ಜೈಲಿಂದಲೇ ಫ್ಯಾನ್ಗೆ ಮತ ಹಾಕಿ ಎಂದ ಜನಾರ್ದನ
ಶನಿವಾರ ಪರಪ್ಪನ ಅಗ್ರಹಾರ ಕಾರಾಗೃಹದಿಂದ ಆಂಧ್ರಪ್ರದೇಶದ ಚಂಚಲಗೂಡ ಜೈಲಿಗೆ ಜನಾರ್ದನ ರೆಡ್ಡಿ ಅವರನ್ನು ಕರೆದುಕೊಂಡು ಹೋಗಲಾಯಿತು. ಪರಪ್ಪನ ಅಗ್ರಹಾರ ಜೈಲಿನ ಮುಂಭಾಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರೆಡ್ಡಿ, ಬಿಎಸ್ಆರ್ ಪಕ್ಷದ ಫ್ಯಾನ್ ಗುರುತಿಗೆ ಮತ ನೀಡಿ ಎಂದು ರಾಜ್ಯದ ಜನರಿಗೆ ಮನವಿ ಮಾಡಿದರು.
ಕೇವಲ ಎರಡು ನಿಮಿಷ ಮಾತ್ರ ರೆಡ್ಡಿಗೆ ಮಾತನಾಡಲು ಪೊಲೀಸರು ಅವಕಾಶ ನೀಡಿದ್ದರು. ಅದನ್ನು ಶ್ರೀರಾಮುವಿಗಾಗಿ ಮೀಸಲಿಟ್ಟ ರೆಡ್ಡಿ ಚುನಾವಣೆ ಪ್ರಚಾರ ಮಾಡಿದರು. ಎರಡು ನಿಮಿಷಗಳ ನಂತರ ಮುಂದಿನ ಮಾತುಗಳಿಗೆ ಅವಕಾಶ ನೀಡದೆ ಪೊಲೀಸರು ಅವರನ್ನು ಕರೆದುಕೊಂಡು ಹೋದರು. ಈ ಮೂಲಕ ರೆಡ್ಡಿ ಬಿಎಸ್ಆರ್ ಪಕ್ಷದ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿದರೂ ಎಂದರೂ ತಪ್ಪಿಲ್ಲ.
ಮುನವೊಲಿಕೆ ವಿಫಲ : ಶನಿವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು. ರಾಜ್ಯಾದ್ಯಂತ ಕಾಂಗ್ರೆಸ್ ನಿಂದ ಸುಮಾರು ಹದಿನೈದು ಮಂದಿ ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದರು.
ಆದರೆ, ಬೆಂಗಳೂರಿನ ಬಸವನಗುಡಿ ಕ್ಷೇತ್ರದ ಬಂಡಾಯ ಅಭ್ಯರ್ಥಿ ಕೆ.ಚಂದ್ರಶೇಖರ್ ಮನವೊಲಿಸಲು ಮಾತ್ರ ಸಫಲವಾಗಿರುವ ಕಾಂಗ್ರೆಸ್ ಕೊನೆಯ ಕ್ಷಣದಲ್ಲಿ ಅವರಿಂದ ನಾಮಪತ್ರ ಹಿಂಪಡೆಯುವಂತೆ ಮಾಡಿ ನಿಟ್ಟುಸಿರು ಬಿಟ್ಟಿದೆ. ಉಳಿದ ಕ್ಷೇತ್ರಗಳ ಬಂಡಾಯದ ಬಿಸಿಗೆ ನೀರು ಸುರಿಯುವ ಪ್ರಯತ್ನ ವಿಫಲವಾಗಿದೆ.(ಕೆ.ಚಂದ್ರಶೇಖರ್ ಯು ಟರ್ನ್ )
ಕೆಜೆಪಿಯೊಂದಿಗೆ ಸಂಗಮ : ಭದ್ರಾವತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಬಿ.ಕೆ.ಸಂಗಮೇಶ್ ಅವರಿಗೆ ಬೆಂಬಲ ನೀಡಿರುವ ಕೆಜೆಪಿ ಅಭ್ಯರ್ಥಿ ಕದಿರೇಶ್ ನಾಮಪತ್ರ ಹಿಂಪಡೆದಿದ್ದಾರೆ. ಈ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಸಿ.ಎಂ.ಇಬ್ರಾಹಿಂಗೆ ಮತ್ತಷ್ಟು ಸಂಕಟ ತಂದೊಡ್ಡಿದ್ದಾರೆ. (ಸಂಗಮೇಶ್ ಕೈ ಹಿಡಿದ ಯಡಿಯೂರಪ್ಪ )
ಮಂಡ್ಯದಲ್ಲಿ ಕೃಷ್ಣ ಜಪ : ಮಂಡ್ಯ ಕಾಂಗ್ರೆಸ್ ನಲ್ಲಿನ ಬಂಡಾಯದ ಹೊಗೆ ಇನ್ನೂ ದಟ್ಟವಾಗಿದೆ. ಮಂಡ್ಯ, ಶ್ರೀರಂಗ ಪಟ್ಟಣ ಎರಡು ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದ ರವೀಂದ್ರ ಶ್ರೀಕಂಠಯ್ಯ ಮಂಡ್ಯ ಕ್ಷೇತ್ರದ ನಾಮಪತ್ರ ಹಿಂಪಡೆದಿದ್ದಾರೆ. ಶ್ರೀರಂಗಪಟ್ಟಣ ಕ್ಷೇತ್ರದಿಂದ ಮಾತ್ರ ಸ್ಪರ್ಧಿಸಲಿದ್ದಾರೆ. ( ಮಂಡ್ಯದಲ್ಲಿ ಕೃಷ್ಣ ಕೃಷ್ಣಾ ಏನಿದು ಬಂಡಾಯ?)
ಯಡಿಯೂರಪ್ಪಗೆ ಟಾಂಗ್ : ನವರಸ ನಾಯಕ, ಬಿಜೆಪಿ ಮುಖಂಡ ಜಗ್ಗೇಶ್ ಕೆಜೆಪಿ ಅಧ್ಯಕ್ಷ ಯಡಿಯೂರಪ್ಪ ಅವರಿಗೆ ಟಾಂಗ್ ನೀಡಿದ್ದಾರೆ.ಮೈಸೂರಿನಲ್ಲಿ ಶನಿವಾರ ಮಾತನಾಡಿದ ಅವರು, ಮುಖ್ಯಮಂತ್ರಿ ಆಗಿದ್ದಾಗ ಅವರು ಮಾಡಿದ ಭ್ರಷ್ಟಾಚಾರಗಳು ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದವು. ಸದಾನಂದ ಗೌಡರು ಮತ್ತು ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಆದ ನಂತರ ಪಕ್ಷಕ್ಕೆ ಪುನಃ ವರ್ಚಸ್ಸು ಬಂದಿದೆ. ಯಡಿಯೂರಪ್ಪ ತಾವು ಮಾಡಿದ ತಪ್ಪಿಗೆ ಬಿಜೆಪಿ ದೂರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕೃಷ್ಣ ಪಾಂಚಜನ್ಯ : ವಿಧಾನಸಭೆ ಚುನಾವಣೆ ಪ್ರಚಾರದಿಂದ ಎಸ್.ಎಂ.ಕೃಷ್ಣ ದೂರವುಳಿಯಲಿದ್ದಾರೆ ಎಂಬ ಸುದ್ದಿಗಳಿಗೆ ಬ್ರೇಕ್ ಬಿದ್ದಿದೆ. ಸೋಮವಾರದಿಂದ ಕೃಷ್ಣ ಚುನಾವಣೆ ಪ್ರಚಾರಕ್ಕೆ ಪಾಂಚಜನ್ಯ ಮೊಳಗಿಸಲಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮತಿ ಅಧ್ಯಕ್ಷ ವೀರಣ್ಣ ಮತ್ತೀಕಟ್ಟಿ ಹೇಳಿದ್ದಾರೆ.
ಬಿಎಸ್ಆರ್ ಪ್ರಣಾಳಿಕೆ : ವಿಧಾನಸಭೆ ಚುನಾವಣೆಗೆ ಹಲವಾರು ಭರವಸೆ ಹೊತ್ತ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಪಕ್ಷದ ಅಧ್ಯಕ್ಷ ಬಿ.ಶ್ರೀರಾಮುಲು ಬಿಡುಗಡೆ ಮಾಡಿದ್ದಾರೆ. ಸೋಮವಾರದಿಂದ ಬಹಿರಂಗ ಚುನಾವಣಾ ಪ್ರಚಾರ ಕಾರ್ಯ ಆರಂಭಿಸಲಾಗುವುದು ಎಂದು ಅವರು ಹೇಳಿದ್ದಾರೆ.(ಬಿಎಸ್ಆರ್ ಪ್ರಣಾಳಿಕೆಯಲ್ಲಿ ಏನಿದೆ)
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ