ನೂಪೂರ್ ಶರ್ಮಾ ಅಮಾನತು ಕ್ರಮ ಒಂದು ನಾಟಕ: ಓವೈಸಿ
ಹೈದರಾಬಾದ್ ಜೂನ್ 7: ಪ್ರವಾದಿ ಮೊಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿ ಹೇಳಿಕೆ ಸಂಬಂಧ ನೂಪೂರ್ ಶರ್ಮಾ ಅವರನ್ನು ಬಿಜೆಪಿ ಪಕ್ಷದಿಂದ ಅಮಾನತು ಮಾಡಿದೆ. ಆದರೆ ಬಿಜೆಪಿಯ ಈ ಕ್ರಮ 'ಒಂದು ನಾಟಕ' ಎಂದು ಎಐಎಂಐಎಂ ಅಧ್ಯಕ್ಷ ಅಸಾವುದ್ದೀನ್ ಓವೈಸಿ ಜರಿದಿದ್ದಾರೆ.
"ಪ್ರವಾದಿ ಮಹಮದ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರರಾದ ನೂಪೂರ್ ಶರ್ಮಾ ವಿರುದ್ಧ 10 ದಿನಗಳ ಹಿಂದೆಯೇ ಕ್ರಮ ಕೈಗೊಳ್ಳಬೇಕಿತ್ತು. ಆದರೆ ಗಲ್ಫ್ ರಾಷ್ಟ್ರಗಳು ಭಾರತದ ಮೇಲೆ ಒತ್ತಡ ಹೇರಿದ ನಂತರ ಬಿಜೆಪಿ ಕ್ರಮ ಕೈಗೊಂಡಿದೆ,'' ಎಂದು ಓವೈಸಿ ದೂರಿದರು.
ಮತಾಂಧ ಶಕ್ತಿಗಳ ವಿರುದ್ಧ ಒಂದಾಗಿ: ಕೇರಳ ಸಿಎಂ
ಸುದ್ದಿಗಾರರೊಂದಿಗೆ ಮಾತನಾಡಿದ ಓವೈಸಿ, "ನಾನು ಭಾರತೀಯ ಪ್ರಜೆಯಾಗಿ, ಒಬ್ಬ ಮಸ್ಲಿಂ ಆಗಿ ನೂಪೂರ್ ಶರ್ಮಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ. ಆದರೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಪ್ರಧಾನಿ ಅವರೇಕೆ ಈ ಸಂಬಂಧ ಕ್ರಮ ತೆಗೆದುಕೊಳ್ಳಲಿಲ್ಲ. ಅಸಾವುದ್ದೀನ್ ಓವೈಸಿಯ ಬೇಡಿಕೆ ವಿದೇಶಿ ನಾಯಕರ ಧ್ವನಿಗಿಂತ ಕ್ಷೀಣವೇ,'' ಎಂದು ಪ್ರಶ್ನಿಸಿದರು.
"ನಮ್ಮ ದುಃಖದ ಬಗ್ಗೆ ಯಾರು ಆಲಿಸುತ್ತಾರೆ. ನೀವು ನಮ್ಮ ಪ್ರಧಾನಿ. ನೀವು ನನ್ನ ಬೇಡಿಕೆಯನ್ನು ಆಲಿಸಬೇಕು. ವಿದೇಶಿ ನಾಯಕರನ್ನು ನೀವು ಸಂತೋಷಪಡಿಸಬೇಕಿದೆ,'' ಎಂದರು. "20 ಕೋಟಿ ಮುಸ್ಲಿಮರ ಭಾವನೆಗಳಿಗೆ ಘಾಸಿಗೊಳಿಸಲಾಯಿತು. ಈ ಬಗ್ಗೆ ಕಾಳಜಿ ತೋರುವ ಬದಲು ಹೊರ ದೇಶಗಳ ಬಗ್ಗೆ ಮೋದಿ ಅವರು ಹೆಚ್ಚು ಹೆದರುತ್ತಾರೆ,'' ಎಂದು ದೂರಿದರು.
"ನೂಪರ್ ಶರ್ಮಾ ಅವರ ಅಮಾನತು ಕ್ರಮ ಬಿಜೆಪಿಯ ಒಂದು ನಾಟಕ. ನೂಪರ್ ಶರ್ಮಾ ಅವರನ್ನು ಪಕ್ಷದಿಂದ ಅಮಾನತು ಮಾಡಿದರೆ ಸಾಲದು. ಅವರನ್ನು ಬಂಧಿಸಬೇಕು,'' ಎಂದು ಓವೈಸಿ ಒತ್ತಾಯಿಸಿದರು.
ಪ್ರವಾದಿ ಅವಹೇಳನ; ಹಲವು ರಾಷ್ಟ್ರಗಳ ಖಂಡನೆ
ಮುಸ್ಲಿಂ ಸಮುದಾಯದಿಂದ ತೀವ್ರ ಖಂಡನೆ; ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಬಿಜೆಪಿ ರಾಷ್ಟ್ರೀಯ ವಕ್ತಾರರಾದ ನೂಪುರ್ ಶರ್ಮಾ ಹಾಗೂ ದೆಹಲಿ ಬಿಜೆಪಿಯ ಮಾಧ್ಯಮ ಮುಖ್ಯಸ್ಥ ನವೀನ್ ಕುಮಾರ್ ಜಿಂದಾಲ್ ಅವರನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ)ವು ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಿದೆ. ಜ್ಞಾನವಾಪಿ ಮಸೀದಿಯ ವಿವಾದಕ್ಕೆ ಸಂಬಂಧಿಸಿದಂತೆ ಕಳೆದ 10 ದಿನಗಳ ಹಿಂದೆ ಸುದ್ದಿ ವಾಹಿನಿಯ ಸಂವಾದ ಒಂದರಲ್ಲಿ ಪ್ರವಾದಿ ಮಹಮದ್ ಅವರ ಬಗ್ಗೆ ನೂಪುರ್ ಶರ್ಮಾ ಅವಹೇಳನಕಾರಿಯಾಗಿ ಮಾತನಾಡಿದ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದಿಂದ ತೀವ್ರ ಖಂಡನೆ ವ್ಯಕ್ತವಾಗಿತ್ತು. ಮುಖ್ಯವಾಗಿ ಅರಬ್ ರಾಷ್ಟ್ರಗಳು ಇವರ ಹೇಳಿಕೆಯನ್ನು ಬಲವಾಗಿ ಖಂಡಿಸಿತು.
ಹೇಳಿಕೆ ಕುರಿತು ನೂಪೂರ್ ಶರ್ಮಾ ಕ್ಷಮೆಯಾಚನೆ; ಈ ಘಟನೆಯ ನಂತರ ಉತ್ತರ ಪ್ರದೇಶದ ಕಾನ್ಪುರದಲ್ಲಿ ಗಲಭೆ ನಡೆದಿತ್ತು. ಇನ್ನೊಂದೆಡೆ ನವೀನ್ ಕುಮಾರ್ ಜಿಂದಾಲ್ ಅವರ ಟ್ವೀಟ್ ಗಳು ವಿವಾದದ ಕಿಡಿ ಎಬ್ಬಿಸಿತ್ತು. ಸದ್ಯ ಅವರು ವಿವಾದಿತ ಟ್ವೀಟ್ ಗಳನ್ನು ಅಳಿಸಿ ಹಾಕಿದ್ದಾರೆ. ಇದನ್ನು ಖಂಡಿಸಿ ಅರಬ್ ರಾಷ್ಟ್ರಗಳಲ್ಲಿ ಮೇಡ್ ಇನ್ ಇಂಡಿಯಾ ಸರಕುಗಳನ್ನು ನಿಷೇಧಿಸುವ ಕುರಿತು ಟ್ಟಿಟ್ಟರ್ ಅಭಿಯಾನ ನಡೆಯುತ್ತಿದೆ.
Recommended Video
ಬಿಜೆಪಿಯಿಂದ ಅಮಾನತುಗೊಂಡ ನಂತರ ನೂಪೂರ್ ಶರ್ಮಾ ತಮ್ಮ ಹೇಳಿಕೆ ಕುರಿತು ಕ್ಷಮೆಯಾಚಿಸಿದ್ದಾರೆ. ಅಲ್ಲದೇ ತಮ್ಮ ಹೇಳಿಕೆಗಳನ್ನು ಹಿಂಪಡೆದಿರುವ ಬಗ್ಗೆ ಟ್ವೀಟ್ ಮಾಡಿದ್ದಾರೆ. ಅವಹೇಳನಕಾರಿ ಹೇಳಿಕೆ ಸಂಬಂಧ ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ನೂಪೂರ್ ಶರ್ಮಾ ವಿರುದ್ಧ ಹಲವು ಎಫ್ಐಆರ್ ಗಳು ದಾಖಲಾಗಿವೆ. ಇನ್ನೊಂದೆಡೆ ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲ್ ಅವರ ಹೇಳಿಕೆಗಳಿಂದ ಬಿಜೆಪಿ ಅಂತರ ಕಾಯ್ದುಕೊಂಡಿದೆ.