ಹುಬ್ಬಳ್ಳಿಯಲ್ಲಿ ಅನಿಯಮಿತ ಲೋಡ್ ಶೆಡ್ಡಿಂಗ್: ಜನರ ಪರದಾಟ
ಮೊದಲೆ ಹಣವಿಲ್ಲದೆ ಬ್ಯಾಂಕ್ ಗಳಲ್ಲಿ ಹಣ ವಿಮಿಮಯಮಾಡಿಕೊಳ್ಳಲು ಪರದಾಡುತ್ತಿರುವ ಹುಬ್ಬಳ್ಳಿ ಜನರಿಗೆ ವಿದ್ಯುತ್ ವ್ಯತ್ಯಯ ಸಮಸ್ಯೆ ತಲೆನೋವಾಗಿ ಪರಿಣಮಿಸಿದೆ.
ಹುಬ್ಬಳ್ಳಿ, ನವೆಂಬರ್, 16-: ವಾಣಿಜ್ಯ ನಗರ ಎಂದೇ ಖ್ಯಾತಿ ಹೊಂದಿರುವ ಹುಬ್ಬಳ್ಳಿಯಲ್ಲಿ ಪ್ರತಿನಿತ್ಯ ಕನಿಷ್ಠ 3 ರಿಂದ 4ರ ಗಂಟೆ ವಿದ್ಯುತ್ ವ್ಯತ್ಯಯವಾಗುತ್ತಿದ್ದು ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮೊದಲು ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಕುರಿತು ಹೆಸ್ಕಾಂ ಪ್ರಕಟಣೆ ಹೊರಡಿಸುತ್ತಿತ್ತು. ಈಗಾಗಲೇ ನೆಲದಲ್ಲಿ ಕೇಬಲ್ ಹಾಕಿದ್ದನ್ನು ಬದಲಾಯಿಸುವುದಕ್ಕಾಗಿ ವಾರದಲ್ಲಿ ಕೆಲವೊಂದು ಬಡಾವಣೆಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 6 ರವ ರೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತಿದೆ.

ಆದರೆ ಆ ಸಂಬಂಧ ಹೆಸ್ಕಾಂ ಪತ್ರಿಕಾ ಪ್ರಕಟಣೆ ಕೊಟ್ಟು ವಿದ್ಯುತ್ ಕಡಿತದ ಬಗ್ಗೆ ಜನರಿಗೆ ಮಾಹಿತಿ ಕೊಡುತ್ತಿತ್ತು. ಆದರೆ ಕೆಲವೊಂದು ಬಡಾವಣೆಗಳಲ್ಲಿ ಅನಿಯಮಿತವಾಗಿ ವಿದ್ಯುತ್ ಕಡಿತಗೊಳ್ಳುತ್ತಿರುವುದರಿಂದ ಆಸ್ಪತ್ರೆ, ಪೆಟ್ರೋಲ್ ಬಂಕ್, ಬ್ಯಾಂಕ್ ಗಳಲ್ಲಿ ತೀವ್ರ ತೊಂದರೆಯಾಗುತ್ತಿದೆ.
ಬ್ಯಾಂಕ್ ನಲ್ಲಿ ಈಗಾಗಲೇ ನೋಟ್ ಬದಲಾವಣೆ ಮಾಡಲು ನೂರಾರು ಸಂಖ್ಯೆಯಲ್ಲಿ ಜನರು ಬರುತ್ತಿದ್ದಾರೆ. ವಿದ್ಯುತ್ ಕೈಕೊಟ್ಟ ಸಮಯದಲ್ಲಿ ಕಂಪ್ಯೂಟರ್ ಗಳು ಮಾತ್ರ ಕಾರ್ಯ ನಿರ್ವಹಿಸುವುದರಿಂದ ಕೆಲ ಬ್ಯಾಂಕ್ ಗಳಲ್ಲಿ ಹಣ ಬದಲಾವಣೆಗೂ ತೊಂದರೆಯಾಗುತ್ತಿದೆ.
ಇನ್ನು ರಾತ್ರಿ ಹೊತ್ತು ಅಥವಾ ಸಂಜೆ ಇಳಿ ಹೊತ್ತಿನಲ್ಲಿ ಜನರು ರಸ್ತೆಯಲ್ಲಿ ಓಡಾಡುವಾಗ ಒಮ್ಮಿಂದೊಮ್ಮೆಲೆ ಕರೆಂಟ್ ತೆಗೆಯುತ್ತಿರುವುದರಿಂದ ಒಂಟಿ ಮಹಿಳೆಯರು, ವಿದ್ಯಾರ್ಥಿಗಳು, ವೃದ್ಧರು ಭಯ ಬೀಳುತ್ತಿದ್ದಾರೆ.
ಮೊದಲೇ ಸರಗಳ್ಳರ ರಾಜಧಾನಿ ಎನಿಸಿಕೊಂಡ ಹುಬ್ಬಳ್ಳಿಯಲ್ಲಿ ಈ ವಿದ್ಯುತ್ ಯದಿಂದ ಹೊರಗೆ ಬರಬೇಕಾದರೆ ಯಾವಾಗ ಕರೆಂಟ್ ಹೋಗುತ್ತೋ ಎಂಬ ಭಯದಿಂದಲೇ ರಸ್ತೆಗಿಳಿಯುತ್ತಿದ್ದಾರೆ.
ಇನ್ನು ಕೆಲವೊಂದು ಪ್ರದೇಶಗಳಲ್ಲಿ ರಸ್ತೆಗಳು ಸರಿಯಿಲ್ಲ. ಮೇಲಾಗಿ ವಿದ್ಯುತ್ ಕೇಬಲ್ ಅಳವಡಿಸುವ ಸಲುವಾಗಿ ಅಲ್ಲಲ್ಲಿ ತಗ್ಗು ತೋಡಿರುವುದರಿಂದ ಪಾದಚಾರಿಗಳು ಕತ್ತಲೆಯಲ್ಲಿ ಬಿದ್ದು ಆಸ್ಪತ್ರೆಗೆ ಅಲೆದಾಡುವಂತಾಗಿದೆ.
ಈ ಬಗ್ಗೆ ಮಾಹಿತಿ ಕೇಳಿದರೆ ಹೆಸ್ಕಾಂ ಅಧಿಕಾರಿಯೊಬ್ಬರು ನಮಗೂ ಸಮಸ್ಯೆ ಅದಾವ್ರಿ ಅಂತ ಉತ್ತರ ಹೇಳುತ್ತಾರೆ. ವಿದ್ಯುತ್ ಬಿಲ್ ತುಂಬುವುದು ಒಂದು ದಿನ ತಡವಾದರೂ ಮನೆಗೆ ಬಂದು ಮೀಟರ್ ಬಂದ್ ಮಾಡಿ ಹೋಗುತ್ತಾರೆ.
ಮತ್ತೆ ಕರೆಂಟ್ ಬರುವುದು ಬಿಲ್ಲ ತುಂಬಿದ ಮೇಲೆಯೇ ಆವಾಗ ನಮ್ಮ ಸಮಸ್ಯೆ ಯಾಕೆ ಆರ್ಥ ಆಗಲ್ಲ ಎಂದು ಫಕ್ಕೀರಪ್ಪ ಶೆಟ್ಟರ್ ಕಿಡಿ ಕಾರುತ್ತಾರೆ. ಒಟ್ಟಿನಲ್ಲಿ ಹುಬ್ಬಳ್ಳಿ ಜನತೆ ಮೊದಲೇ ನೋಟ್ ಬದಲಾವಣೆಯ ಬಿಸಿಯ ಬವಣೆಯಲ್ಲಿ ಮೈಯೆಲ್ಲಾ ಬೆವರುತ್ತಿದ್ದಾರೆ.
ಕನಿಷ್ಠ ಅವರ ದೇಹ ತಂಪಗೆ ಇಟ್ಟುಕೊಳ್ಳಲು ಫ್ಯಾನ್ ಹಚ್ಚಿಕೊಳ್ಳುವ ಭಾಗ್ಯವನ್ನೂ ಹೆಸ್ಕಾಂನಿಂದ ಕಳೆದುಕೊಂಡಿದ್ದಾರೆ ಎನ್ನಬಹುದು.












Click it and Unblock the Notifications