ಗೋಪಾಲ ವಾಜಪೇಯಿ ಕಳಕೊಂಡು ತಬ್ಬಲಿಯಾದೆ ಅನ್ನಿಸ್ತಿದೆ...
ಇದು 1997ರ ಮಾತು. ನಾನು ಆಗಷ್ಟೇ ''ಸಂಯುಕ್ತ ಕರ್ನಾಟಕ'' ಸೇರಿದ್ದೆ. ಪತ್ರಿಕೋದ್ಯಮದ ಎಬಿಸಿಡಿ ಗೊತ್ತಿಲ್ಲದೆ ನಾನು ಕಂಗಾಲಾಗಿದ್ದ ದಿನಗಳವು. ಹಾಗೂ ಹೀಗೂ 20 ದಿನಗಳು ಕಳೆದವು. ಆಗಲೇ ಹಿರಿಯ ಸಾಹಿತಿ ಯಶವ೦ತ ಚಿತ್ತಾಲ ಅವರಿಗೆ 60ನೇ ವರ್ಷದ ಹುಟ್ಟುಹಬ್ಬ ಎಂಬ ಸಂಗತಿ ಗೊತ್ತಾಯಿತು.
''ಚಿತ್ತಾಪಹಾರಿ ಚಿತ್ತಾಲರಿಗೆ ಅರವತ್ತರ ಐಸಿರಿ'ಎಂಬ ಹೆಡ್ಡಿಂಗ್ ಹಾಕಿ ಒಂದು ಲೇಖನ ಸಿದ್ಧಪಡಿಸಿ ಅಂಜುತ್ತಲೇ ಮ್ಯಾಗಝಿನ್ ವಿಭಾಗಕ್ಕೆ ಹೋದೆ. ಅಲ್ಲಿದ್ದ ಆ ಹಿರಿಯರ ಕೈಗೆ ಲೇಖನ ಕೊಟ್ಟೆ. ''ಅರ್ಧ ಗಂಟೆ ಬಿಟ್ಟು ಓದಿ ಹೇಳ್ತೇನೆ, ಆಗಬಹುದೇ?'' ಅಂದರು ಆತ. ಸರಿ ಸರ್ ಎಂದು ಉತ್ತರಿಸಿ ನನ್ನ ಜಾಗಕ್ಕೆ ವಾಪಸಾದೆ.[ನಾಗಮಂಡಲಕ್ಕಾಗಿ ಯಾಜ್ಞಿಕ್ ಆಗಿದ್ದ ಗೋಪಾಲ ವಾಜಪೇಯಿ]

ಇದಾಗಿ 20 ನಿಮಿಷಗಳೂ ಕಳೆದಿಲ್ಲ. ಆ ಹಿರಿಯರು ನೇರವಾಗಿ ನನ್ನಲ್ಲಿಗೆ ಬಂದು- ''ಎಷ್ಟು ಚೆನ್ನಾಗಿ ಬರೆದಿದ್ದೀಯೋ ಹುಡುಗಾ? ನಿನ್ನ ಬರಹ ತುಂಬಾ ತುಂಬಾ ಚೆನ್ನಾಗಿದೆ'' ಅಂದರು. ಕಾಫಿಗೆ ಹೋಗೋಣವಾ ಅಂದು ಕ್ಯಾಂಟೀನ್ ಗೆ ಕರಕೊಂಡು ಹೋಗಿ ಕೇಳಿದರು: "ನನ್ನ ಜೊತೆ ಕಸ್ತೂರಿ-ಕರ್ಮವೀರಕ್ಕೆ ಕೆಲಸ ಮಾಡಲು ಬರ್ತೀಯಾ?''
ನಾನು ಎರಡನೇ ಮಾತಿಲ್ಲದೆ, ಖಂಡಿತ ಬರ್ತೇನೆ ಸರ್ ಅಂದೆ. ಆಗ ಆ ಹಿರಿಯರು ಖುಷಿಯಿಂದ ಹೇಳಿದರು: "ನೋಡೋ,ಇವತ್ತಿಂದ ನೀನು ನನ್ನ ಹುಡುಗ, ನಮ್ಮ ಮನೆ ಹುಡುಗ!'' ಗೋಪಾಲ ವಾಜಪೇಯಿ ಎಂಬ ಹಿರಿಯ ಜೀವ ನನ್ನ ಬಾಳಿಗೆ ಬಂದದ್ದು ಹಾಗೆ.[ನಾಗಮಂಡಲ ಖ್ಯಾತಿಯ ಗೋಪಾಲ ವಾಜಪೇಯಿ ನಿಧನ]
*****
ಮೊನ್ನೆ ಶನಿವಾರವಷ್ಟೇ ಫೇಸ್ ಬುಕ್ ನಲ್ಲಿ ಸಿಕ್ಕಿ- ಮಣೀ, ಕಣ್ಣಿಗೆ ಆಪರೇಷನ್ ಆಗಿದೆ. ಜಾಸ್ತಿ ಹೊತ್ತು ಚಾಟ್ ಮಾಡೋಕೆ ಆಗಲ್ಲ ಕಣೋ. ನೀನು ಮನೆಗೆ ಬಾ. ಇಡೀ ದಿನ ಮಾತಾಡುವಾ ಅಂದಿದ್ದವರು, ರಾಘಣ್ಣ,(ರಾಘವೇಂದ್ರ ಜೋಷಿ) ನಾನು-ನೀನು ಜೊತೆಯಲ್ಲಿ ಊಟಕ್ಕೆ ಹೋಗುವುದು ಬಾಕಿ ಇದೆ ಕಣೋ...ಒಮ್ಮೆ ಜೊತೆ ಸೇರೋಣ ಅಂತ ನೆನಪು ಮಾಡಿದ್ದವರು...
ಈಗ ಸಣ್ಣದೊಂದು ಸುಳಿವನ್ನೂ ಕೊಡದೆ ಹೋಗಿಬಿಟ್ಟಿದ್ದಾರೆ. ಒಂದರ್ಥದಲ್ಲಿ ನಾನು ತಬ್ಬಲಿಯಾದೆ ಅನ್ನಿಸ್ತಾ ಇದೆ...












Click it and Unblock the Notifications