ಶಶಿಕಲಾ ಗ್ಯಾಂಗ್ ನಿಂದ ನಿರಂತರ ಬೆದರಿಕೆ : ದೀಪಾ ಜಯಕುಮಾರ್
ಚೆನ್ನೈ, ಮಾರ್ಚ್ 13 : "ನನಗೆ ಶಶಿಕಲಾ ನಟರಾಜನ್ ಗ್ಯಾಂಗ್ ನಿಂದ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿವೆ, ನನ್ನಗೆ ಸತತವಾಗಿ ಕಿರುಕುಳ ನೀಡಲಾಗುತ್ತಿದೆ" ಎಂದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸೋದರ ಸೊಸೆ ದೀಪಾ ಜಯಕುಮಾರ್ ಆರೋಪಿಸಿದ್ದಾರೆ.
ದೀಪಾ ಜಯಕುಮಾರ್ ಅವರು, ಹಿಂದೆ ಪನ್ನೀರ್ ಸೆಲ್ವಂ ಅವರು ಮಾಡಿದಂತೆ, ಜಯಲಲಿತಾ ಅವರ ಸಮಾಧಿಯ ಮುಂದೆ ಅರ್ಧ ಗಂಟೆ ಧ್ಯಾನಸ್ಥರಾಗಿ ಕುಳಿತ ನಂತರ, ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಆರ್ ಕೆ ನಗರ ವಿಧಾನಸಭಾ ಕ್ಷೇತ್ರದಲ್ಲಿ ನಾನು ಸ್ಪರ್ಧಿಸುವುದನ್ನು ಪ್ರಕಟಿಸಿದ ಮೇಲೆ, ಸ್ಪರ್ಧೆಯಿಂದ ಹಿಂದೆ ಸರಿಯಬೇಕೆಂದು ಹಲವಾರು ಕಡೆಗಳಿಂದ ತೀವ್ರ ಒತ್ತಡಗಳು ಬರುತ್ತಿವೆ, ಗೂಂಡಾಗಳಿಂದ ಬೆದರಿಕೆ ಕರೆಗಳು ಬರುತ್ತಿವೆ. ಅವರು ಯಾರು ಎಂದು ನನಗೆ ನಿಖರವಾಗಿ ಗೊತ್ತಿಲ್ಲ. ಆದರೆ ಅವರನ್ನು ಮನೆಗೂ ಕಳಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಜಯಲಲಿತಾ ಅವರು ಅಪೋಲೋ ಆಸ್ಪತ್ರೆಯಲ್ಲಿದ್ದಾಗ ನನಗೆ ಅವರನ್ನು ಭೇಟಿ ಮಾಡಲು ಕೂಡ ಅವಕಾಶ ಕೊಡಲಿಲ್ಲ ಮತ್ತು ಅವರು ತೀರಿಕೊಂಡ ನಂತರವೂ ಅಂತಿಮಯಾತ್ರೆಯಲ್ಲಿ ಭಾಗವಹಿಸಲು ಅವಕಾಶ ನೀಡಲಿಲ್ಲ. ಏಪ್ರಿಲ್ 12ರಂದು ಆರ್ ಕೆ ನಗರ ಕ್ಷೇತ್ರಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ಪ್ರಕಟಿಸಿದ ಮೇಲೆ ಬೆದರಿಕೆ ಇನ್ನೂ ಜಾಸ್ತಿಯಾಗಿವೆ ಎಂದು ಅವರು ದೂರಿದರು.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ ಅವರು ಕೂಡ ಜಯಲಲಿತಾ ಸಮಾಧಿಯ ಮುಂದೆ ಮುಕ್ಕಾಲು ಗಂಟೆ ಧ್ಯಾನಸ್ಥರಾಗಿ ಕುಳಿತು ಎದ್ದನಂತರ ಬೇರೆಯದೇ ವ್ಯಕ್ತಿಯಾಗಿದ್ದರು. ಶಶಿಕಲಾ ವಿರುದ್ಧ ತಿರುಗಿಬಿದ್ದು, ಅವರು ಮುಖ್ಯಮಂತ್ರಿಯಾಗದಂತೆ ತಡೆಯೊಡ್ಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.