ನಿಮ್ಮ ಏರಿಯಾದಲ್ಲಿರುವ ಪ್ರತಿಮೆ, ಪುತ್ತಳಿಗಳು ಕಾನೂನುಬದ್ಧವಾಗಿದೆಯೇ?
ಬೆಂಗಳೂರು, ನ.17: ಬೆಂಗಳೂರಿನಲ್ಲಿ ಯಾವ ಬೀದಿಗೆ ಹೋದರೂ ಒಂದಲ್ಲ ಒಂದು ಪ್ರತಿಮೆ ಅಥವಾ ಪುತ್ತಳಿ ಕಾಣಿಸುವುದು ಪಕ್ಕ. ಸಾಹಿತಿಗಳು, ನಟರು, ಹೋರಾಟಗಾರರ ಪ್ರತಿಮೆಗಳು ಎಲ್ಲೆಂದರಲ್ಲಿ ಕಾಣಸಿಗುತ್ತವೆ. ಆದರೆ, ಈ ಎಲ್ಲಾ ಪ್ರತಿಮೆಗಳು ನಿಜಕ್ಕೂ ಕಾನೂನು ಬದ್ದವಾಗಿವೆಯೇ ಎಂಬ ಪ್ರಶ್ನೆಗೆ ಬಿಬಿಎಂಪಿ ಉತ್ತರ ಹುಡುಕಲು ಹೊರಟಿದೆ.
ಬೆಂಗಳೂರಿನಲ್ಲಿ ಎಷ್ಟು ಪುತ್ತಳಿಗಳು ಮತ್ತು ಪ್ರತಿಮೆಗಳಿವೆ ಎಂಬ ಬಗ್ಗೆ ಮಹಾನಗರ ಪಾಲಿಕೆಗೂ ಸರಿಯಾದ ಮಾಹಿತಿಯಿಲ್ಲ. ಆಶ್ಚರ್ಯವಾದರೂ ಇದು ಸತ್ಯ. ಹೀಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎಂಜಿನಿಯರ್ಗಳಿಗೆ ನಗರದಲ್ಲಿನ ಪ್ರತಿಮೆಗಳ ಸಂಖ್ಯೆಯನ್ನು ಎಣಿಕೆ ಮಾಡಲು ತಿಳಿಸಿದೆ.
ಜೊತೆಗೆ ಈ ಪ್ರತಿಮೆಗಳು ಕಾನೂನುಬದ್ಧವಾಗಿದೆಯೇ ಎಂದು ಪರಿಶೀಲಿಸುವ ಕಾರ್ಯವನ್ನು ವಹಿಸಲಾಗಿದೆ.
ಇನ್ನು, ಇಷ್ಟು ಪ್ರತಿಮೆಗಳಿದ್ದರೂ ಕೂಡ ಪ್ರತಿಮೆಗಳನ್ನು ನಿರ್ಮಿಸಲು ನಾಗರಿಕರು ಮತ್ತು ಸಂಸ್ಥೆಗಳು ಬಿಬಿಎಂಪಿಗೆ ಅರ್ಜಿಗಳನ್ನು ಸಲ್ಲಿಸುವುದನ್ನು ಮುಂದುವರೆಸಿದ್ದಾರೆ. ದಿನಕ್ಕೆ ಸರಾಸರಿ ಎಂಟು ಅರ್ಜಿಗಳಾದರೂ ಬಿಬಿಎಂಪಿ ಕಚೇರಿಗೆ ಬರುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೆಂಪೇಗೌಡ, ಪುನೀತ್ ಪ್ರತಿಮೆ ನಿರ್ಮಾಣಕ್ಕೆ ಗರಿಷ್ಠ ಅರ್ಜಿ
ಬಿಬಿಎಂಪಿ ಅಧಿಕಾರಿಗಳು ದಿನಕ್ಕೆ ಸರಾಸರಿ ಎಂಟು ಮನವಿಗಳನ್ನಾದರೂ ಪಡೆಯುತ್ತಾರೆ. ಅವುಗಳಲ್ಲಿ ಹೆಚ್ಚಿನವು ರಾಜಕಾರಣಿಗಳು ಮತ್ತು ಗಣ್ಯರ ಪ್ರತಿಮೆಗಳನ್ನು ಸ್ಥಾಪಿಸಲು ಸಲ್ಲಿಸಿರುವ ಅರ್ಜಿಗಳಾಗಿವೆ. ಸದ್ಯ ಬೆಂಗಳೂರಿನಲ್ಲಿ ಪುನೀತ್ ರಾಜ್ಕುಮಾರ್ ಮತ್ತು ಕೆಂಪೇಗೌಡ ಪ್ರತಿಮೆಗಳನ್ನು ಸ್ಥಾಪಿಸಲು ಗರಿಷ್ಠ ಅರ್ಜಿಗಳು ಬಂದಿವೆ ಎಂದು ಮಾಹಿತಿ ನೀಡಿದ್ದಾರೆ.

ಎಷ್ಟು ಪ್ರತಿಮೆಗಳು ಕಾನೂನುಬದ್ಧವಾಗಿವೆ ಎಂದು ದಾಖಲೆಯಿಲ್ಲ!
''ಒಂದು ಸ್ಥಳದಲ್ಲಿ ಎಷ್ಟು ಪ್ರತಿಮೆಗಳಿವೆ. ಅವುಗಳಲ್ಲಿ ಎಷ್ಟು ಕಾನೂನುಬದ್ಧವಾಗಿವೆ ಎಂಬುದಕ್ಕೆ ಯಾವುದೇ ದಾಖಲೆಗಳಿಲ್ಲ. ಈ ಹಿಂದೆ ಬಿಬಿಎಂಪಿ ಕೌನ್ಸಿಲ್ ಅಧಿವೇಶನದಲ್ಲಿ ಪುತ್ತಳಿ ಮತ್ತು ಪ್ರತಿಮೆಗಳನ್ನು ಸ್ಥಾಪಿಸಲು ಅರ್ಜಿಗಳನ್ನು ತೆರವುಗೊಳಿಸಲಾಗಿದೆ. ಆದರೆ ಕಳೆದ ಎರಡು ವರ್ಷಗಳಿಂದ ಅಧಿವೇಶನ ನಡೆದಿಲ್ಲ. ಹೀಗಾಗಿ ಏನಾಗಿದೆ ಎಂಬುದಕ್ಕೆ ದಾಖಲೆಗಳಿಲ್ಲ" ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಬಿಬಿಎಂಪಿ ಅಧಿಕಾರಿ ಮಾಹಿತಿ ತಿಳಿಸಿದ್ದಾರೆ.
"ನಾವು ಈ ಪ್ರತಿಮೆಗಳ ಎಣಿಕೆಯನ್ನು ಮಾಡುವಾಗ, ಎಲ್ಲಾ ವಲಯ ಕಚೇರಿಗಳಿಗೆ ವಾಡ್ವಾರು ಕಡತಗಳನ್ನು ಹುಡುಕಲು ಮತ್ತು ಎಲ್ಲಾ ಡೇಟಾವನ್ನು ಒಗ್ಗೂಡಿಸಲು ನಿರ್ದೇಶಿಸಿದ್ದೇವೆ. ಆದರೆ ಇದಕ್ಕೆ ಕೌನ್ಸಿಲರ್ಗಳು ಎಂದಿಗೂ ಪ್ರಾಮುಖ್ಯತೆ ನೀಡಲಿಲ್ಲ'' ಎಂದು ಹಿರಿಯ ಅಧಿಕಾರಿ ಬೇಸರ ವ್ಯಕ್ತಪಡಿಸಿದ್ದಾರೆ.

ಪಾದಚಾರಿ ಮಾರ್ಗಗಳಲ್ಲಿ ಇವೆ ಹಲವು ಪ್ರತಿಮೆಗಳು
ಕರ್ನಾಟಕ ಹೈಕೋರ್ಟ್ ಬಿಬಿಎಂಪಿ ಎಂಜಿನಿಯರ್ಗಳಿಗೆ ಫುಟ್ಪಾತ್ಗಳನ್ನು ತೆರವುಗೊಳಿಸುವಂತೆ ಸೂಚಿಸಿದೆ. ಹೀಗಾಗಿ ಈ ಎಣಿಕೆ ಕ್ರಮ ಮಹತ್ವದ್ದಾಗಿದೆ. ಏಕೆಂದರೆ, ನಗರದಲ್ಲಿರುವ ನೂರಾರು ಪ್ರತಿಮೆಗಳು ಪಾದಚಾರಿ ಮಾರ್ಗಗಳ ಮಧ್ಯದಲ್ಲಿ ನಿಂತಿವೆ.
ಬಿಬಿಎಂಪಿಯ ಎಂಜಿನಿಯರಿಂಗ್ ಮತ್ತು ಕಂದಾಯ ವಿಭಾಗಗಳು ಹೈಕೋರ್ಟ್ ಆದೇಶದ ಬಳಿಕ ಈ ಪುತ್ತಳಿಗಳು ಮತ್ತು ಪ್ರತಿಮೆಗಳ ನಿರ್ಮಾಣಕ್ಕೆ ಅನುಮತಿ ನೀಡಿದವರು ಯಾರು ಎಂದು ತಿಳಿಯಲು ಹೆಚ್ಚಿನ ಕೆಲಸ ಮಾಡುತ್ತಿದ್ದಾರೆ.

ಪ್ರತಿಮೆ ತೆರವುಗೊಳಿಸುವುದು ಬಹಳ ಸೂಕ್ಷ್ಮ ವಿಚಾರ
"ಟ್ರಾಫಿಕ್ ಜಂಕ್ಷನ್ಗಳಲ್ಲಿ ಅನೇಕ ಪುತ್ತಳಿಗಳು ಮತ್ತು ಪ್ರತಿಮೆಗಳನ್ನು ಸ್ಥಾಪಿಸಿರುವುದರಿಂದ ವಾಹನ ಸವಾರರಿಗೆ ಭಾರಿ ಸಮಸ್ಯೆ ಉಂಟಾಗಿರುವುದನ್ನು ನಾವು ನೋಡಿದ್ದೇವೆ. ಪ್ರತಿಮೆ, ಪುತ್ತಳಿಗಳ ಅತಿಕ್ರಮಣ ತೆರವು ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡಾಗ ಎಚ್ಚರಿಕೆ ತೆಗೆದುಕೊಳ್ಳಬೇಕಾಗಿದೆ" ಎಂದಿದ್ದಾರೆ.
ಅಕ್ರಮ ಪ್ರತಿಮೆಗಳನ್ನು ತೆರವುಗೊಳಿಸುವ ಮುನ್ನ ಅಲ್ಲಿನ ಸ್ಥಿತಿಯನ್ನು ತಿಳಿದುಕೊಳ್ಳಬೇಕು. ಇದು ಸೂಕ್ಷ್ಮ ವಿಷಯವಾಗಿರುವುದರಿಂದ, ಎಲ್ಲಾ ಕಾನೂನು ಕಾರ್ಯವಿಧಾನಗಳನ್ನು ಅನುಸರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಪ್ರತಿ ಹೆಜ್ಜೆಯನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳುತ್ತಿರುವುದಾಗಿ ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications