ಹಿಮಾಚಲ ಪ್ರದೇಶದಲ್ಲಿ ಕಮರಿಗೆ ಬಸ್ ಉರುಳಿ 26 ಮಕ್ಕಳ ಸಾವು
ಹಿಮಾಚಲ ಪ್ರದೇಶದಲ್ಲಿ ಸಂಭವಿಸಿದ ಬಸ್ ಅಪಘಾತದಲ್ಲಿ ಸಾವಿನ ಸಂಖ್ಯೆ ಇಪ್ಪತ್ತಾರಕ್ಕೆ ಏರಿಕೆ ಆಗಿದೆ. ಹಿಮಾಚಲ ಪ್ರದೇಶ ಕಾಂಗ್ರಾದಲ್ಲಿ ಸೋಮವಾರ ಅಪಘಾತ ಸಂಭವಿಸಿದ್ದು, ರಾಷ್ಟ್ರೀಯ ವಿಪತ್ತುನಿರ್ವಹಣಾ ಪಡೆ ಸ್ಥಳಕ್ಕೆ ಧಾವಿಸಿ, ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ. ವರದಿಗಳ ಪ್ರಕಾರ ಬಸ್ಸಿನಲ್ಲಿ ಮೂವತ್ತೊಂಬತ್ತು ವಿದ್ಯಾರ್ಥಿಗಳಿದ್ದರು.
ಅಲ್ಲಿದ್ದ ಮಕ್ಕಳು ಐದರಿಂದ ಹನ್ನೊಂದು ವರ್ಷ ವಯೋಮಾನದವರು. ವಜೀರ್ ರಾಮ್ ಸಿಂಗ್ ಮೆಮೋರಿಯಲ್ ಶಾಲೆಯ ವಿದ್ಯಾರ್ಥಿಗಳು. ಅಪಘಾತದಲ್ಲಿ ಮೃತಪಟ್ಟ ಮಕ್ಕಳ ಕುಟುಂಬಕ್ಕೆ ತಲಾ ಐದು ಲಕ್ಷ ರುಪಾಯಿ ಪರಿಹಾರವನ್ನು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಘೋಷಿಸಿದ್ದಾರೆ.

ಸ್ಥಳೀಯ ಜನರೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳಕ್ಕೆ ನೆರವು ನೀಡುತ್ತಿದ್ದಾರೆ. ಈ ಘಟನೆ ಬಗ್ಗೆ ನ್ಯಾಯಾಂಗ ತನಿಖೆಗೆ ವಹಿಸುವುದಾಗಿ ಮುಖ್ಯಮಂತ್ರಿ ಠಾಕೂರ್ ಹೇಳಿದ್ದಾರೆ. ಪ್ರಾಥಮಿಕ ವರದಿ ಪ್ರಕಾರ, ಒಂಬತ್ತು ಮಕ್ಕಳು ಮೃತಪಟ್ಟಿರುವುದಾಗಿ ವರದಿ ಆಗಿತ್ತು. ಆದರೆ ಆ ಸಂಖ್ಯೆ ಕ್ರಮೇಣ ಇಪ್ಪತ್ತು ದಾಟಿತು.
ಪ್ರತ್ಯಕ್ಷದರ್ಶಿಗಳ ಪ್ರಕಾರ, ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡು, ಚೆಲಿ ಗ್ರಾಮದ ಬಳಿ ಕಮರಿಯಲ್ಲಿ ಬಸ್ ಉರುಳಿದೆ. ಈ ಅಪಘಾತದಲ್ಲಿ ಚಾಲಕ ಕೂಡ ಮೃತಪಟ್ಟಿದ್ದಾರೆ.












Click it and Unblock the Notifications