ಚಿಕ್ಕಮಗಳೂರು: ಉದ್ಯೋಗದ ಆಮಿಷವೊಡ್ಡಿ ಯುವಕ, ಯುವತಿಯಿಂದ ಲಕ್ಷ, ಲಕ್ಷ ಪೀಕಿದ ಖದೀಮರು
ಚಿಕ್ಕಮಗಳೂರು, ಜನವರಿ, 10: ವಿದೇಶದಲ್ಲಿ ಕೆಲಸದ ಆಮಿಷವೊಡ್ಡಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಘಟನ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಹಣ ಕಳೆದುಕೊಂಡಿರುವವರು ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ನಗರದ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ವಿದೇಶದಲ್ಲಿ ಉದ್ಯೋಗದ ಅನ್ಲೈನ್ ಅಮಿಷಕ್ಕೆ ಮರುಳಾಗಿ ವ್ಯಕ್ತಿಯೊಬ್ಬ 90 ಸಾವಿರ ರೂಪಾಯಿ ಹಣ ಪಾವತಿಸಿ ಮೋಸ ಹೋಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಚನ್ನಹಡ್ಲು ಗ್ರಾಮದ ಎಸ್.ಕಾರ್ತಿಕ್ ಮೋಸ ಹೋದ ವ್ಯಕ್ತಿಯಾಗಿದ್ದಾರೆ. ಹಣ ಕಳೆದುಕೊಂಡ ಕಾರ್ತಿಕ್ ಜಿಲ್ಲಾ ಸೈಬರ್, ಅರ್ಥಿಕ ಮತ್ತು ಮಾದಕ ಠಾಣೆಗೆ ದೂರು ನೀಡಿದ್ದಾರೆ. ವಿದೇಶದಲ್ಲಿ ಉದ್ಯೋಗದ ಜಾಹಿರಾತನ್ನು ಇನ್ಸ್ಟಾಗ್ರಾಂನಲ್ಲಿ ನೋಡಿ ಆ್ಯಪ್ನಲ್ಲಿ ನೋಂದಾಯಿಸಿಕೊಂಡು ಹಣ ಕಳೆದುಕೊಂಡಿದ್ದಾರೆ. 2022ರ ಜುಲೈ 6ರಂದು ವ್ಯಕ್ತಿಯೊಬ್ಬರು ಫೋನ್ ಮಾಡಿ ಕೆನಡಾದಲ್ಲಿ ಫುಡ್ ಪ್ಯಾಕಿಂಗ್ ಉದ್ಯೋಗ ಇದೆ ಎಂದು ಹೇಳಿ ಆಧಾರ್ ಕಾರ್ಡ್ ಸೇರಿದಂತೆ ಇತರ ಮಾಹಿತಿ ಪಡೆದುಕೊಂಡಿದ್ದಾನೆ. ಅವರು ನನಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಯುವಕ ಕಳೆದುಕೊಂಡ ಹಣ ಎಷ್ಟು?
ನೋಂದಣಿ ಶುಲ್ಕ 1,800 ರೂಪಾಯಿ, ಎಂಬೆಸಿ ಶುಲ್ಕ 12 ಸಾವಿರ ರೂಪಾಯಿ, ಎಲ್ಎಂಐಎ ಶುಲ್ಕ 60 ಸಾವಿರ ರೂಪಾಯಿ, ಬಯೊಮೆಟ್ರಿಕ್ ಶುಲ್ಕ 15 ಸಾವಿರ ರೂಪಾಯಿ ಸೇರಿದಂತೆ ಒಟ್ಟು 88,800 ರೂಪಾಯಿ ಹಣವನ್ನು 2022 ನವೆಂಬರ್ 27ರವರೆಗೆ ಹಂತಹಂತವಾಗಿ ಆನ್ಲೈನ್ನಲ್ಲಿ (ಗೂಗಲ್ ಪೇ) ಮೂಲಕ ಜಮೆ ಮಾಡಿಸಿಕೊಂಡಿದ್ದಾರೆ. ಈಗ ಅವರಿಗೆ ಹಲವಾರು ಬಾರಿ ಫೋನ್ ಮಾಡಿದರೂ ಕರೆಯನ್ನು ಸ್ವೀಕರಿಸುತ್ತಿಲ್ಲ. ಉದ್ಯೋಗವನ್ನೂ ಕೊಡಿಸದೆ, ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ತರೀಕೆರೆ ಮಹಿಳೆ ಸ್ನೇಹಗೆ ವಂಚನೆ
ಹಾಗೆಯೇ ಸ್ನೇಹ ಎನ್ನುವ ಮಹಿಳೆಗೆ ಮನೆಯಿಂದಲೇ ಉದ್ಯೋಗ, ಕಮಿಷನ್ ಆಮಿಷವೊಡ್ಡಿ ಆನ್ಲೈನ್ ವಂಚಕರು 1.67 ಲಕ್ಷ ರೂಪಾಯಿ ಲಪಟಾಯಿಸಿದ್ದಾರೆ. ನಂತರ ತರೀಕೆರೆಯ ಐ.ಎಂ. ಸ್ನೇಹ ಅವರು ಸಿಇಎನ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆನ್ಲೈನ್ ನಂಬರ್ನಿಂದ ತನ್ನ ವಾಟ್ಸ್ ಆಪ್ಗೆ ರವಾನೆಯಾಗಿದ್ದ 'ವರ್ಕ್ ಫ್ರೆಂ ಹೋಮ್ ಜಾಬ್' ಲಿಂಕ್ನ ವಿವರ ನಂಬಿ ಮೋಸ ಹೋಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಖದೀಮರು ಹಣ ಎಗರಿಸಿದ್ದು ಹೇಗೆ?
ವರ್ಕ್ ಅರ್ಡರ್ ಡಿಸ್ಪ್ಯಾಚ್ಗೆ ಮೊದಲು ಕಮಿಷನ್ ( 500ಕ್ಕೆ 50 ಹಾಗೂ 3,000ಕ್ಕೆ 300) ಕೊಟ್ಟರು. ಟಾಸ್ಕ್ ಮುಗಿದ ಬಳಿಕ 1.09 ಲಕ್ಷ 58 ಸಾವಿರ ರೂಪಾಯಿ ಹಣವನ್ನು ಬ್ಯಾಂಕ್ ಮೂಲಕ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ನಂತರ ಕಮಿಷನ್ ಕೊಡದೆ ವಂಚನ ಮಾಡಿದ್ದಾರೆ ಎಂದು ದೂರಿನಲ್ಲಿ ಯುವತಿ ತಿಳಿಸಿದ್ದಾರೆ.

ಬ್ಯಾಂಕ್ ಖಾತೆ ಸ್ಥಗಿತಗೊಳಿಸುವ ಪ್ರಯತ್ನ
ಈ ಎರಡು ಪ್ರಕರಣಗಳಲ್ಲೂ ಯುಪಿಐ ಮೂಲಕ ಹಣ ವರ್ಗಾವಣೆ ಮಾಡಲಾಗಿದ್ದು, ಯುಪಿಐನಿಂದ ಮಾಹಿತಿ ಪಡೆದು ಬ್ಯಾಂಕ್ ಖಾತೆ ಸ್ಥಗಿತಗೊಳಿಸುವ ಪ್ರಯತ್ನದಲ್ಲಿ ಪೊಲೀಸ್ ಇಲಾಖೆ ಕಾರ್ಯಪ್ರವೃತ್ತರಾಗಿದೆ. ಒಟ್ಟಾರೆ ದಿನದಿಂದ ದಿನಕ್ಕೆ ಆನ್ ಲೈನ್ನಲ್ಲಿ ವಂಚನೆ ಪ್ರಕರಣಗಳ ಬಗ್ಗೆ ಸಾರ್ವಜನಿಕರಲ್ಲಿ ಮಾಹಿತಿ ಇದ್ದರೂ ಕೂಡ ಮೋಸದ ಜಾಲಕ್ಕೆ ಬಿದ್ದು ಹಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಕೂಡ ಹೆಚ್ಚಳವಾಗುತ್ತಿರುವುದು ವಿಷಾದವೇ ಆಗಿದೆ.












Click it and Unblock the Notifications