ಮಹಿಳೆಗೆ ಕಪಾಳಮೋಕ್ಷ: ಸೋಮಣ್ಣ ವಿರುದ್ಧ ಸಿದ್ದು, HDK ಆಕ್ರೋಶ
ಬೆಂಗಳೂರು, ಅಕ್ಟೋಬರ್ 23: ಹಕ್ಕು ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಸಮಸ್ಯೆ ಹೇಳಿಕೊಂಡು ಬಂದ ಮಹಿಳೆ ಮೇಲೆ ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ಕಪಾಳಮೋಕ್ಷ ಮಾಡಿದ್ದನ್ನು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್ಡಿ ಕುಮಾರಸ್ವಾಮಿ ಖಂಡಿಸಿದ್ದು, ಸೋಮಣ್ಣಗೆ ಛೀಮಾರಿ ಹಾಕಿದ್ದಾರೆ.
ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಗ್ರಾಮೀಣ ಪ್ರದೇಶಗಳ ಹಕ್ಕು ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಫಲಾನುಭವಿಗಳನ್ನು ಸರಿಯಾಗಿ ಆಯ್ಕೆ ಮಾಡಿಲ್ಲ, ನಿವೇಶನ ಇದ್ದವರಿಗೆ ಮತ್ತೆ ಕೊಡಲಾಗಿದೆ, ನಮಗೆ ಅನ್ಯಾಯವಾಗಿದೆ ಎಂದು ಕೆಲವು ಮಹಿಳೆಯರು ಸಚಿವ ಸೋಮಣ್ಣಗೆ ಮುತ್ತಿಗೆ ಹಾಕಲು ಯತ್ನಿಸಿದ್ದರು. ಈ ಸಂದರ್ಭದಲ್ಲಿ ಕೆಂಪಮ್ಮ ಎಂಬ ಮಹಿಳೆ ತನ್ನ ಸಮಸ್ಯೆಯನ್ನು ಹೇಳಲು ಹೊರಟಾಗ ಸೋಮಣ್ಣ ಆ ಮಹಿಳೆಯ ಕೆನ್ನೆಗೆ ಬಾರಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ರಾಜಕೀಯ ನಾಯಕರು ಕಟುವಾಗಿ ಟೀಕಿಸಿದ್ದಾರೆ.
ಗುಂಡ್ಲುಪೇಟೆ: ವಿ. ಸೋಮಣ್ಣ ಕಪಾಳಮೋಕ್ಷ, ಸಚಿವರು ಹಲ್ಲೆ ಮಾಡಿಲ್ಲ ಎಂದ ಮಹಿಳೆ
ಅಧಿಕಾರದಲ್ಲಿರುವವರಿಗೆ ತಾಳ್ಮೆ , ಸಹನೆ ಜನರ ಕಷ್ಟ-ಸುಖಗಳಿಗೆ ಪರಿಹಾರ ಒದಗಿಸಿಕೊಡುವ ಮನಸ್ಸಿರಬೇಕು, ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಗೆ ಹೊಡೆದಿರುವ ಸೋಮಣ್ಣ ಸಚಿವನಾಗಿರಲು ನಾಲಾಯಕ್, ತಾಳ್ಮೆ ಇಲ್ಲದಿದ್ದರೆ, ಜನರ ಸಮಸ್ಯೆರಿಗೆ ಸ್ಪಂದಿಸಲು ಸಾಧ್ಯವಾಗದಿದ್ದರೆ ರಾಜೀನಾಮೆ ಕೊಟ್ಟು ಹೋಗಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದರು.
ಮಹಿಳೆಯ ಮೇಲೆ ಕೈ ಮಾಡಿರುವುದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಯಾವುದೇ ಮನುಷ್ಯನಿಗೆ ಮಾನವೀಯತೆ ಇರಬೇಕು. ಮಾನವೀಯತೆ ಇರುವವರಿಗೆ ಸಂಸ್ಕೃತಿ ಇರುತ್ತದೆ, ಇಂತಹವರಲ್ಲಿ ಎಲ್ಲಿದೆ ಸಂಸ್ಕೃತಿ ಇರುತ್ತದೆ? ಸೋಮಣ್ಣ ಅಧಿಕಾರದಲ್ಲಿ ನಾಲಾಯಕ್ ಎಂದರು.
ಒಳ್ಳೆಯ ನಡವಳಿಕೆ ನಿರೀಕ್ಷಿಸುವುದು ಅಸಾಧ್ಯ
ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮಡಿಕೇರಿಯಲ್ಲಿ ಘಟನೆ ಕುರಿತು ಪ್ರತಿಕ್ರಿಯಿಸಿ, ಇದು ಬಿಜೆಪಿಯವರ ಸಂಸ್ಕೃತಿಯನ್ನು ತೋರಿಸುತ್ತದೆ. ಸೋಮಣ್ಣನಂಥವರು ಎರಡು ಮುಖ ಹೊಂದಿದ್ದಾರೆ. ಹೊರಗೊಂದು ರೀತಿ, ಒಳಗಿನ ನಡವಳಿಕೆ ಒಂದು ರೀತಿ ಇರುತ್ತದೆ, ನಾನು ಇದನ್ನು ಹತ್ತಿರದಿಂದ ನೋಡಿದ್ದೇನೆ. ಅವರಿಂದ ಒಳ್ಳೆಯ ನಡವಳಿಕೆ ನಿರೀಕ್ಷಿಸಲು ಸಾಧ್ಯವಿಲ್ಲ. ಇವರೊಬ್ಬರೆ ಅಲ್ಲ, ಇನ್ನು ಹಲವು ಸಚಿವರು ಇದೇ ರೀತಿ ನಡೆದುಕೊಂಡಿದ್ದಾರೆ ಎಂದು ಕಿಡಿ ಕಾರಿದರು.
'ಜಾತಿ, ಮತ, ಪಂಥ, ಪಕ್ಷಗಳ ಭೇದ ಬಿಟ್ಟು ಹೆಜ್ಜೆ ಹಾಕಿದ ನಾಡಿಗೆ ಧನ್ಯವಾದ'
ಸೋಮಣ್ಣ ವಿರುದ್ಧ ಗೃಹ ಸಚಿವರು ಕ್ರಮ ಕೈಕೊಳ್ಳಲಿ
''ಮಹಿಳೆಗೆ ಕಪಾಳ ಮೋಕ್ಷ ಮಾಡಿರುವ ಸೋಮಣ್ಣ ವಿರುದ್ಧ ಎಫ್ಐಆರ್ ದಾಖಲಾಗಬೇಕು, ಸೋಮಣ್ಣ ಕೂಡಲೇ ಕ್ಷಮೆ ಕೇಳಬೇಕು. ಇದು ಬಿಜೆಪಿ ಮಹಿಳಾ ವಿರೋಧಿ ಮನಸ್ಥಿತಿ ತೋರಿಸುತ್ತೆ. ವಿಡಿಯೋ ನೋಡಿ ಶಾಕ್ ಆಗಿದೆ, ನಾಚಿಕೆಗೇಡಿನ ಘಟನೆಯಿದು. ಗೃಹ ಸಚಿವರು ಜೀವಂತವಾಗಿದ್ದರೆ, ವಿಡಿಯೋ ನೋಡಿ ಕ್ರಮಕೈಗೊಳ್ಳಲಿ'' ಎಂದು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರ್ನಾಥ್ ಆಗ್ರಹಿಸಿದ್ದಾರೆ.
ಸೋಮಣ್ಣ ಹೊಡದೇ ಇಲ್ಲ ಎಂದ ಮಹಿಳೆ
ಮಹಿಳೆಗೆ ಕಪಾಳ ಮೋಕ್ಷವಾಗಿರುವ ವಿಚಾರವಾಗಿ ರಾಜ್ಯದಾದ್ಯಂತ ಚರ್ಚೆ ನಡೆಯುತ್ತಿದ್ದರೆ, ಇತ್ತ ಹಲ್ಲೆಗೊಳಗಾದ ಮಹಿಳೆ, ಸಚಿವರು ನನಗೆ ಹೊಡೆದಿಲ್ಲ, ತಾನು ಭಾವುಕಳಾದಾಗ ಸಚಿವ ಸೋಮಣ್ಣ ತಮ್ಮನ್ನು ಸಮಾಧಾನ ಪಡಿಸಿದರು. ಪದೇಪದೆ ಸಚಿವರ ಕಾಲಿಗೆ ನಮಸ್ಕರಿಸುತ್ತಿದ್ದಾಗ ಬೇಡ ಎಂದು ತಡೆದರು, ಈ ವೇಳೆ ಕೈ ತಾಗಿದೆ. ನನ್ನ ಮನವಿಗೆ ಸ್ಪಂದಿಸಿರುವ ಸಚಿವರು ನಿನಗೆ ವಸತಿ ಕಲ್ಪಿಸಿ ಕೊಡುತ್ತೇನೆಂದು ಸೂಚಿಸಿದರು, ಅವರು ತನಗೆ ಒಳ್ಳೆಯದು ಮಾಡಿದ್ದಾರೆಯೇ ಹೊರತು ಕೆಟ್ಟದು ಮಾಡಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ.
ಕ್ಷಮೆಯಾಚಿಸಿದ ಸಚಿವ
ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿ ಟೀಕೆ ವ್ಯಕ್ತವಾಗುತ್ತಿದ್ದಂತೆ ಸಚಿವ ಸೋಮಣ್ಣ ಕ್ಷಮೆಯಾಚನೆ ಮಾಡಿದ್ದಾರೆ. "45 ವರ್ಷಗಳ ರಾಜಕೀಯ ಜೀವನದಲ್ಲಿ ಹಲವು ಏಳು ಬೀಳುಗಳನ್ನು ಕಂಡಿದ್ದೇನೆ. ಶನಿವಾರ ನಡೆದ ಕಾರ್ಯಕ್ರಮದಲ್ಲಿ ನಾನು ಯಾರಿಗೂ ಅಪಚಾರ ಮಾಡಿಲ್ಲ. ಆ ಹೆಣ್ಣು ಮಗಳು ಪದೇ ಪದೇ ವೇದಿಕೆ ಮೇಲೆ ಬರುತ್ತಿದ್ದಳು, ಯಾಕಿಷ್ಟು ಸಾರಿ ಬರುತ್ತೀಯ ಎಂದು ವಿಚಾರಿಸಿದೆ, ಸಮಸ್ಯೆ ಬಗೆಹರಿಸುತ್ತೇನೆಂದು ಪಕ್ಕಕ್ಕೆ ಸರಿಸಿದೆ ಅಷ್ಟೇ. ಆದರೂ ನನ್ನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ, ಘಟನೆ ಬಗ್ಗೆ ವಿಷಾದಿಸುತ್ತೇನೆ'' ಎಂದು ಸೋಮಣ್ಣ ತಿಳಿಸಿದ್ದಾರೆ.