ಜನವರಿ 2016ರಿಂದ ಲೋಡ್ ಶೆಡ್ಡಿಂಗ್ ಇಲ್ಲ: ಡಿಕೆಶಿ
ಬೆಂಗಳೂರು, ನ.05: ವಿದ್ಯಾರ್ಥಿಗಳಿಗೆ ನೆರವಾಗುವ ಹಿತದೃಷ್ಟಿಯಿಂದ ಜನವರಿ 2016ರಿಂದ ರಾಜ್ಯದೆಲ್ಲೆಡೆ ವಿದ್ಯುತ್ ಲೋಡ್ ಶೆಡ್ಡಿಂಗ್ ಅನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುವುದು ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಅವರು ಘೋಷಿಸಿದ್ದಾರೆ. ಅದರೆ, ಪೀಕ್ ಹವರ್ ಬಿಟ್ಟು ಉಳಿದ ಸಮಯದಲ್ಲಿ ಲೋಡ್ ಶೆಡ್ಡಿಂಗ್ ಎಂದಿನಂತೆ ಜಾರಿಯಲ್ಲಿರುತ್ತದೆ.
ಬುಧವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬೆಸ್ಕಾಂ ವ್ಯಾಪ್ತಿಯ ಜಿಲ್ಲೆಗಳ ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಲಾಶಯಗಳಲ್ಲಿ ನೀರಿನ ಕೊರತೆಯಿದ್ದು ಇನ್ನೂ 2 ತಿಂಗಳು ವಿದ್ಯುತ್ ಕಡಿತ ಮುಂದುವರಿಯಲಿದೆ ಎಂದು ಹೇಳಿದರು.['ಕತ್ತಲೆ ಭಾಗ್ಯ' ಯೋಜನೆಯ ಪ್ರಯೋಜನಗಳು]
'ಎಸ್ಕಾಂ' ಮಾದರಿಯಲ್ಲೇ 'ಬೆಸ್ಕಾಂ' ವ್ಯಾಪ್ತಿಯ ಜಿಲ್ಲೆಗಳ ರೈತರ ಪಂಪ್ಸೆಟ್ಗಳಿಗೆ ದಿನ ಬಿಟ್ಟು ದಿನ 7 ಗಂಟೆಗಳ ಕಾಲ 'ತ್ರೀ ಫೇಸ್' ವಿದ್ಯುತ್ ನೀಡಲು ಉದ್ದೇಶಿಸಿದ್ದು, ತಜ್ಞರ ಪರಿಶೀಲನೆ ಬಳಿಕ ಸಮಯ ನಿಗದಿಪಡಿಸಲಾಗುವುದು ಎಂದರು. 1,800 ಮೆ.ವ್ಯಾ. ವಿದ್ಯುತ್ ಕೊರತೆ ಇದೆ. ಈ ಪರಿಸ್ಥಿತಿಯನ್ನು ನಿಭಾಯಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
'ಸೋಲಾರ್' ಟೆಂಡರ್: ರಾಜ್ಯದಲ್ಲಿ 500 ಮೆ.ವ್ಯಾ.ಸೋಲಾರ್ ವಿದ್ಯುತ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು 50 ತಾಲೂಕುಗಳನ್ನು ಗುರುತಿಸಲಾಗಿದೆ. 10ರಿಂದ 20 ಮೆ.ವ್ಯಾ ವಿದ್ಯುತ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದೆಂದು ಶಿವಕುಮಾರ್ ತಿಳಿಸಿದರು.

ಜಲಾಶಯಗಳಲ್ಲಿ ಶೇ.60ರಷ್ಟು ನೀರಿನ ಕೊರತೆ ಯಿದೆ
ಬರ ಪರಿಸ್ಥಿತಿ, ಹಿಂಗಾರು ಮಳೆ ಕೊರತೆಯಿಂದ ರಾಜ್ಯದ ಜಲಾಶಯಗಳಲ್ಲಿ ಶೇ.60ರಷ್ಟು ನೀರಿನ ಕೊರತೆ ಯಿದೆ. ಮುಂಬರುವ ಸಂಕಷ್ಟದ ಪರಿಸ್ಥಿತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜಲಾಶಯಗಳಲ್ಲಿ ನೀರಿನ ಶೇಖರಣೆ ಮಾಡಿಕೊಳ್ಳಲಾಗಿದೆ ಎಂದ ಸಚಿವರು, ಜನವರಿಯಿಂದ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ಸಚಿವ ಶಿವಕುಮಾರ್ ಹೇಳಿದರು.

ಸೋಲಾರ್ ವಿದ್ಯುತ್ ಉತ್ಪಾದನಾ ಘಟಕ
ರಾಜ್ಯ ಸರಕಾರ ಜಾರಿಗೆ ತಂದಿರುವ ಸೋಲಾರ್ ನೀತಿಯನ್ವಯ ಈಗಾಗಲೇ ಬಳ್ಳಾರಿ, ಚಳ್ಳಕೆರೆ, ಪಾವಗಡ, ಚಿಕ್ಕನಾಯಕನಹಳ್ಳಿ ತಾಲೂಕುಗಳನ್ನು ಹೊರತುಪಡಿಸಿ ಉಳಿದ ಬಯಲುಸೀಮೆಯಲ್ಲಿ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಅನುಮತಿ ನೀಡಲಾಗುವುದು.ಶೀಘ್ರದಲ್ಲೇ ಈ ಬಗ್ಗೆ ಟೆಂಡರ್ ಕರೆಯಲಾಗುವುದೆಂದು ಶಿವಕುಮಾರ್ ಹೇಳಿದರು.

ವಿದ್ಯುತ್ ಖರೀದಿ ಅನಿವಾರ್ಯ
ಹೊರರಾಜ್ಯಗಳಿಂದ ವಿದ್ಯುತ್ ಖರೀದಿಸಲು ಅಲ್ಪಾವಧಿ ಟೆಂಡರ್ ಕರೆಯಲಾಗಿದ್ದು, ರಾಜ್ಯದಲ್ಲಿ ಲೋಡ್ಶೆಡ್ಡಿಂಗ್ ಸ್ಥಗಿತಗೊಳಿಸಲಾಗುವುದು ಎಂದ ಶಿವಕುಮಾರ್, ವಿದ್ಯುತ್ ಮಾರ್ಗದಲ್ಲಿನ ಸಮಸ್ಯೆ ಪರಿಹಾರಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಉತ್ಪಾದನೆಯಲ್ಲಿನ ತಾಂತ್ರಿಕ ಸಮಸ್ಯೆ ಪರಿಹರಿಸಿಕೊಳ್ಳಲು ವಿದ್ಯುತ್ ಖರೀದಿ ಅನಿವಾರ್ಯ ಎಂದರು.

‘ಎಲ್ಇಡಿ’ ಬಲ್ಬ್ಗಳನ್ನು ವಿತರಿಸಲು ಯೋಜನೆ
ವಿದ್ಯುತ್ ಉಳಿತಾಯದ ದೃಷ್ಟಿಯಿಂದ ರಾಜ್ಯಾದ್ಯಂತ ಜನವರಿಯಿಂದ 'ಎಲ್ಇಡಿ' ಬಲ್ಬ್ಗಳನ್ನು ವಿತರಿಸಲು ಉದ್ದೇಶಿಸಲಾಗಿತ್ತು. ಇದೀಗ ಅದಕ್ಕೂ ಮೊದಲೇ ಎಲ್ಇಡಿ ಬಲ್ಬ್ ಗಳನ್ನು ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಹೆಚ್ಚಿನ ವಿದ್ಯುತ್ ಉಳಿತಾಯವಾಗಲಿದೆ.

ವಿದ್ಯುತ್ ಕೊರತೆಗೆ ಕಾರಣ ಏನು?
* ಮುಂಗಾರುಮಳೆ ವಿಫಲ, ಜಲಾಶಯದಲ್ಲಿ ನೀರಿನ ಮಟ್ಟ ಕುಸಿತ.
* ಕಳೆದ ವರ್ಷಕ್ಕೆ ಹೋಲಿಸಿದರೆ ಲಿಂಗನಮಕ್ಕಿ, ಸೂಪ ಹಾಗೂ ಮಾಣಿ ಅಣೆಕಟ್ಟಿನ ನೀರಿನ ಪ್ರಮಾಣ ಶೇ 50ರಷ್ಟು ಇಳಿಕೆ.
* ಮಳೆಗಾಲದಲ್ಲೂ ಹೆಚ್ಚಿದ ಕೃಷಿ ಚಟುವಟಿಕೆ, ಪಂಪ್ ಸೆಟ್ ಗಳಿಗೆ ಬೇಡಿಕೆ.
* ಬೇಸಿಗೆಯಲ್ಲಿ ಜಲವಿದ್ಯುತ್ ಯೋಜನೆ ಸ್ಥಗಿತಗೊಂಡಿರುವುದು.
* ಆರ್ ಟಿಪಿಎಸ್, ಬಿಟಿಪಿಎಸ್ ಹಾಗೂ ಯುಪಿಸಿಎಲ್ ಪದೇ ಪದೇ ಸ್ಥಗಿತಗೊಳ್ಳುತ್ತಿರುವುದರಿಂದ ಉತ್ಪಾದನೆ ಕಡಿಮೆಯಾಗಿದೆ.
* ಕೇಂದ್ರದಿಂದ ಸರಿಯಾಗಿ ಸಬ್ಸಿಡಿ, ಪೂರೈಕೆ ಕಾರಿಡರ್ ನೆರವು ಸಿಗದಿರುವುದು












Click it and Unblock the Notifications