ಬಿಜೆಪಿಯಲ್ಲಿ ಸತ್ಯ ಹೇಳುವುದೇ ಅಶಿಸ್ತು:ಶೌರಿ
ನವದೆಹಲಿ, ಆ.25: ಭಾರತೀಯ ಜನತಾ ಪಕ್ಷದಲ್ಲಿ ಇಂದು ಸತ್ಯ ಹೇಳುವುದು ಕಷ್ಟವಾಗಿದೆ. ಸತ್ಯ ಹೇಳಿ ಇರುವ ಹುಳುಕನ್ನು ಎತ್ತಿ ತೋರಿಸಿದರೆ ಅಶಿಸ್ತು ಎಂದು ಪಕ್ಷದಿಂದ ಹೊರಗಿಡುವ ಹುನ್ನಾರ ನಡೆದಿದೆ. ಬಿಜೆಪಿ ಅಧೋಗತಿಯ ಹಾದಿ ಹಿಡಿದಿದೆ.ರಾಜ್ ನಾಥ್ ಅವರ ನಾಯಕತ್ವ ಪ್ರಶ್ನಾರ್ಹ ಎಂದು ಅರುಣ್ ಶೌರಿ ಎನ್ ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಬಿಜೆಪಿ ರಾಷ್ಟೀಯ ಘಟಕದಲ್ಲಿ ಬಿಕ್ಕಟ್ಟು ಇರುವುದು ಸತ್ಯ. ಅರುಣ್ ಶೌರಿ ಹೊಸದಾಗಿ ಏನನ್ನೂ ಹೇಳಿಲ್ಲ ಎಂದು ಆರೆಸ್ಸೆಸ್ ವಕ್ತಾರವಕ್ತಾರ ರಾಮ್ ಮಾಧವ್ ಪ್ರತಿಕ್ರಿಯೆ ನೀಡಿದ್ದಾರೆ.ಬಿಜೆಪಿ ಸಲಹೆ ಕೇಳಿದರೆ ನೀಡಲು ಸಿದ್ಧ ಎಂದು ಅರೆಸ್ಸೆಸ್ ಮುಖಂಡ ಮೋಹನ್ ಭಾಗವತ್ ಹೇಳಿದ್ದಾರೆ. ಅವರು ಇಂದು ಬಿಜೆಪಿ ರಾಷ್ಟ್ರೀಯ ಘಟಕದಲ್ಲಿ ಉನ್ನತ ಮಟ್ಟದ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಸೂತ್ರ ಹರಿದ ಗಾಳಿಪಟವಾಗಿರುವ ಪಕ್ಷವನ್ನು ಸರಿ ದಾರಿಗೆ ತರುವ ನಾಯಕರು ಕಾಣುತ್ತಿಲ್ಲ ಎಂದು ವ್ಯಂಗ್ಯವಾಡಿರುವ ಅರುಣ್ ಶೌರಿ, ಬಿಜೆಪಿಯೊಳಗೆ ಕೆಲವು ಜನರು ಅಡ್ವಾಣಿ ಸೇರಿದಂತೆ ನಮ್ಮೆಲ್ಲರ ಬಗ್ಗ್ಗೆ ಇಲ್ಲಸಲ್ಲದ ಕತೆ ಕಟ್ಟುತ್ತಿದ್ದಾರೆ. ಸಮಸ್ಯೆಗಳ ಬಗ್ಗೆ ಚರ್ಚಿಸಿದರೆ ಬಂಡಾಯ, ಭಿನ್ನಮತ ಎಂಬ ಲೇಬಲ್ ಅಂಟಿಸಿ ಪಕ್ಷದ ಚಟುವಟಿಕೆಗಳಿಂದ ದೂರವಿರಿಸಲಾಗುತ್ತಿದೆ ಎಂದಿದ್ದಾರೆ.ಈ ಮಧ್ಯೆ ಪಕ್ಷದಿಂದ ಉಚ್ಚಾಟಿತ ನಾಯಕ ಜಸ್ವಂತ್ ಸಿಂಗ್ ಅವರ ಹಾದಿಯನ್ನು ಸುಧೀಂದ್ರ ಕುಲಕರ್ಣಿ ಹಿಡಿದಿದ್ದಾರೆ. ವಾಜಪೇಯಿ ಹಾಗೂ ಎಲ್ ಕೆಅಡ್ವಾಣಿ ಅವರಿಗೆ ಸಲಹೆಗಾರರಾಗಿ ಕುಲಕರ್ಣಿ ಕಾರ್ಯ ನಿರ್ವಹಿಸುತ್ತಿದ್ದರು.
(ದಟ್ಸ್ ಕನ್ನ್ನಡವಾರ್ತೆ)