Breaking: ಜೀವ ಬೆದರಿಕೆ: ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ನೂಪುರ್ ಶರ್ಮಾ
ನವದೆಹಲಿ, ಜುಲೈ 18: ಬಿಜೆಪಿಯಿಂದ ಅಮಾನತುಗೊಂಡಿರುವ ನಾಯಕಿ ನೂಪುರ್ ಶರ್ಮಾ ಅವರು ತಮಗೆ ಅತ್ಯಾಚಾರ, ಕೊಲೆ ಯಂತಹ ಜೀವ ಬೆದರಿಕೆ ಕರೆಗಳು ಹೆಚ್ಚಾಗಿವೆ. ಜೀವಕ್ಕಿದ್ದ ಅಪಾಯ ಮತ್ತಷ್ಟು ಹೆಚ್ಚಾಗಿದೆ ಎಂದು ಸೋಮವಾರ ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಪ್ರವಾದಿ ಮೊಹಮ್ಮದ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ನೂಪುರ್ ಶರ್ಮಾ ತಮ್ಮ ವಿರುದ್ಧ ದಾಖಲಾಗಿರುವ ಎಲ್ಲ ಎಫ್ಐಆರ್ ಗಳನ್ನು ದೆಹಲಿಗೆ ವರ್ಗಾಯಿಸುವಂತೆ ಮನವಿ ಮಾಡಿದ್ದಾರೆ. ಅವರ ಬೇಡಿಕೆ ತಿರಸ್ಕರಿ ಕೋರ್ಟ್ ಕಟುವಾಗಿ ಟೀಕಿಸಿತ್ತು. ನೂಪುರ್ ಶರ್ಮಾ ನಾಲಿಗೆ ಹರಿಬಿಟ್ಟಿದ್ದರಿಂದಲೇ ದೇಶಕ್ಕೆ ಬೆಂಕಿ ಹತ್ತಿದೆ ಎಂದಿತ್ತು. ಇದಾದ ಬಳಿಕ ನೂಪುರ್ ಶರ್ಮಾ ಅರ್ಜಿ ಹಿಂಪಡೆದಿದ್ದರು.

ಈಗಾಗಲೇ ನೂಪುರ್ ಶರ್ಮಾ ಅವರ ವಿರುದ್ಧ ವಿವಿಧ ರಾಜ್ಯಗಳಲ್ಲಿ ದೂರು ದಾಖಲಾಗಿವೆ. ಅವರ ವಿರುದ್ಧ ಸಾಕಷ್ಟು ಕಡೆಗಳಲ್ಲಿ ಹಿಂಸಾಚಾರ, ಪ್ರತಿಭಟನೆ ನಡೆದಿತ್ತು. ಇದೀಗ ತಮಗೆ ಅತ್ಯಾಚಾರ, ಕೊಲೆ ಜೀವ ಬೆದರಿಕೆಗಳು ಹೆಚ್ಚಾಗಿವೆ. ತನ್ನ ಜೀವ ಅಪಾಯದಲ್ಲಿದೆ ಎಂದು ಹೇಳಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ರಕ್ಷಣೆ ಒದಗಿಸಿ ಎಂದು ಕೋರಿದ್ದಾರೆ ಎನ್ನಲಾಗಿದೆ.
ಸುಪ್ರೀಂ ಕೋರ್ಟ್ ರಕ್ಷಣೆ
ನೂಪುರ್ ಶರ್ಮಾ ಅವರ ಕೋರಿಕೆ ಮೇರೆಗೆ ಸುಪ್ರೀಂ ಕೋರ್ಟ್ ರಕ್ಷಣೆ ನೀಡಿದೆ. ಶರ್ಮಾ ವಿರುದ್ಧ ದಾಖಲಾಗಿರುವ ಒಂಭತ್ತು ಪ್ರಕಣಗಳಲ್ಲಿ ಅವರನ್ನು ಬಂಧಿಸುವಂತಿಲ್ಲ ಎಂದಿರುವ ನ್ಯಾಯಾಲಯ, ತಮ್ಮ ವಿರುದ್ಧ ದಾಖಲಾಗಿರುವ ಹಲವು ಎಫ್ಐಆರ್ ಗಳನ್ನು ಒಂದರಲ್ಲಿಯೇ ಸೇರಿಸುವಂತೆ ನೂಪುರ್ ಶರ್ಮಾ ಕೇಳಿದ್ದ ಮನವಿಗೆ ಸುಪ್ರೀಂ ಕರ್ನಾಟಕ, ದೆಹಲಿ, ಮಹಾರಾಷ್ಟ್ರ , ತೆಲಂಗಾಣ, ಪಶ್ಚಮ ಬಂಗಾಳ, ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಆಯಾ ರಾಜ್ಯಗಳಿಂದ ಪ್ರತಿಕ್ರಿಯೆ ಕೇಳಿದೆ.
ಈ ಹಿನ್ನೆಲೆಯಲ್ಲಿ ನೂಪುರ್ ಶರ್ಮಾ ಅವರ ಮನವಿಯನ್ನು ಆಗಸ್ಟ್ 10ರಂದು ಕೈಗೆತ್ತಿಕೊಳ್ಳಲಿದೆ. ಅಲ್ಲಿಯವರೆಗೆ ಅವರ ವಿರುದ್ದ ಹೊಸ ಪ್ರಕರಣಗಳನ್ನು ದಾಖಲಿಸುವಂತಿಲ್ಲ ಹಾಗೂ ಅವರನ್ನು ಬಂಧಿಸುವಂತಿಲ್ಲ ಎಂದು ತಿಳಿಸಿದೆ. ಜುಲೈ 1ರಂದು ಸುಪ್ರೀಂ ಕೋರ್ಟ್ ಹೇಳಿಕೆ ಬಳಿಕ ನೂಪುರ್ ಅವರಿಗೆ ಜೀವ ಬೆದರಿಕೆ ಕರೆಗಳು ಹೆಚ್ಚಾಗಿವೆ ಎಂದು ಅವರ ಪರ ವಕೀಲರು ಸುಪ್ರೀಂ ಕೋರ್ಟ್ ಗಮನಕ್ಕೆ ತಂದಿದ್ದಾರೆ. ನೂಪುರ್ ಮನವಿ ಕುರಿತು ರಾಜ್ಯಗಳು ಶೀಘ್ರವೇ ಪ್ರತಿಕ್ರಿಯಿಸುವ ಇಲ್ಲವೇ ಸುಪ್ರೀಂ ಗೆ ತಮ್ಮ ಅಭಿಪ್ರಾಯ ತಿಳಿಸಲಿದ್ದೇವೆ ಎನ್ನಲಾಗಿದೆ.












Click it and Unblock the Notifications