ಚಾಮರಾಜನಗರ ಕಪಾಳಮೋಕ್ಷ ವಿವಾದ: ಸಂಘಟನೆಗಳ ವಿರುದ್ಧ ಮಹಿಳೆ ದೂರು
ಚಾಮರಾಜನಗರ, ಅ.25: ಸಚಿವ ವಿ.ಸೋಮಣ್ಣ ಹಕ್ಕುಪತ್ರ ವಿತರಣೆ ವೇಳೆ ಕಪಾಳಮೋಕ್ಷ ಮಾಡಿದರೆಂಬ ವಿವಾದ ಮತ್ತೊಂದು ತಿರುವು ಪಡೆದುಕೊಂಡಿದೆ. ಹಲ್ಲೆಗೆ ಒಳಗಾದ ಆರೋಪಕ್ಕೆ ಒಳಗಾಗಿದ್ದ ಮಹಿಳೆಯೇ ಸಂಘಟನೆಗಳ ವಿರುದ್ದ ದೂರು ಕೊಟ್ಟಿದ್ದು, ಎಫ್ಐಆರ್ ದಾಖಲಾಗಿದೆ.
ಸಚಿವ ಸೋಮಣ್ಣ ನನ್ನ ಕೆನ್ನೆಗೆ ಹೊಡೆದಿದ್ದಾರೆ ಎಂದು ಬಿಂಬಿಸಿ ಹಲವು ಸಂಘಟನೆಗಳು ಮನೆ ಮುಂದೆ ಬಂದು ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಈ ಕಾರಣದಿಂದ ನನಗೆ ರಕ್ಷಣೆ ಕೊಡಿ ಎಂದು ಹಾಗು ಕಿರುಕುಳ ನೀಡುತ್ತಿರುವ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಕೆಂಪಮ್ಮ ಹೇಳಿದ್ದಾರೆ.
ಮಹಿಳೆಗೆ ಕಪಾಳಮೋಕ್ಷ: ಸೋಮಣ್ಣ ವಿರುದ್ಧ ಸಿದ್ದು, HDK ಆಕ್ರೋಶ
ಗ್ರಾ.ಪಂ. ವತಿಯಿಂದ ನಿವೇಶನ ಹಂಚಿಕೆ ವಿಚಾರವಾಗಿ ನನ್ನ ಹೆಸರು ಕೈಬಿಡಲಾಗಿತ್ತು. ಈ ಕಾರಣದಿಂದ ನಿವೇಶನ ಕೊಡಿ ಈ ಬಗ್ಗೆ ಗಂಡ ಇಲ್ಲದವಳು, ಮನೆ ಇಲ್ಲದ ಕಾರಣ ನನಗೂ ನಿವೇಶನದ ಹಕ್ಕು ಪತ್ರ ಬೇಕು ಅಂತ ವೇದಿಕೆ ಮೇಲೇರಿದೆ. ಸೈಡಿನಲ್ಲಿ ನಿಂತು ನನ್ನನ್ನು ತಡೆಯಲು ಬಂದುವರನ್ನು ಸುಮ್ಮನಿರಿ ಎಂದು ಹೇಳಿ, ನನ್ನನ್ನು ಸಚಿವರೇ ಕರೆದರು. ವಿಷಯ ತಿಳಿಸಿ ಕಾಲಿಗೆ ಬೀಳಲು ಹೋದಾಗ ಕೆನ್ನೆಗೆ ಸವರಿ ಸಚಿವರು ನನ್ನನ್ನು ಸಮಾಧಾನ ಮಾಡಿದರು. ಕಣ್ಣೀರು ಹಾಕಬೇಡ ಸುಮ್ಮನಿರು, ಮಗಳೇ ಎಂದು ಸಂತೈಸಿದರು. ನನಗೆ ಸಚಿವರು ಹೊಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ನಿವೇಶನಕ್ಕಾಗಿ ನಾನು ಕೆಲ ದಾಖಲಾತಿಗಳನ್ನು ಸಲ್ಲಿಸಿರಲಿಲ್ಲ. ಘಟನೆ ನಂತರ ಬಾಕಿ ಇದ್ದ ಜಾತಿ ಪ್ರಮಾಣ ಪತ್ರದ ಕೊಟ್ಟ ಕೂಡಲೇ ನನಗೆ ಮಾರನೇ ದಿನ ನಿವೇಶನ ಕೊಡುವ ವ್ಯವಸ್ಥೆಯನ್ನು ಸಚಿವರು ಮಾಡಿಸಿದರು. ಇದಾದ ನಂತರ ಕೆಲ ಸಂಘಟನೆಯವರು ಎಂದು ಹೇಳಿಕೊಂಡು ಮನೆಗೆ ಬಂದು ಕಿರುಕುಳ ಕೊಡುತ್ತಿದ್ದಾರೆ. ನೀನು ಕೋಟ್ಯಧಿಪತಿ ಆಗಬಹುದು. ಕೇಸು ಕೊಡು ಅಂತ ಒತ್ತಾಯಿಸುತ್ತಾರೆ. ಈ ಕಾರಣದಿಂದ ಕೂಲಿ ಕೆಲಸಕ್ಕೆ ಹೋಗಲು ಆಗುತ್ತಿಲ್ಲ. ಕೇಸು ಕೊಡು ಎಂದು ಬಲವಂತ ಮಾಡುತ್ತಿದ್ದ ಕಾರಣ ಸಂಘಟನೆಗಳವರ ವಿರುದ್ಧವೇ ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ಮಂಗಳವಾರ ಕೇಸು ಕೊಟ್ಟಿದ್ದೇನೆ ಎಂದು ತಿಳಿಸಿದ್ದಾರೆ.
ಇನ್ನು, ಮಹಿಳೆ ಕೊಟ್ಟ ದೂರು ಆಧರಿಸಿ ರೈತ ಸಂಘ, ನಾಯಕ ಹಿತ ರಕ್ಷಣಾ ವೇದಿಕೆ, ಮಹಿಳಾ ಸಂಘಟನೆ, ಡಿಎಸ್ಎಸ್, ಕೆ ಆರ್ ಎಸ್ ಪಕ್ಷದ ವಿರುದ್ಧ ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.