ಚಾ.ನಗರದ ಶಿಶು ಚಿಕಿತ್ಸಾ ಘಟಕಕ್ಕೆ ಶಾಸಕರು ಭೇಟಿ ನೀಡಿದ್ದೇಕೆ?
ಚಾಮರಾಜನಗರ, ಆಗಸ್ಟ್. 25 : ಕೋಲಾರದಲ್ಲಿ ನವಜಾತ ಶಿಶುಗಳ ಮರಣದ ಸುದ್ದಿ ಹೊರಬರುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಚಾಮರಾಜನಗರದ ಶಾಸಕ ಸಿ. ಪುಟ್ಟರಂಗಶೆಟ್ಟಿ ಜಿಲ್ಲಾ ಅಸ್ಪತ್ರೆಯಲ್ಲಿರುವ ವಿಶೇಷ ನವಜಾತ ಶಿಶು ಚಿಕಿತ್ಸಾ ಘಟಕಕ್ಕೆ ಭೇಟಿ ನೀಡಿ ಘಟಕದ ಕಾರ್ಯವೈಖರಿ ಮತ್ತು ಚಿಕಿತ್ಸೆ ಕ್ರಮಗಳ ಕುರಿತು ಪರಿಶೀಲನೆ ನಡೆಸಿದ್ದಾರೆ.
ನವಜಾತ ಶಿಶು ಚಿಕಿತ್ಸಾ ಘಟಕವನ್ನು ಖುದ್ದು ಪರಿಶೀಲಿಸಿದ ಅವರು ಸಂಬಂಧಿಸಿದ ಸ್ಥಾನಿಕ ವೈದ್ಯಾಧಿಕಾರಿ ಡಾ. ಕೃಷ್ಣಪ್ರಸಾದ್ರಿಂದ ಚಿಕಿತ್ಸೆ ವಿಧಾನ ಮತ್ತು ಸೂಕ್ತ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಮಕ್ಕಳ ವಾರ್ಡುಗಳಿಗೆ ತೆರೆಳಿ ಸೂಕ್ತ ಚಿಕಿತ್ಸೆ ದೊರೆಯುತ್ತಿದೆಯಾ? ಎಂಬುದರ ಬಗ್ಗೆ ಪೋಷಕರಿಂದ ಮಾಹಿತಿ ಪಡೆದುಕೊಂಡರು.
ಇದಾದ ಬಳಿಕ ನೂತನ ಆಸ್ಪತ್ರೆಯ ನೆಲಮಾಳಿಗೆಯಲ್ಲಿ ಕೊಳಚೆ ನೀರು ಸಂಗ್ರಹವಾಗುತ್ತಿರುವುದನ್ನು ತಪ್ಪಿಸಲು ಹಾಗೂ ಪೈಪ್ಲೈನ್ ವ್ಯವಸ್ಥೆ ಅಳವಡಿಸುವ ಕಾಮಗಾರಿಯನ್ನು ವೀಕ್ಷಿಸಿದರಲ್ಲದೆ, ಆಸ್ಪತ್ರೆಯ ವಿವಿಧ ವಾರ್ಡುಗಳ ದುರಸ್ತಿ ಮತ್ತು ನೂತನ ಪೈಪ್ಲೈನ್ ಆಳವಡಿಕೆ ಕಾಮಗಾರಿಗೆ 83 ಲಕ್ಷ ರೂ. ಮಂಜೂರಾಗಿದ್ದು, ಕಾಮಗಾರಿ ಗುಣಮಟ್ಟದಿಂದ ಕೂಡಿರುವಂತೆ ನೋಡಿಕೊಳ್ಳಬೇಕೆಂದು ಹೇಳಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಕೋಲಾರ ಜಿಲ್ಲೆ ಅಸ್ಪತ್ರೆಯಲ್ಲಿ ಇತ್ತಿಚೆಗೆ ಕೆಲವು ನವಜಾತ ಶಿಶುಗಳು ಸಾವಿಗೀಡಾದ ವರದಿಗಳ ಹಿನ್ನಲೆಯಲ್ಲಿ ಇಲ್ಲಿನ ವಿಶೇಷ ನವಜಾತ ಶಿಶುಗಳ ಚಿಕಿತ್ಸಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. ಸಂಬಂಧಪಟ್ಟ ವೈದ್ಯಾಧಿಕಾರಿಗಳಿಗೆ ಸೂಕ್ತ ಸಲಹೆ ನೀಡಿದ್ದು, ಮಕ್ಕಳ ಚಿಕಿತ್ಸೆ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಸೂಚನೆ ನೀಡಿದ್ದೇನೆ' ಎಂದರು.