Nupur Sharma: ಪ್ರವಾದಿ ಅವಹೇಳನ ಪ್ರಕರಣ, ಗನ್ ಲೈಸನ್ಸ್ ಪಡೆದ ನೂಪುರ್ !
ನವದೆಹಲಿ, ಜನವರಿ 12: ಪ್ರವಾದಿ ಮೊಹಮ್ಮದ್ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿ ಕೊಲೆ ಬೆದರಿಕೆ ಎದುರಿಸುತ್ತಿರುವ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರು ಗನ್ ಲೈಸನ್ಸ್ ಪಡೆದುಕೊಂಡಿದ್ದಾರೆ.
ಪ್ರವಾದಿ ಮೊಹಮ್ಮದ್ ವಿರುದ್ದ ವಿವಾದಾತ್ಮಕ ಹೇಳಿಕೆಯ ಹಿನ್ನೆಲೆಯಲ್ಲಿ ಕೊಲೆ ಬೆದರಿಕೆಗಳನ್ನು ಎದುರಿಸುತ್ತಿದ್ದ ನೂಪುರ್ ಶರ್ಮಾ ಅವರು ತಮ್ಮ ಆತ್ಮ ರಕ್ಷಣೆಗಾಗಿ ಗನ್ ಹೊಂದುವಂತೆ ಪರವಾನಗಿ ನೀಡುವುದಾಗಿ ದೆಹಲಿ ಪೋಲಿಸರಿಗೆ ಅರ್ಜಿಸಲ್ಲಿಸಿದ್ದರು.
ನೂಪುರ್ ಶರ್ಮಾ ಅವರು ಪ್ರವಾದಿ ಮೊಹಮ್ಮದ್ ಅವರ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಮೇಲೆ ಬಿಜೆಪಿ ಪಕ್ಷದಿಂದ ಅಮಾನತುಗೊಳಿಸಲಾಗಿತ್ತು. ನೂಪುರ್ ಶರ್ಮಾ ವಿರುದ್ದ ರಾಷ್ಟ್ರ ಮತ್ತು ರಾಜ್ಯ ವ್ಯಾಪಿ ಪ್ರತಿಭಟನೆಗಳನ್ನು ನಡೆಸಲಾಗಿತ್ತು. ಅಷ್ಟೇ ಅಲ್ಲದೇ ಹಲವು ರಾಜ್ಯಗಳಲ್ಲಿ ನೂಪುರ್ ಅವರ ವಿರುದ್ದ ಪ್ರಕರಣಗಳು ಸಹ ದಾಖಲಾಗಿದ್ದವು.
ಈ ನಡುವೆ ಕೊಲೆ ಬೆದರಿಕೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ನೂಪುರ್ ಶರ್ಮಾ ಆತ್ಮ ರಕ್ಷಣೆಗಾಗಿ ತಮ್ಮೊಂದಿಗೆ ಗನ್ ತೆಗೆದುಕೊಂಡು ಹೋಗುವ ಪರವಾನಗೆಯನ್ನು ಪಡೆದುಕೊಂಡಿದ್ದಾರೆ ಎಂದು ದೆಹಲಿ ಪೋಲಿಸ್ ಅಧಿಕಾರಿ ಮಾಹಿತಿಯನ್ನು ನೀಡಿದ್ದಾರೆ.
2022ರಲ್ಲಿ ಸುದ್ದಿವಾಹಿನಿಯೊಂದರಲ್ಲಿ ನಡೆದ ಚರ್ಚಾ ಕಾರ್ಯಕ್ರಮದಲ್ಲಿ ನೂಪುರ ಶರ್ಮಾ ಅವರು ಪ್ರವಾದಿ ಮೊಹಮ್ಮದ್ ಕುರಿತು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದರು. ಶರ್ಮಾ ಅವರ ಈ ಹೇಳಿಕೆಯನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಟೀಕಿಸಿತ್ತು. ನೂಪುರ್ ಅವರ ಸಡಿಲವಾದ ನಾಲಿಗೆ ಇಡೀ ದೇಶಕ್ಕೆ ಬೆಂಕಿ ಹಚ್ಚಿದೆ. ದೇಶದಲ್ಲಿ ಉಂಟಾಗುತ್ತಿರುವ ಗಲಭೆಗಳಿಗೆ ನೂಪುರ ನೇರ ಹೊಣೆಗಾರಳು ಎಂದು ನ್ಯಾಯಾಲಯ ಹೇಳಿತ್ತು.
ಈ ಹಿಂದೆ ನೂಪುರ್ ಶರ್ಮಾ ಅವರು ತಮಗೆ ಅತ್ಯಾಚಾರ, ಕೊಲೆ ಯಂತಹ ಜೀವ ಬೆದರಿಕೆ ಕರೆಗಳು ಹೆಚ್ಚಾಗಿವೆ. ಜೀವಕ್ಕಿದ್ದ ಅಪಾಯ ಮತ್ತಷ್ಟು ಹೆಚ್ಚಾಗಿದೆ ಎಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ಸಂದರ್ಭದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಲ್ಲ ಎಫ್ಐಆರ್ ಗಳನ್ನು ದೆಹಲಿಗೆ ವರ್ಗಾಯಿಸುವಂತೆ ಮನವಿ ಮಾಡಿಕೊಂಡಿದ್ದರು.
ನೂಪುರ್ ಶರ್ಮಾ ಅವರ ಕೋರಿಕೆ ಮೇರಿಗೆ ಸುಪ್ರೀಂ ಕೋರ್ಟ್ ರಕ್ಷಣೆ ನೀಡಿತ್ತು. ಕೊಲೆ ಬೆದರಿಕೆ ಇರುವ ಹಿನ್ನಲೆಯಲ್ಲಿ ಶರ್ಮಾ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ಒಟ್ಟುಗೂಡಿಸಿತು, ಆದ್ದರಿಂದ ಅವರು ತಮ್ಮ ವಿರುದ್ಧದ ಪ್ರಕರಣಗಳು ನಡೆಯುತ್ತಿರುವ ರಾಜ್ಯಗಳಿಗೆ ಪ್ರಯಾಣಿಸಬೇಕಾಗಿಲ್ಲ ಎಂದು ಆದೇಶಿಸಿತ್ತು.
ನೂಪುರ್ ಶರ್ಮಾ ಪರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಉದಯಪುರ ಟೇಲರ್ ಕನ್ಹಯ್ಯ ಲಾಲ್ ಅವರನ್ನು ಹಂತಕರು ಕೊಚ್ಚಿ ಕೊಲೆ ಮಾಡಿದ್ದರು. ಈ ವಿಕೃತಿಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆ ಜನ ಬೀದಿಗಿಳಿದು ತೀವ್ರ ವಿರೋಧ ವ್ಯಕ್ತಪಡಿಸಿದರು. ಹಂತಕರನ್ನು ಬಂಧಿಸುವಂತೆ ಒತ್ತಾಯ ಹೆಚ್ಚಾಗುತ್ತಿದ್ದಂತೆ ಹಂತಕರ ವಿಡಿಯೋ ಆಧಾರದ ಮೇಲೆ ಇಬ್ಬರನ್ನು ಪೊಲೀಸರ ಬಂಧಿಸಿ ವಿಚಾರಣೆ ನಡೆಸಿದ್ದರು.