ಭದ್ರಾವತಿ : ಸಂಗಮೇಶ್ ಕೈ ಹಿಡಿದ ಯಡಿಯೂರಪ್ಪ
ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಶನಿವಾರ ಕೆಜೆಪಿ ಅಭ್ಯರ್ಥಿ ಕದಿರೇಶ್ ಚುನಾವಣಾಧಿಕಾರಿಗಳ ಕಚೇರಿಗೆ ತೆರಳಿ ನಾಮಪತ್ರ ಹಿಂಪಡೆದಿದ್ದಾರೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಸಂಗಮೇಶ್ ಗೆ ಬೆಂಬಲ ನೀಡುವುದಾಗಿ ಘೋಸಿದ್ದು, ತಿಕ್ರೋನ ಸ್ಪರ್ಧೆಗೆ ಭದ್ರಾವತಿ ಸಜ್ಜಾಗಿದೆ.
ಅಂತಿಮವಾಗಿ ಕೈ ಪಾಳಯದ ಬಂಡಾಯ ಅಭ್ಯರ್ಥಿ ಸಂಗಮೇಶ್, ಕಾಂಗ್ರೆಸ್ ನ ಸಿ.ಎಂ.ಇಬ್ರಾಹಿಂ ಮತ್ತು ಜೆಡಿಎಸ್ ನ ಅಪ್ಪಾಜಿ ಗೌಡ ನಡುವೆ ಪ್ರಬಲ ಸ್ಪರ್ಧೆ ಖಾತ್ರಿಯಾಗಿದೆ. ಬಿಜೆಪಿ ಅಭ್ಯರ್ಥಿಎಸ್. ಬಿ. ಶಿವಾಜಿ ರಾವ್ ಸಿಂಧಿಯಾ ಆಟಕ್ಕೂಂಟು ಲೆಕ್ಕಕ್ಕಿಲ್ಲ ಎಂಬ ಪರಿಸ್ಥಿತಿಯಲ್ಲಿದ್ದಾರೆ.
ಕಾಂಗ್ರೆಸ್ ಅಂತಿಮ ಪಟ್ಟಿಯಲ್ಲಿ ಟಿಕೆಟ್ ಕೈ ತಪ್ಪಿದ ನಂತರ ಸಂಗಮೇಶ್ ಸಿಡಿದೆದ್ದಿದ್ದರು. ಕೆಜೆಪಿ ಸೇರುತ್ತಾರೆ ಎಂಬ ಮಾತುಗಳು ಹರಿದಾಡುತ್ತಿದ್ದರೂ, ಕೊನೆಗೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಧುಮುಕಿದ್ದರು. ಸರಿಯಾದ ದಾಳ ಹೂಡಿದ ಯಡಿಯೂರಪ್ಪ ಸಂಗಮೇಶ್ ಗೆ ಬೆಂಬಲ ಸೂಚಿಸಿ, ಪಕ್ಷದ ಅಭ್ಯರ್ಥಿಯ ನಾಮಪತ್ರ ವಾಪಸ್ ಪಡೆದಿದ್ದಾರೆ.
ಇಬ್ರಾಹಿಂ ಗೆಲ್ಲುತ್ತಾರಾ : ಭದ್ರಾವತಿ ಪಕ್ಷ ರಾಜಕಾರಣಕ್ಕೆ ಮಣೆ ಹಾಕುವುದಿಲ್ಲ ಎಂಬುದು ಸ್ಪಷ್ಟ. ಅಪ್ಪಾಜಿ ಗೌಡ ಅಥವ ಸಂಗಮೇಶ್ ನಿರಂತವಾಗಿ ಗೆಲುವು ಸಾಧಿಸುತ್ತಾ ಬಂದ ಕ್ಷೇತ್ರವಿದು. ಪಕ್ಷೇತರರಾಗಿ ಗೆಲುವು ಸಾಧಿಸಿ ಕಾಂಗ್ರೆಸ್ ಸೇರಿದ್ದ ಇಬ್ಬರೂ ಈಗ ಕಾಂಗ್ರೆಸ್ ತೊರೆದಿದ್ದಾರೆ. ಇಂತಹ ಕ್ಷೇತ್ರಕ್ಕೆ ಇಬ್ರಾಹಿಂ ಬಂದು ಕೂತಿದ್ದಾರೆ.
ಇಬ್ರಾಹಿಂ ಸ್ಥಳೀಯರಾದರೂ ಅವರ ಕುಟುಂಬ ಭದ್ರಾವತಿ ತೊರೆದು ವರ್ಷಗಳೇ ಕಳೆದಿವೆ. ಇಬ್ರಾಹಿಂ ಸಹೋದರರು ಮಾಡಿದ ಅವಾಂತರಗಳು ತಾಲೂಕಿನಲ್ಲಿ ಅವರ ಹೆಸರಿಗೆ ಮಸಿ ಬಳಿದಿದೆ. ಸಾಧಿಕ್, ಖಾದರ್, ರೆಹಮಾನ್ ಮೂವರು ತಾಲೂಕಿನಲ್ಲಿ ಅವಾಂತರ ಮಾಡಿಕೊಂಡು ಠಾಣೆಯ ಮೆಟ್ಟಿಲೇರಿ ಹೆಸರು ಕೆಡಿಸಿ ಕೊಂಡಿದ್ದಾರೆ.
ಭದ್ರಾವತಿಯಲ್ಲಿ ಸುಮಾರು 40 ಸಾವಿರ ಮುಸ್ಲಿಂಮತಗಳಿವೆ ಇವುಗಳನ್ನೇ ನೆಚ್ಚಿಕೊಂಡು ಕೂತರೆ ಇಬ್ರಾಹಿಂ ವಿಧಾನಸಭೆ ಮೆಟ್ಟಿಲೇರುವುದು ಅಸಾಧ್ಯ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ನಗರ ಸಭೆ ಜೆಡಿಎಸ್ ತೆಕ್ಕೆಗೆ ಸೇರಿದೆ. ಆದ್ದರಿಂದ ತಾಲೂಕಿನಲ್ಲಿ ಕಾಂಗ್ರೆಸ್ ಹಿಡಿತ ಕಳೆದುಕೊಂಡಿರುವುದು ಸ್ಪಷ್ಟ.
ಇಬ್ರಾಹಿಂ ಸೋತರೆ ಮೊದಲ ಹಿನ್ನಡೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ, ತಮ್ಮ ಪರಮಾಪ್ತರಾಗಿರುವ ಇಬ್ರಾಹಿಂಗೆ ಟಿಕೆಟ್ ಕೊಡಿಸಿದ್ದು ನಾನೇ ಎಂದು ಸಿದ್ದು ಹೇಳಿಕೊಂಡಿದ್ದಾರೆ. ಕೊನೆ ಕ್ಷಣದಲ್ಲಿ ಅಭ್ಯರ್ಥಿ ನಾಮಪತ್ರ ಹಿಂಪಡೆದು ಕೆಜೆಪಿ ಇಬ್ರಾಹಿಂಗೆ ಮತ್ತಷ್ಟು ಸಂಕಟ ತಂದೊಡ್ಡಿದೆ. ಯಾರಿಗೆ ಗೆಲುವು ಎಂಬುದು ಮೇ ರಂದು ತಿಳಿಯಲಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ