ಲೋಕಾಯುಕ್ತ ನೇಮಿಸಿ, ಇಲ್ಲಾಂದ್ರೆ ಸಾಂವಿಧಾನಿಕ ಇಕ್ಕಟ್ಟು

ಸುಪ್ರೀಂ ನೆಪ, ಹೈ ತರಾಟೆ: 'ಲೋಕಾಯುಕ್ತರನ್ನು ನೇಮಿಸಬೇಕು ಅಂತ ನಮಗೂ ಮಹದಾಸೆಯಿದೆ. ಆದರೆ ಕಳಂಕರಹಿತ ನ್ಯಾಯಮೂರ್ತಿಗಳೇ ಸಿಗುತ್ತಿಲ್ಲ, ಮಹಾಸ್ವಾಮಿ' ಎಂದೇ ಕಾಲ ತಳ್ಳಿದ ಸದಾನಂದ ಗೌಡರ ನಿರ್ಗಮನದ ಬಳಿಕ, ಜಗದೀಶ್ ಶೆಟ್ಟರ್ ನೇತೃತ್ವದ ನೂತನ ಸರಕಾರ ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತದೋ ಕಾದುನೋಡಬೇಕಿದೆ.
ಲೋಕಾಯುಕ್ತ ನೇಮಕಾತಿಯು ವಿಳಂಬವಾಗುತ್ತಿದೆ ಎಂದು ಚಿಕ್ಕಮಗಳೂರಿನ ತರೀಕೆರೆಯ ಎಚ್.ಎಸ್. ನೀಲಕಂಠ ಎಂಬವರು ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೇನ್ ಹಾಗೂ ನ್ಯಾ. ಅರವಿಂದ್ ಕುಮಾರ್ ಅವರ ದ್ವಿಸದಸ್ಯ ಪೀಠವು ಕಳೆದ ಹತ್ತು ತಿಂಗಳಿನಿಂದ ಲೋಕಾಯುಕ್ತ ನೇಮಕ ಮಾಡದಿರಲು ಕಾರಣವೇನು ಎಂಬುದಕ್ಕೆ ಒಂದು ವಾರದಲ್ಲಿ ಸ್ಪಷ್ಟಣೆ ನೀಡಬೇಕು ಎಂದು ಮುಖ್ಯಮಂತ್ರಿ ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದೆ. ಹಾಗೆಯೇ, ವಿಚಾರಣೆಯನ್ನು ಜುಲೈ 23ಕ್ಕೆ ಮುಂದೂಡಿದೆ.
ಲೋಕಾಯುಕ್ತ ನೇಮಕ ವಿಷಯ ಕುರಿತು ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ದಾಖಲಿಸಲಾಗಿದ್ದು, ಅಂತಿಮ ತೀರ್ಪು ಹೊರಬಂದ ನಂತರ ಲೋಕಾಯುಕ್ತರ ಸ್ಥಾನ ಭರ್ತಿ ಬಗ್ಗೆ ಸೂಕ್ತ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಸರ್ಕಾರಿ ವಕೀಲರು ವಿಚಾರಣೆ ಸಂದರ್ಭದಲ್ಲಿ ಸಮಜಾಯಿಷಿ ನೀಡಲು ಮುಂದಾದರು. ಮೊನ್ನೆ ಮೊನ್ನೆ ಕಾನೂನು ಸಚಿವ ಸುರೇಶ್ ಕುಮಾರ್ ಸಹ ಸುಪ್ರೀಂ ನೆಪವನ್ನು ಮುಂದೊಡ್ಡಿ, ಕೋರ್ಟ್ guidelines ಹೊರಬಂದ ನಂತರ ಲೋಕಾಯುಕ್ತ ನೇಮಕ ಮಾಡುತ್ತೇವೆ ಎಂದು ಕೈತೊಳೆದುಕೊಂಡಿದ್ದರು.
ಅದಕ್ಕೆ ಕಡುಕೋಪ ತೋರಿದ ಮುಖ್ಯ ನ್ಯಾಯಮೂರ್ತಿಗಳು, ಉಪ ಲೋಕಾಯುಕ್ತ ನೇಮಕ ಕುರಿತು ಹೈಕೋರ್ಟ್ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದೆ. ಆದರೆ, ಲೋಕಾಯುಕ್ತ ನೇಮಕ ಮಾಡುವುದಕ್ಕೆ ಯಾವ ಸಮಸ್ಯೆಯಿದೆ. ಆಗೊಮ್ಮೆ ಲೋಕಾಯುಕ್ತರ ನೇಮಕ ಮಾಡಲು ವಿಫಲವಾದಲ್ಲಿ ರಾಜ್ಯ ಸರ್ಕಾರ ತೀವ್ರ ತೊಂದರೆಗೆ ಸಿಲುಕಲಿದೆ. ಹೀಗಾಗಿ, ಲೋಕಾಯುಕ್ತರ ನೇಮಕಕ್ಕೆ ಸೂಕ್ತ ಕ್ರಮಗಳನ್ನು ಅನುಸರಿಸಬೇಕು ಎಂದು ತಾಕೀತು ಮಾಡಿತು.
ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು 2011ರಲ್ಲಿ ಲೋಕಾಯುಕ್ತ ಸ್ಥಾನದಿಂದ ನಿವೃತ್ತಿಯಾದ ಬಳಿಕ ನ್ಯಾ. ಶಿವರಾಜ್ ಪಾಟೀಲ್ ಅವರನ್ನು ನೇಮಕ ಮಾಡಲಾಗಿತ್ತು. ಆದರೆ, ಅವರ ವಿರುದ್ಧ ಅಕ್ರಮ ನಿವೇಶನ ಪಡೆದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅವರು ಕಳೆದ ಸೆಪ್ಟಂಬರ್ 19ರಂದು ರಾಜೀನಾಮೆ ನೀಡಿದರು. ಆನಂತರ ಸದಾನಂದರು ಎಸ್ಆರ್ ಬನ್ನೂರುಮಠರ ಹೆಸರನ್ನು ಲೋಕಾಯುಕ್ತ ಪೀಠಕ್ಕೆ ಪ್ರಸ್ತಾಪಿಸಿದರು.
ನ್ಯಾ ಸಂತೋಷ್ ಹೆಗ್ಡೆ ಅವರು ಬಿಟ್ಟುಹೋಗಿರುವ ಸ್ಥಾನವನ್ನು ತುಂಬಲು 'ಕಳಂಕರಹಿತ, ಪ್ರಾಮಾಣಿಕರೇ ಬೇಕು' ಎಂದು ಪಟ್ಟು ಹಿಡಿದ ರಾಜ್ಯಪಾಲ ಭಾರದ್ವಾಜ್ ಅವರು ಬನ್ನೂರುಮಠ ನೇಮಕಕ್ಕೆ ಕೊಕ್ಕೆ ಹಾಕಿದರು. ಕಾಲಾಂತರದಲ್ಲಿ ಸ್ವತಃ ಬನ್ನೂರುಮಠರೇ ಕಳೆದ ಫೆಬ್ರವರಿಯಲ್ಲಿ ಹಿಂದೆಸರಿದರು.












Click it and Unblock the Notifications