ಆರ್ಥಿಕ ಅಭಿವೃದ್ಧಿಯಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ-ಸಿದ್ದರಾಮಯ್ಯ
ಮೈಸೂರು : ಪ್ರಸ್ತುತ ಕರ್ನಾಟಕ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ. ರಾಜ್ಯದ ಕಂದಾಯ ಸಂಗ್ರಹಣೆ ಶೇ.25 ರಷ್ಟು ಹೆಚ್ಚಿದ್ದ್ದು, ಅಭಿವೃದ್ಧಿಶೀಲ ರಾಜ್ಯಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕೆಡಿಪಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣಕಾಸು ಪತ್ರದಲ್ಲಿ ಶೇ.20ರ ಆರ್ಥಿಕ ಬೆಳವಣಿಗೆಯ ಮೂಲಕ 9,600 ಕೋಟಿ ರೂ.ಸಂಗ್ರಹದ ಗುರಿಯನ್ನು ನಿರೀಕ್ಷಿಸಲಾಗಿತ್ತು. ಅದನ್ನು ಮೀರುವುದು ಖಚಿತ. ದಿನೇದಿನೇ ರಾಜ್ಯದ ಹಣಕಾಸು ಪರಿಸ್ಥಿತಿ ಉತ್ತಮವಾಗುತ್ತಿದೆ ಎಂದರು.
ಆದಾಯ ಸೋರಿಕೆ, ಅನಗತ್ಯ ವೆಚ್ಚಕ್ಕೆ ಕಡಿವಾಣ, ನೂತನ ಅಬಕಾರಿ ನೀತಿಯಿಂದ ಆರ್ಥಿಕ ಬೆಳವಣಿಯ ವೇಗ ಹೆಚ್ಚಿದೆ. ರಾಜ್ಯ ಸರಕಾರಕ್ಕೆ ಹಣದ ಕೊರತೆ ಇಲ್ಲ. ಹೀಗಾಗಿ ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುವುದು. ವಿದೇಶಗಳಲ್ಲಿನ ಎನ್ಆರ್ಐಗಳು ಅದರಲ್ಲೂ ಕನ್ನಡಿಗರು ರಾಜ್ಯದಲ್ಲಿ ಬಂಡವಾಳ ಹೂಡಲು ಮುಂದೆ ಬಂದಿದ್ದಾರೆ ಎಂದರು.
ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಾದರೆ, ಬಂಡವಾಳ ಹೂಡುವುದಾಗಿ ಅರಬ್ ರಾಷ್ಟ್ರಗಳು ತಿಳಿಸಿವೆ. ಈ ಬಗ್ಗೆ ಕೇಂದ್ರದ ಜೊತೆ ಚರ್ಚಿಸಲಾಗುವುದು. ಮೈಸೂರಿನಲ್ಲಿ ವಿಮಾನ ನಿಲ್ಧಾಣಕ್ಕೆ ಕೇದ್ರ ಸಮ್ಮತಿಸಿದೆ. ಮುಂದಿನ ಜನವರಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಪ್ಪಂದಕ್ಕೆ ಸಹಿ ಹಾಕಲಿವೆ ಎಂದು ಸಿದ್ದರಾಮಯ್ಯ ಹೇಳಿದರು.(ಇನ್ಫೋ ವಾರ್ತೆ)