ಸಂಕಷ್ಟದಲ್ಲಿರುವ ವಕೀಲರಿಗೆ ನೆರವಾದ ಸಿಎಂಗೆ ಥ್ಯಾಂಕ್ಸ್ !
ಸಂಕಷ್ಟದಲ್ಲಿರುವ ವಕೀಲರಿಗೆ 5 ಕೋಟಿ ರೂ. ನೆರವು; ಮುಖ್ಯಮಂತ್ರಿಗಳಿಗೆ ವಕೀಲರ ಪರಿಷತ್ ಅಭಿನಂದನೆ
Recommended Video
ಬೆಂಗಳೂರು, ಜೂ 18: ಲಾಕ್ಡೌನ್ ನಿಂದಾಗಿ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿಲ್ಲದ ಕಾರಣ ಸಂಕಷ್ಟಕ್ಕೆ ಸಿಲುಕಿರುವ ವಕೀಲರ ನೆರವಿಗೆ 5 ಕೋಟಿ ರೂ. ಘೋಷಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ರಾಜ್ಯ ವಕೀಲರ ಪರಿಷತ್ತು ಧನ್ಯವಾದ ಸಮರ್ಪಿಸಿದೆ.
ವಕೀಲರ ಪರಿಷತ್ತಿನ ಅಧ್ಯಕ್ಷ ಅನಿಲ್ ಕುಮಾರ್ ಜೆ.ಎಂ ಮತ್ತಿತರ ಹಿರಿಯ ವಕೀಲರ ನಿಯೋಗ ಗುರುವಾರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ನೆರವು ಕೋರಿ ಮನವಿ ಸಲ್ಲಿಸಿತು. ಇವರೊಂದಿಗೆ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ ನಾವದಗಿ, ಹೆಚ್ಚುವರಿ ಸಾಲಿಸಿಟರ್ ಜನರಲ್ ಎಂ.ಬಿ.ನರಗುಂದ, ಮಾಜಿ ಅಡ್ವೊಕೇಟ್ ಜನರಲ್ ಗಳಾದ ವಿಜಯಶಂಕರ್, ಅಶೋಕ ಹಾರ್ನಹಳ್ಳಿ ಇದ್ದರು.
ಈ ಸಂದರ್ಭದಲ್ಲಿ ಕೂಡಲೇ ಹಣ ಬಿಡುಗಡೆಗೆ ಯಡಿಯೂರಪ್ಪ ರಾಜ್ಯ ವಕೀಲರ ಪರಿಷತ್ತಿನ ಕೋವಿಡ್-19 ಪರಿಹಾರ ನಿಧಿಗೆ 5 ಕೋಟಿ ರೂ. ನೆರವು ನೀಡುವಂತೆ ಸ್ಥಳದಲ್ಲೇ ಆದೇಶ ನೀಡಿದರು.
ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅನಿಲ್ ಕುಮಾರ್, ಸೂಕ್ತ ಸಮಯದಲ್ಲಿ ಮುಖ್ಯಮಂತ್ರಿ ಅವರು ನೀಡಿರುವ ನೆರವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲಾಗುವುದು. ಕೂಡಲೇ ಆನ್ ಲೈನ್ ಮೂಲಕ ಅರ್ಜಿ ಕರೆದು ಕಷ್ಟದಲ್ಲಿರುವ ವಕೀಲರಿಗೆ ನೆರವು ನೀಡಲಾಗುವುದು ಎಂದರು.
ನೆರವು ನೀಡಲು ಪ್ರಮುಖವಾಗಿ ನಾಲ್ಕು ಮಾನದಂಡಗಳನ್ನು ನಿಗದಿಪಡಿಸಿದ್ದು, ಸ್ವಂತ ಮನೆ ಹೊಂದಿರದ, ನಾಲ್ಕು ಚಕ್ರದ ವಾಹನವಿಲ್ಲದ ಮತ್ತು ಪರ್ಯಾಯ ಆದಾಯ ಮೂಲ ಇಲ್ಲದವರನ್ನು ಗುರುಸಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಪ್ರತಿಯೊಬ್ಬರ ಖಾತೆಗೆ ಐದು ಸಾವಿರ ರೂ ಪರಿಹಾರ ವರ್ಗಾವಣೆ ಮಾಡಲಾಗುವುದು ಎಂದರು.
ಕಿರಿಯ ಮತ್ತು ಸಂಕಷ್ಟದಲ್ಲಿರುವ ವಕೀಲರಿಗೆ ಈಗಾಗಲೇ ರಾಜ್ಯ ವಕೀಲರ ಪರಿಷತ್ತಿನಿಂದ 2 ಕೋಟಿ ರೂ, ಅಖಿಲ ಭಾರತೀಯ ವಕೀಲರ ಪರಿಷತ್ತಿನಿಂದ 1 ಕೋಟಿ ರೂ ನೆರವು ನೀಡಲಾಗಿದೆ. ಈ ಮೊತ್ತದಲ್ಲಿ ಈಗಾಗಲೇ ಆರು ಸಾವಿರ ವಕೀಲರಿಗೆ ನೆರವು ನೀಡಲಾಗಿದೆ. ಇದೀಗ ಯಡಿಯೂರಪ್ಪ ಅವರು ಕೊಡುತ್ತಿರುವ ಪರಿಹಾರದಿಂದ ಮತ್ತೆ ಹತ್ತು ಸಾವಿರ ವಕೀಲರಿಗೆ ಸಹಕಾರಿಯಾಗಲಿದೆ. ಫಲಾನುಭವಿ ಆಯ್ಕೆ, ಸೌಲಭ್ಯ ಪಡೆದವರ ಸಂಪೂರ್ಣ ವಿವರಗಳನ್ನು ವೆಬ್ ಸೈನ್ ನಲ್ಲಿ ಪ್ರಕಟಿಸಲಾಗುವುದು ಎಂದು ಅನಿಲ್ ಕುಮಾರ್ ಹೇಳಿದರು.
ಮಾ. 26ರಿಂದ ಲಾಕ್ ಡೌನ್ ಘೋಷಣೆಯಾಗಿದ್ದು, ವಕೀಲರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಕೀಲರಿಗೆ ಹಣಕಾಸಿನ ನೆರವು ನೀಡಲು ಈಗಾಗಲೇ ಹಲವರು ಕ್ರಮಗಳನ್ನು ಪರಿಷತ್ತು ಕಾರ್ಯೋನ್ಮುಖವಾಗಿದೆ. ಲಾಕ್ ಡೌನ್ ಕಾರಣ ನ್ಯಾಯಾಲಯಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿಲ್ಲ. ರಾಜ್ಯಾದ್ಯಂತ 1,03 ಲಕ್ಷ ವಕೀಲರಿದ್ದು, ಇವರಲ್ಲಿ ಅನೇಕ ವಕೀಲರಿಗೆ ಹಣಕಾಸಿನ ತೊಂದರೆ ಎದುರಾಗಿದೆ. ಆದರೂ, ಎಲ್ಲಾ ಸಂಕಷ್ಟದಲ್ಲಿರುವ ವಕೀಲರಿಗೆ ಆರ್ಥಿಕ ನೆರವು ನೀಡಲಾಗುತ್ತಿಲ್ಲ. ಸಂಕಷ್ಟದಲ್ಲಿರುವವರಿಗೆ ಮೊದಲ ಆದ್ಯತೆ ಎಂದರು.