ಗೆಲುವನ್ನು ಪತಿಗೆ ಅರ್ಪಿಸುತ್ತೇನೆ: ಗೀತಾ ಮಹದೇವಪ್ರಸಾದ್
ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆದ್ದ ಗೀತಾ ಮಹದೇವಪ್ರಸಾದ್, ತಮ್ಮ ಗೆಲುವನ್ನು ಪತಿ ಎಚ್.ಎಸ್.ಮಹದೇವಪ್ರಸಾದ್ ಅವರಿಗೆ ಅರ್ಪಿಸಿದ್ದೇನೆಂದು ಹೇಳಿದ್ದಾರೆ.
ಗುಂಡ್ಲುಪೇಟೆ, ಏಪ್ರಿಲ್ 13: ನನ್ನ ಗೆಲುವನ್ನು ಪತಿ ಎಚ್.ಎಸ್.ಮಹದೇವಪ್ರಸಾದ್ ಅವರಿಗೆ ಅರ್ಪಿಸುತ್ತೇನೆ, ನನ್ನನ್ನು ಗೆಲ್ಲಿಸಿದ ಮತದಾರರಿಗೆ ಅನಂತ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ ಎಂದು ಗೀತಾ ಮಹದೇವಪ್ರಸಾದ್ ಹೇಳಿದ್ದಾರೆ.
ತಮ್ಮ ಗೆಲುವಿನ ಕುರಿತು ಒನ್ ಇಂಡಿಯಾಕ್ಕೆ ಹೇಳಿಕೆ ನೀಡಿದ ಅವರು ಇಷ್ಟು ಅಂತರದಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂಬ ನಿರೀಕ್ಷೆಯಿತ್ತು, ಪ್ರತಿಪಕ್ಷದ ನಾಯಕರಿಗೆ ಮತದಾರರು, ಕಾರ್ಯಕರ್ತರು ಉತ್ತರ ನೀಡಿದ್ದಾರೆ, ನಮ್ಮ ಪ್ರೀತಿಯ ಮತದಾರರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಗ್ಯಾಲರಿ: ಕಾಂಗ್ರೆಸ್ಸಿನ ಡಬ್ಬಲ್ ಧಮಾಕ, 2 ಕ್ಷೇತ್ರಗಳು ಕೈವಶ
ಗೆದ್ದಿದ್ದೇವೆಂದು ಪ್ರತಿಪಕ್ಷದವರನ್ನು ತೆಗಳುವುದು ಬೇಡ, ಕಾರ್ಯಕರ್ತರು ತಾಳ್ಮೆ ಕಳೆದುಕೊಳ್ಳಬಾರದು. ನಾನು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರಲ್ಲದೆ, ಮತದಾನದಲ್ಲಿ ಯಾರ ಪ್ರತಾಪ'ವೂ ನಡೆಯಲ್ಲ ಎಂದು, ತಮ್ಮ ಬಗ್ಗೆ ಟೀಕಿಸಿದ್ದ ಪ್ರತಾಪ ಸಿಂಹ ಅವರಿಗೂ ಪರೋಕ್ಷ ಟಾಂಗ್ ನೀಡಿದರು.
ಕೊನೆಯಲ್ಲಿ, ಅನುಕಂಪದ ಅಲೆಯಿಂದ ನಾನು ಗೆದ್ದಿಲ್ಲ. ನನ್ನ ಗೆಲುವು ಪತಿಯ ಜನಸೇವೆಯ ಫಲ ಎನ್ನುವುದನ್ನು ಅವರು ಮರೆಯಲಿಲ್ಲ.
ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಬಹುತೇಕ ಖಚಿತವಾಗುತ್ತಿದ್ದಂತೆಯೇ ಮತ ಎಣಿಕಾ ಕೇಂದ್ರಕ್ಕೆ ಆಗಮಿಸಿದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವಪ್ರಸಾದ್ ತಮ್ಮ ಸಂತಸವನ್ನು ಕಾರ್ಯಕರ್ತರೆದುರು ಹಂಚಿಕೊಂಡಿದ್ದಾರೆ.[ಗುಂಡ್ಲುಪೇಟೆ: ಅನುಕಂಪದ ಅಲೆ ಮೇಲೆ ಗೀತಾ ಜಯಭೇರಿ]
ಪತಿ ಮಹದೇವಪ್ರಸಾದ್ ಅವರ ಅಕಾಲಿಕ ಮರಣದ ನಂತರ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಾ.ಗೀತಾ ಮಹದೇವಪ್ರಸಾದ್ ಅವರ ಗೆಲುವನ್ನು ಅವರ ಕುಟುಂಬದ ಸದಸ್ಯರು, ಕಾರ್ಯಕರ್ತರು, ಅಭಿಮಾನಿಗಳು ಸಂಭ್ರಮದಿಂದ ಆಚರಿಸುತ್ತಿದ್ದಾರೆ.