ಜೆಡಿಎಸ್-3, ಬಿಜೆಪಿ-2 : ರಾಜ್ಯ ಸಚಿವ ಸಂಪುಟ ವಿಸ್ತರಣೆ
ಬೆಂಗಳೂರು : ನಿರೀಕ್ಷೆಯಂತೆಯೇ ರಾಜ್ಯ ಸಚಿವ ಸಂಪುಟವನ್ನು ಕೊನೆಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗುರುವಾರ ವಿಸ್ತರಿಸಿದ್ದಾರೆ.
ರಾಜಭವನದ ಗಾಜಿನಮನೆಯಲ್ಲಿ ಇಂದು ಬೆಳಗ್ಗೆ ನಡೆದ ಸಮಾರಂಭದಲ್ಲಿ ಐವರು ನೂತನ ಸಚಿವರಿಗೆ, ರಾಜ್ಯಪಾಲ ಟಿ.ಎನ್.ಚತುರ್ವೇದಿ ಪ್ರಮಾಣ ವಚನ ಬೋಧಿಸಿದರು.
ಜೆಡಿಎಸ್ನ ಜಿ.ಟಿ.ದೇವೇಗೌಡ, ಎಚ್.ಎಸ್. ಮಹದೇವಪ್ರಸಾದ್, ಆಲಂಗೂರು ಶ್ರೀನಿವಾಸ್, ಬಿಜೆಪಿ ಪಕ್ಷದ ಸೊಗಡು ಶಿವಣ್ಣ ಮತ್ತು ಅಪ್ಪು ಸಾಹೇಬ ಮಲ್ಲಪ್ಪ ಪಟ್ಟಣಶೆಟ್ಟಿ ಸಂಪುಟ ಪ್ರವೇಶಿಸಿದ ನೂತನ ಸಚಿವರು. ಈಗ ಸಚಿವರ ಸಂಖ್ಯೆ 34ತಲುಪಿದೆ. ಆದರೆ ಸಂಪುಟದಲ್ಲಿ ಮಹಿಳೆಯರಿಗೆ ಅವಕಾಶ ನೀಡದಿರುವುದು ಟೀಕೆಗೆ ಕಾರಣವಾಗಿದೆ.
2006ರಲ್ಲಿ ಅಸ್ತಿತ್ವಕ್ಕೆ ಬಂದ ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಸರ್ಕಾರ, ಫೆ.17ರಂದು ಸಚಿವ ಸಂಪುಟ ರಚಿಸಿತ್ತು. ಬಿಜೆಪಿಯ 11ಮತ್ತು ಜೆಡಿಎಸ್ನ 9ಶಾಸಕರು ಆಗ ಸಂಪುಟ ಪ್ರವೇಶಿಸಿದ್ದರು. ಜೂ.21ರಂದು 2ನೇ ಬಾರಿ ಸಂಪುಟ ವಿಸ್ತರಣೆ ನಡೆಯಿತು. ಆ ಸಂದರ್ಭದಲ್ಲಿ ಎಂ.ಪಿ.ಪ್ರಕಾಶ್, ಎಚ್.ಡಿ.ರೇವಣ್ಣ ಸಂಪುಟ ಪ್ರವೇಶಿಸಿದ್ದರು.
(ಯುಎನ್ಐ)