರು ಅವರನ್ನು ಉನ್ನತ ಹುದ್ದೆಯಲ್ಲಿ ನೋಡಲು ಬಯಸಿದಾಗ, ಅವರಿಗೆ ಯಾವುದೇ ಆಯ್ಕೆಯಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಇಲ್ಲದ ತೃತೀಯ ರಂಗದ ಪರಿಕಲ್ಪನೆಯನ್ನು ತಿರಸ್ಕರಿಸಿದ ಸಂಜಯ್ ರಾವುತ್, "ಈ ಕಾಂಗ್ರೆಸ್ ಪಕ್ಷವು ದೇಶದ ಮೂಲೆ ಮೂಲೆಗಳಲ್ಲಿ ತನ್ನ ಅಸ್ತಿತ್ವವನ್ನು ಹೊಂದಿದೆ. ಕಾಂಗ್ರೆಸ್ ಇಲ್ಲದೆ ಯಾವುದೇ ತೃತೀಯ ರಂಗವು ಯಶಸ್ವಿಯಾಗುವುದಿಲ್ಲ, ಕಾಂಗ್ರೆಸ್ ಈ ಬಾರಿ ಕಡಿಮೆ ಸಂಖ್ಯೆಯ ಸಂಸದರನ್ನು ಹೊಂದಿದೆ. ಆದರೆ 2024 ರಲ್ಲಿ ಈ ಪರಿಸ್ಥಿತಿ ಬದಲಾಗಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.