ಪಕ್ಷಕ್ಕಾಗಿ ಗಾಂಧಿಗಳು ತಮ್ಮ ಹುದ್ದೆ ತ್ಯಾಗಕ್ಕೆ ಸಿದ್ಧರಿದ್ದರು: ಕಾಂಗ್ರೆಸ್ ನಾಯಕ
ನವದೆಹಲಿ, ಮಾರ್ಚ್ 14: "ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಕುಟುಂಬ ಸದಸ್ಯರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ರಾಜೀನಾಮೆ ನೀಡಲು ಸಿದ್ಧರಾಗಿದ್ದರು. ಆದರೆ ಸಮಿತಿಯೇ ಈ ಪ್ರಸ್ತಾಪವನ್ನು ತಿರಸ್ಕಾರ ಮಾಡಿದ್ದು," ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಭಾನುವಾರ ಹೇಳಿದ್ದಾರೆ.
ಪಂಜಾಬ್ನಲ್ಲಿ ಕಾಂಗ್ರೆಸ್ ಪಕ್ಷವು ಹೀನಾಯವಾಗಿ ಸೋಲು ಕಂಡ ಬಳಿಕ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಕುಟುಂಬ ಸದಸ್ಯರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡಿದ್ದರು. ಈ ಹಿನ್ನೆಲೆಯಿಂದಾಗಿ ದಿಡೀರ್ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯನ್ನು ಸೇರಲಾಗಿತ್ತು.
ಬದಲಾವಣೆ ಇಲ್ಲ: ಎಐಸಿಸಿ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಮುಂದುವರಿಕೆ
ಈ ಸಭೆಯ ಬಗ್ಗೆ ಪ್ರಸ್ತಾಪ ಮಾಡಿದ ಕಾಂಗ್ರೆಸ್ನ ಹಿರಿಯ ನಾಯಕರೊಬ್ಬರು, "ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ರಾಜೀನಾಮೆ ನೀಡುವ ಪ್ರಸ್ತಾಪ ಮಾಡಿದರು. ಆದರೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಅಥವಾ ಸಿಡಬ್ಲ್ಯುಸಿ ಇದನ್ನು ಸರ್ವಾನುಮತದಿಂದ ತಿರಸ್ಕರಿಸಿತು," ಎಂದು ತಿಳಿಸಿದ್ದಾರೆ.
ಎಎನ್ಐ ಜೊತೆ ಮಾತನಾಡಿದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, "ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪಕ್ಷಕ್ಕಾಗಿ ತಮ್ಮ ಹುದ್ದೆಗಳನ್ನು ತ್ಯಾಗ ಮಾಡಲು ಸಿದ್ಧರಾಗಿದ್ದಾರೆ," ಎಂದು ಪುನರುಚ್ಛರಿಸಿದರು.
ರಾಹುಲ್ ಗಾಂಧಿಯವರೇ ಎಐಸಿಸಿ ಸಾರಥಿಯಾಗಲಿ: ಕೈ ನಾಯಕರ ಬಯಕೆ
"ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಮ್ಮ ಕುಟುಂಬದ ಸದಸ್ಯರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಪಕ್ಷಕ್ಕಾಗಿ ತಮ್ಮ ಹುದ್ದೆಗಳನ್ನು ತ್ಯಾಗ ಮಾಡಲು ಸಿದ್ಧರಿದ್ದಾರೆ. ಆದರೆ ನಾವೆಲ್ಲರೂ ಇದನ್ನು ತಿರಸ್ಕರಿಸಿದ್ದೇವೆ," ಎಂದು ಸಿಡಬ್ಲ್ಯೂಸಿ ಸಭೆಯ ಬಳಿಕ ಹೇಳಿದರು.
ಸೋನಿಯಾ ನಾಯಕತ್ವದಲ್ಲಿ ನಂಬಿಕೆ ಇದೆ ಎಂದ ಕಾಂಗ್ರೆಸ್ ನಾಯಕರು
ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಐದು ರಾಜ್ಯಗಳ ಇತ್ತೀಚಿನ ವಿಧಾನಸಭಾ ಚುನಾವಣಾ ಫಲಿತಾಂಶಗಳು ಪಕ್ಷಕ್ಕೆ "ಗಂಭೀರ ಕಳವಳಕ್ಕೆ ಕಾರಣ" ಎಂದು ಹೇಳಿದೆ. ಸುಮಾರು ನಾಲ್ಕೂವರೆ ಗಂಟೆಗಳ ಸಭೆಯ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, "ಸಿಡಬ್ಲ್ಯೂಸಿ ಸೋನಿಯಾ ಗಾಂಧಿ ಅವರ ನಾಯಕತ್ವದಲ್ಲಿ ತನ್ನ ನಂಬಿಕೆಯನ್ನು ಸರ್ವಾನುಮತದಿಂದ ಪುನರುಚ್ಚರಿಸುತ್ತದೆ. ಕಾಂಗ್ರೆಸ್ ಅಧ್ಯಕ್ಷರನ್ನು ಇನ್ನೂ ಮುಂದುವರಿಯುವಂತೆ ವಿನಂತಿ ಮಾಡಿದೆ," ಎಂದು ವಿವರಣೆ ನೀಡಿದ್ದರು.
"ಸಂಸತ್ತಿನ ಬಜೆಟ್ ಅಧಿವೇಶನದ ನಂತರ ಕಾಂಗ್ರೆಸ್ ಚಿಂತನ ಶಿಬಿರವನ್ನು ನಡೆಸಲಿದೆ ಮತ್ತು ಅದಕ್ಕೂ ಮೊದಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಮತ್ತೊಮ್ಮೆ ಸಭೆ ಸೇರಲಿದೆ," ಎಂದು ಕೂಡಾ ಮಾಹಿತಿ ನೀಡಿದ್ದರು. "ಸಂಘಟನೆಯನ್ನು ಪುನರುಜ್ಜೀವನಗೊಳಿಸಲು ಮತ್ತು ಬಲಪಡಿಸಲು ಸೋನಿಯಾ ಗಾಂಧಿ ಅವರು ತಕ್ಷಣವೇ ಕ್ರಮವನ್ನು ಕೈಗೊಳ್ಳಲಿದ್ದಾರೆ," ಎಂದು ಹೇಳಿದರು.
ಕೆಸಿ ವೇಣುಗೋಪಾಲ್ ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಆರ್ ಸುರ್ಜೆವಾಲಾ, "ಸಿಡಬ್ಲ್ಯೂಸಿಯ ಪ್ರತಿಯೊಬ್ಬ ಸದಸ್ಯರು ಸಂಘಟನಾ ಚುನಾವಣೆ ನಡೆಯುವವರೆಗೆ ಪಕ್ಷಕ್ಕೆ ಸೋನಿಯಾ ಗಾಂಧಿ ಮಾರ್ಗದರ್ಶನ ನೀಡಬೇಕೆಂದು ಬಯಸುತ್ತಾರೆ," ಎಂದಿದ್ದಾರೆ.
2024ರ ಲೋಕಸಭೆ ಚುನಾವಣೆಗೆ ತನ್ನ ಭವಿಷ್ಯದತ್ತ ಕಾಂಗ್ರೆಸ್ ಈಗಾಗಲೇ ಚಿಂತಿತವಾಗಿದೆ. ಕಾಂಗ್ರೆಸ್ಗೆ ಐದು ವಿಧಾನಸಭಾ ಚುನಾವಣೆಗಳ ಫಲಿತಾಂಶವು ಆಘಾತವನ್ನುಂಟು ಮಾಡಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲು ನಿರ್ಧಾರ ಮಾಡಿದೆ ಎಂದು ಮೂಲಗಳು ತಿಳಿಸಿದೆ. ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ತೃಣಮೂಲ ಕಾಂಗ್ರೆಸ್ನಿಂದ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ಗೆ ಇರುವ ಸವಾಲುಗಳನ್ನು ಸದ್ಯ ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದೆ. (ಒನ್ಇಂಡಿಯಾ ಸುದ್ದಿ)
Recommended Video