ಶಿವರಾತ್ರಿ ನಿಮಿತ್ತವಲ್ಲ: ಪ್ರಜ್ವಲ್ ರೇವಣ್ಣ ಶ್ರೀಕ್ಷೇತ್ರ ಧರ್ಮಸ್ಥಳ ಪಾದಯಾತ್ರೆ
ಹಾಸನ, ಫೆ 26: ರಾಜ್ಯದಲ್ಲಿ ಈಗ ಪಾದಯಾತ್ರೆಯ ಸದ್ದು. ಕೆಪಿಸಿಸಿ ವತಿಯಿಂದ ಮೇಕೆದಾಟು ಎರಡನೇ ಹಂತದ ಪಾದಯಾತ್ರೆ ರಾಮನಗರದಲ್ಲಿ ಫೆಬ್ರವರಿ 27ಕ್ಕೆ ಪುನರಾರಂಭಗೊಳ್ಳಲಿದೆ. ಇತ್ತ, ಜೆಡಿಎಸ್ ಯುವ ನಾಯಕ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಪಾದಯಾತ್ರೆಯೂ ಅಂದೇ ಆರಂಭಗೊಳ್ಳಲಿದೆ.
ಹಾಸನದಿಂದ ಧರ್ಮಸ್ಥಳದವರೆಗಿನ 210 ಕಿಲೋಮೀಟರ್ ದೂರವನ್ನು ಪಾದಯಾತ್ರೆಯ ಮೂಲಕ ಐದು ದಿನಗಳಲ್ಲಿ ಕ್ರಮಿಸಿ ಪ್ರಜ್ವಲ್ ರೇವಣ್ಣ ಪಾದಯಾತ್ರೆಯನ್ನು ನಡೆಸಲಿದ್ದಾರೆ. ಅವರ ಸ್ವಕ್ಷೇತ್ರ ಹಾಸನದಲ್ಲಿ ಫೆ.27ರ ಬೆಳಗ್ಗೆ ಆರು ಗಂಟೆಗೆ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಪಾದಯಾತ್ರೆ ಆರಂಭಗೊಳ್ಳಲಿದೆ.
ಜೆಡಿಎಸ್ ಕೋರ್ ಕಮಿಟಿಗೆ ಹೈಫೈ ಟಚ್ ನೀಡಿದ ಕುಮಾರಸ್ವಾಮಿ
ದೇವಾಲಯದ ಪೂಜೆ ಸಲ್ಲಿಕೆಯ ನಂತರ ಪಾದಯಾತ್ರೆ ಹರದನಹಳ್ಳಿಯ ದೇವಸ್ಥಾನ, ಮೊಸಳೆ ಹೊಸಹಳ್ಳಿಯ ಮೂಲಕ ಕಂದಲಿ ಕೃಷಿ ಕಾಲೇಜಿನಲ್ಲಿ ಮೊದಲ ದಿನದ ಯಾತ್ರೆ ಮುಕ್ತಾಯಗೊಳ್ಳಲಿದೆ. ಇದಾದ ನಂತರ, ಬೈರಾಪುರ, ಚಿಕ್ಕನಾಯಕನ ಹಳ್ಳಿ ಮೂಲಕ ಸಕಲೇಶಪುರದ ಶ್ರೀನಿವಾಸ ಕನ್ವೆನ್ಷನ್ ಹಾಲ್ ನಲ್ಲಿ ಎರಡನೇ ದಿನದ ಯಾತ್ರೆ ಮುಕ್ತಾಯಗೊಳ್ಳಲಿದೆ. ಎರಡು ದಿನಗಳಲ್ಲಿ ಪಾದಯಾತ್ರೆ 73 ಕಿಲೋಮೀಟರ್ ಕ್ರಮಿಸಲಿದೆ.
ಮೂರನೇ ದಿನದ ಪಾದಯಾತ್ರೆ ಸಕಲೇಶಪುರದ ಶಿವನ ದೇವಾಲಯದಲ್ಲಿ ಪೂಜೆ ಸಲ್ಲಿಕೆಯ ನಂತರ, ಮಂಜ್ರಾಬಾದ್ ಚೆಕ್ ಪೋಸ್ಟ್, ಮಾರನಹಳ್ಳಿ ಚೆಕ್ ಪೋಸ್ಟ್ ಮೂಲಕ ಗುಂಡ್ಯದಲ್ಲಿ ಮುಕ್ತಾಯಗೊಳ್ಲಲಿದೆ. ನಾಲ್ಕನೇ ದಿನದ ಪಾದಯಾತ್ರೆ ಗುಂಡ್ಯದಿಂದ ಆರಂಭವಾಗಿ ಧರ್ಮಸ್ಥಳದಲ್ಲಿ ಮುಕ್ತಾಯಗೊಳ್ಳಲಿದೆ.
ಮಾರ್ಚ್ ಮೂರನೇ ತಾರೀಕಿಗೆ ಧರ್ಮಸ್ಥಳದಿಂದ ಬೆಳಗ್ಗೆ ಒಂಬತ್ತು ಗಂಟೆಗೆ ಆರಂಭವಾಗುವ ಪಾದಯಾತ್ರೆ, ಸೌತಡ್ಕ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಕೆಯ ನಂತರ, ಕುಕ್ಕೇ ಸುಬ್ರಮಣ್ಯ ದೇವಾಲಯದಲ್ಲಿ ಮಧ್ಯಾಹ್ನ ಮೂರು ಗಂಟೆಗೆ ಸಂಪನ್ನಗೊಳ್ಳಲಿದೆ.
ಈ ಪಾದಯಾತ್ರೆಗೆ ಎರಡು ಸಾವಿರಕ್ಕೂ ಅಧಿಕ ಜನರು ಸೇರಿಕೊಳ್ಳುವ ಸಾಧ್ಯತೆಯಿದೆ. ಶಿವರಾತ್ರಿಯ ಎರಡು ದಿನದ ನಂತರ ಪಾದಯಾತ್ರೆ ಧರ್ಮಸ್ಥಳ ಪ್ರವೇಶಿಸುವುದರಿಂದ ಶಿವರಾತ್ರಿ ಯಾತ್ರೆ ಅಲ್ಲ ಎನ್ನುವುದು ಸ್ಪಷ್ಟ. ಹಾದಿಯುದ್ದಕ್ಕೂ ಎಲ್ಲೂ ರಾಜಕೀಯ ಸಮಾವೇಶ, ಭಾಷಣಗಳು ಇರುವುದಿಲ್ಲ ಎಂದು ಜೆಡಿಎಸ್ ಮೂಲದಿಂದ ತಿಳಿದು ಬಂದಿದೆ. ಪಾದಯಾತ್ರಿಗಳು ಎಲ್ಲಿ ಬಂದು ಸೇರಬೇಕು ಎನ್ನುವ ವಿವರವನ್ನೂ ನೀಡಲಾಗಿದೆ.