ದಾವಣಗೆರೆ: ಬಸ್ ಡಿಕ್ಕಿ ಹೊಡೆದರೂ ಹೆಲ್ಮೆಟ್ ಉಳಿಸಿತು ಪ್ರಾಣ; CCTVಯಲ್ಲಿ ದೃಶ್ಯ ಸೆರೆ!
ದಾವಣಗೆರೆ, ಜನವರಿ, 22: ದಾವಣಗೆರೆಯಲ್ಲಿ ಬೈಕ್ ಸವಾರನಿಗೆ ಬಸ್ ಡಿಕ್ಕಿ ಹೊಡೆದರೂ ತಲೆಗೆ ಪೂರ್ಣ ಪ್ರಮಾಣದ ಹೆಲ್ಮೆಟ್ ಧರಿಸಿದ್ದರಿಂದಾಗಿ ವ್ಯಕ್ತಿಯೊಬ್ಬರ ಪ್ರಾಣ ಉಳಿದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ದಾವಣಗೆರೆ ನಗರದ ಶ್ರಮಜೀವಿ ಲಾಡ್ಜ್ ಮ್ಯಾನೇಜರ್ ಬದುಕುಳಿದವರು ಎಂದು ತಿಳಿದು ಬಂದಿದೆ. ನಗರದ ಪಿ.ಬಿ. ರಸ್ತೆಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಸುಲ್ತಾನ್ ಜ್ಯುವೆಲರ್ಸ್ ಬಳಿ ಬೈಕ್ನಲ್ಲಿ ತೆರಳುತ್ತಿದ್ದ ಶ್ರಮಜೀವಿ ಲಾಡ್ಜ್ ಮ್ಯಾನೇಜರ್ಗೆ ಸಾರಿಗೆ ಬಸ್ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಬಸ್ನ ಚಕ್ರಕ್ಕೆ ಬೈಕ್ ಸಿಲುಕಿಕೊಂಡಿತು. ಇನ್ನು ಪೂರ್ಣಪ್ರಮಾಣದ ಹೆಲ್ಮೆಟ್ ಧರಿಸಿದ ಕಾರಣ ಮ್ಯಾನೇಜರ್ ತಲೆಗೆ ಹೊಡೆತ ಬಿದ್ದಿಲ್ಲ. ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅಲ್ಲೇ ಇದ್ದ ಸ್ಥಳೀಯರು ಕೂಡಲೇ ರಕ್ಷಿಸಿದ್ದಾರೆ.
ದಾವಣಗೆರೆಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಶುಕ್ರವಾರ ರಾತ್ರಿ ಚಿಕ್ಕಮಗಳೂರು ಕಡೆಗೆ ಬಸ್ ಹೋಗುತ್ತಿತ್ತು. ರಾತ್ರಿ ಕೆಲಸ ಮುಗಿಸಿ ಬೈಕ್ನಲ್ಲಿ ಮನೆಗೆ ಹೊರಟಿದ್ದ ಶ್ರಮಜೀವಿ ಮ್ಯಾನೇಜರ್ ಅಪೂರ್ವ ರೆಸಾರ್ಟ್ ಸಮೀಪದ ಸರ್ಕಲ್ನ ತಿರುವಿನಲ್ಲಿ ಈ ಅವಘಡ ಸಂಭವಿಸಿದೆ. ಬಸ್ ನಿಧಾನವಾಗಿ ತಿರುವಿನಲ್ಲಿ ಬರುತಿತ್ತು. ಆಗ ತಿರುವು ಕ್ರಾಸ್ ಮಾಡಲು ಹೋದಾಗ ಬಸ್ನ ಚಕ್ರಕ್ಕೆ ಸಿಲುಕಿಕೊಂಡು ಬೈಕ್ ನುಜ್ಜುಗುಜ್ಜಾಗಿದೆ.

ಹೆಲ್ಮೆಟ್ ಧರಿಸಿ
ಜಿಲ್ಲಾ ಪೊಲೀಸ್ ಇಲಾಖೆಯು ಕೂಡ ಪ್ರತಿಯೊಬ್ಬ ವಾಹನ ಸವಾರರು ತಲೆಗೆ ಐಎಸ್ಐ ಮಾರ್ಕ್ ಹೊಂದಿರುವ ಹೆಲ್ಮೆಟ್ ಧರಿಸಿ, ಪ್ರಾಣ ಉಳಿಸಿಕೊಳ್ಳಿ ಎಂಬ ಅಭಿಯಾನ ನಡೆಸಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಸಹ ಸವಾರರಲ್ಲಿ ಮನವಿ ಮಾಡುತ್ತಲೇ ಇದ್ದಾರೆ. ಕೆಲ ವಾಹನ ಸವಾರರು ಹಾಫ್ ಹೆಲ್ಮೆಟ್ ಬಳಕೆ ಮಾಡುತ್ತಿದ್ದು, ಇದು ಅಷ್ಟೇನೂ ಉಪಯೋಗಕ್ಕೆ ಬರುವುದಿಲ್ಲ. ಪೂರ್ಣ ಪ್ರಮಾಣದ ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡುವುದರಿಂದ ಅಪಾಯದಿಂದ ಪಾರಾಗಬಹುದು ಎಂದು ಹೇಳುತ್ತಲೇ ಬರುತ್ತಿದ್ದು, ದಾವಣಗೆರೆಯಲ್ಲಿ ಇನ್ನು ಕಟ್ಟುನಿಟ್ಟಾಗಿ ಆದೇಶ ಪಾಲನೆ ಆಗುತ್ತಿಲ್ಲ.

ಅರ್ಧ ಹೆಲ್ಮೆಟ್ ಧರಿಸುವವರ ಸಂಖ್ಯೆ ಹೆಚ್ಚಾಗಿದೆ. ಜೊತೆಗೆ ಪೂರ್ಣ ಪ್ರಮಾಣದ ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಮಾಡುತ್ತಿರುವುದು ಕಂಡು ಬರುತ್ತಿದೆ. ನಗರದ ಕೆಲವೆಡೆ ಅಪಘಾತ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಮತ್ತೆ ಕೆಲವರು ಹೆಲ್ಮೆಟ್ ಇದ್ದರೂ ಕೈಯಲ್ಲಿಡಿದು, ಇಲ್ಲವೇ ವಾಹನದಲ್ಲಿಟ್ಟುಕೊಂಡು ಹೋಗುತ್ತಾರೆ. ಪೊಲೀಸರನ್ನು ಕಂಡ ತಕ್ಷಣ ಧರಿಸುತ್ತಾರೆ. ಆಮೇಲೆ ಧರಿಸದಿರುವುದು ಕಂಡು ಬರುತ್ತಿದೆ. ಈಗಾಗಲೇ ಎಸ್ಪಿ ರಿಷ್ಯಂತ್ ಅವರು
ಪೂರ್ಣ ಪ್ರಮಾಣದ ಹೆಲ್ಮೆಟ್ ಧರಿಸದಿದ್ದರೆ ದಂಡ ವಿಧಿಸುವುದಾಗಿ ಈ ಹಿಂದೆಯೇ ಹೇಳಿದ್ದರು. ಆದರೆ ಕಟ್ಟುನಿಟ್ಟಾಗಿ ಜಾರಿಯಾಗಿಲ್ಲ.

ಕಳೆದ ಕೆಲ ದಿನಗಳ ಹಿಂದೆಯಷ್ಟೇ ದಾವಣಗೆರೆಯ ಎಂಸಿಸಿ ಬಿ ಬ್ಲಾಕ್ನಲ್ಲಿ ಕಾರು ಗುದ್ದಿದ ಪರಿಣಾಮ ವೈದ್ಯ ವಿದ್ಯಾರ್ಥಿನಿಯೊಬ್ಬಳು ತಲೆಗೆ ಪೆಟ್ಟು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿತ್ತು. ಇದೇ ರೀತಿಯಲ್ಲಿ ಕೆಲವೆಡೆಯೂ ಅಪಘಾತಗಳು ಸಂಭವಿಸಿದ್ದವು. ಇನ್ನು ಮುಂದಾದರೂ ಜನರು ವಾಹನ ಓಡಿಸುವಾಗ ಹೆಲ್ಮೆಟ್ ಧರಿಸಿದರೆ ಆಗುವ ಅಪಾಯಗಳಿಂದ ಪಾರಾಗಬಹುದಾಗಿದೆ.
Recommended Video
ಶ್ರಮಜೀವಿ ಲಾಡ್ಜ್ ಮ್ಯಾನೇಜರ್ ಸಮರ್ಪಕವಾಗಿ ಹೆಲ್ಮೆಟ್ ಧರಿಸಿದ್ದರಿಂದಾಗಿ ಪ್ರಾಣ ಉಳಿದಿದೆ. ಸ್ವಲ್ಪ ಯಾಮಾರಿದ್ದರೂ ಜೀವಕ್ಕೆ ಕುತ್ತು ಬರುತ್ತಿತ್ತು. ಸಿಸಿಟಿವಿಯಲ್ಲಿ ಭೀಕರ ಅಪಘಾತದ ದೃಶ್ಯ ಸೆರೆಯಾಗಿದ್ದು, ಜನರು ಇನ್ನು ಮುಂದಾದರೂ ಕಾನೂನು ಪಾಲನೆ ಮಾಡಿ ಪೂರ್ಣ ಪ್ರಮಾಣದ ಹೆಲ್ಮೆಟ್ ಧರಿಸಬೇಕು ಎಂಬ ಮಾತು ಕೇಳಿ ಬರುತ್ತಿವೆ.












Click it and Unblock the Notifications