ಉತ್ತಮ ಮಳೆಯಾದರೆ ಲೋಡ್ ಶೆಡ್ಡಿಂಗ್ ರದ್ದು
ಬೆಂಗಳೂರು, ಜು.7: ರಾಜ್ಯದಲ್ಲಿ ಉತ್ತಮ ಮಳೆಯಾದರೆ ಅನಿಯಮಿತ ಲೋಡ್ ಶೆಡ್ಡಿಂಗ್ ರದ್ದು ಪಡಿಸುವುದಾಗಿ ಇಂಧನ ಸಚಿವ ಕೆ ಎಸ ಈಶ್ವರಪ್ಪ ತಿಳಿಸಿದ್ದಾರೆ. ಕಳೆದ ಐದು ದಿನಗಳಿಂದ ದಾಖಲೆ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು ಕೃಷಿ ಪಂಪ್ ಸೆಟ್ ಗಳ ಬೇಡಿಕೆ ಕಡಿಮೆಯಾಗಿದ್ದು ರೈತರು ಸಂತಸದಿಂದಿದ್ದಾರೆ ಎಂದು ಹೇಳಿದ್ದಾರೆ.
ಪ್ರತಿನಿತ್ಯ 90 ದಶಲಕ್ಷ ಯುನಿಟ್ ವಿದ್ಯುತ್ ಬೇಡಿಕೆ ಇದ್ದು, ಉತ್ಪಾದನೆಯೂ ಅಷ್ಟೇ ಆಗುತ್ತಿದೆ. ಹೀಗಾಗಿ ಪ್ರಸ್ತುತ ಅಧಿಕೃತ ಲೋಡ್ ಶೆಡ್ಡಿಂಗ್ ಜಾರಿಯಲಿಲ್ಲ. ಅನಿಯಮಿತ ಲೋಡ್ ಶೆಡ್ಡಿಂಗ್ ಮುಂದುವರಿಯಲಿದೆ. ಕೈಗಾರಿಕೆಗಳ ವಿದ್ಯುತ್ ಬೇಡಿಕೆ ಸಮಸ್ಯೆ ನಿವಾರಿಸಲು ಇಂಧನ ಹಾಗು ಕೈಗಾರಿಕೆ ಇಲಾಖೆ ಅಧಿಕಾರಿಗಳ ಸಭೆ ಕರೆದು ತೀರ್ಮಾನ ಕೈಗೊಳ್ಳಲಾಗುವುದು. ಇದೇ ರೀತಿ ಎಲ್ಲಾ ಕ್ಷೇತ್ರಗಳ ಸಭೆ ಕರೆದು ಸಮಸ್ಯೆ ಪರಿಹರಿಸಲಾಗುವುದು ಎಂದು ಹೇಳಿಕೆ ನೀಡಿದ್ದಾರೆ.
ಅನುಮತಿ ಪಡೆದು ವಿದ್ಯುತ್ ಉತ್ಪಾದಿಸದೇ ಇದ್ದ ಹಲವು ಕಂಪೆನಿಗಳಿಗೆ ನೋಟೀಸ್ ಜಾರಿ ಮಾಡಲಾಗಿದ್ದು ಕೆಲವು ಕಂಪೆನಿಗಳು ವಾಪಾಸ್ ಮಾಡಿದ್ದಾರೆ. ಇನ್ನು ಕೆಲವು ಕಂಪೆನಿಗಳ ಅನುಮತಿಯನ್ನು ಸರಕಾರವೇ ರದ್ದು ಪಡಿಸಿದೆ. ಕೇಂದ್ರ ಸರಕಾರ ನಿಡುವ ರಾಜ್ಯದ ಪಾಲಿನ ವಿದ್ಯುತ್ ಪ್ರಮಾಣವನ್ನು 2500 ಮೆಗಾವ್ಯಾಟ್ ಗೆ ಹೆಚ್ಚಿಸುವಂತೆ ಹಾಗೂ ಈಗಾಗಲೇ ಹಂಚಿಕೆಯಾಗಿರುವ ವಿದ್ಯುತ್ ಅನ್ನು ಪೂರ್ಣ ಪ್ರಮಾಣದಲ್ಲಿ ನೀಡುವಂತೆ ಮನವಿ ಮಾಡಲಾಗಿದೆ ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)