ಸಾಂಕ್ರಾಮಿಕ ರೋಗದ ಭಯಕ್ಕೆ ಗುಂಡ್ಲುಪೇಟೆ ವಸತಿ ಶಾಲೆಯೆಲ್ಲ ಖಾಲಿ ಖಾಲಿ
ಚಾಮರಾಜನಗರ, ಸೆಪ್ಟೆಂಬರ್ 12: ಮೊರಾರ್ಜಿ ವಸತಿ ಶಾಲೆಯಲ್ಲಿ ಸಾಂಕ್ರಾಮಿಕ ರೋಗ ಕಂಡು ಬಂದಿದ್ದರಿಂದ ಭಯಗೊಂಡ ಪೋಷಕರು ತಮ್ಮ ಮಕ್ಕಳನ್ನು ಮನೆಗೆ ಕರೆದೊಯ್ದಿದ್ದರಿಂದ ವಸತಿ ಶಾಲೆ ಮಕ್ಕಳಿಲ್ಲದೆ ಖಾಲಿ ಹೊಡೆಯುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ತಾಲೂಕಿನ ಬೇಗೂರು ಹೋಬಳಿಯ ಕಾಡಂಚಿನ ಯಡವನಹಳ್ಳಿ ಗ್ರಾಮದ ಬಳಿಯಿರುವ ತಾಲೂಕಿನ ಮೊದಲ ಮೊರಾರ್ಜಿ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಇಲ್ಲಿ ನೀರು ಮತ್ತು ಶುಚಿತ್ವದ ಕೊರತೆಯಿಂದ ಸಾಂಕ್ರಾಮಿಕ ರೋಗ ಕಾಣಿಸಿದೆ ಎಂದು ಹೇಳಲಾಗಿದೆ.

ದಿನದಿಂದ ದಿನಕ್ಕೆ ಒಬ್ಬರಿಂದ ಒಬ್ಬರಿಗೆ ಸಾಂಕ್ರಾಮಿಕ ಜ್ವರ ಹರಡಿದ್ದರಿಂದ ಭಯಗೊಂಡ ಪೋಷಕರು ತಮ್ಮ ಮಕ್ಕಳನ್ನು ಕರೆದೊಯ್ದಿದ್ದಾರೆ ಎನ್ನಲಾಗಿದೆ. ಇಲ್ಲಿ ಸುಮಾರು 40ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಅನಾರೋಗ್ಯಕ್ಕೀಡಾಗಿದ್ದಾರೆ ಎನ್ನಲಾಗಿದೆ. ಇದರಿಂದ ಆತಂಕಕ್ಕೊಳಗಾದ ಪೋಷಕರು ತಮ್ಮ ಮಕ್ಕಳನ್ನು ಮನೆಗೆ ಕರೆದೊಯ್ದಿದ್ದಾರೆ.
2005ರಲ್ಲಿ ಪ್ರಾರಂಭವಾದ ಉತ್ತಮ ಕಟ್ಟಡದೊಂದಿಗೆ ಪ್ರಾರಂಭವಾದ ಮೊರಾರ್ಜಿ ವಸತಿ ಶಾಲೆ ನಿರ್ವಹಣೆಯಿಲ್ಲದೆ ದುಸ್ಥಿತಿಯಲ್ಲಿದ್ದು ಗೋಡೆಗಳು ಬಿರುಕುಬಿಡುತ್ತಿವೆ. ಶಾಲೆಯ ಸುತ್ತಲೂ ಕಾಂಪೌಂಡ್ ನಿರ್ಮಾಣವಾಗದೆ ವಿದ್ಯಾರ್ಥಿಗಳು ವನ್ಯಜೀವಿಗಳ ದಾಳಿಯ ಆತಂಕದಲ್ಲಿಯೇ ವಿದ್ಯಾಭ್ಯಾಸ ಮಾಡುವಂತಾಗಿದೆ.
ಶಾಲೆಯಲ್ಲಿ 6ರಿಂದ 10ನೇ ತರಗತಿಯವರೆಗೆ ಸುಮಾರು 242 ವಿದ್ಯಾರ್ಥಿಗಲ್ಲಿ 131 ವಿದ್ಯಾರ್ಥಿನಿಯರು ಹಾಗೂ 152 ವಿದ್ಯಾರ್ಥಿಗಳಿದ್ದಾರೆ. ಆದರೆ ಇಲ್ಲಿಗೆ ಸಮರ್ಪಕ ನೀರಿನ ವ್ಯವಸ್ಥೆಯಿಲ್ಲದೆ ಶೌಚಾಲಯಗಳು ಗಬ್ಬುನಾರುತ್ತಿವೆ. ಹೀಗಾಗಿ ವಿದ್ಯಾರ್ಥಿಗಳು ಶೌಚಕ್ಕಾಗಿ ಬಯಲನ್ನೇ ಆಶ್ರಯಿಸಿರುವುದು ಕಂಡು ಬಂದಿದೆ.

ಸೆ.6ರಂದು ಶಾಲೆಯ ವಿದ್ಯಾರ್ಥಿಯೊಬ್ಬನಿಗೆ ತಲೆನೋವು ಹಾಗೂ ಜ್ವರ ಕಾಣಿಸಿಕೊಂಡಿದ್ದು ಬಳಿಕ ಅದು ಆತನ ಕೊಠಡಿಯ ಇತರೆ ಎಂಟು ವಿದ್ಯಾರ್ಥಿಗಳಿಗೂ ಹರಡಿದೆ. ಕೂಡಲೇ ವಿದ್ಯಾರ್ಥಿಗಳನ್ನು ಬೇಗೂರಿನ ಸಮುದಾಯ ಆರೋಗ್ಯ ಕೇಂದ್ರೆಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಈ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಬಾಲಸ್ವಾಸ್ಥ್ಯ ಇಲಾಖೆಯ ಅಧಿಕಾರಿಗಳು ವಸತಿ ಶಾಲೆಗೆ ಭೇಟಿ ನೀಡಿ ಎಲ್ಲಾ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡಿ ಹಾಗೂ ವಾತಾವರಣವನ್ನು ಪರಿಶೀಲಿಸಿದ್ದಾರೆ. ಅಲ್ಲದೆ, ವೈರಲ್ ಜ್ವರದ ಸೋಂಕು ಇತರೆ ವಿದ್ಯಾರ್ಥಿಗಳಿಗೆ ಹರಡುವ ಸಾಧ್ಯತೆ ಇರುವ ಕಾರಣ ಮನೆಗಳಿಗೆ ಕರೆದೊಯ್ಯುವಂತೆ ಹೇಳಿದ್ದರಿಂದ ಪೋಷಕರು ತಮ್ಮ ಮಕ್ಕಳನ್ನು ಕರೆದೊಯ್ದಿದ್ದು ಇಡೀ ವಸತಿ ಶಾಲೆ ಖಾಲಿಯಾಗಿದೆ.












Click it and Unblock the Notifications